ನವದೆಹಲಿ: ಸಚಿವ ಸಂಪುಟ ಇಂದು ಪಿಎಂ-ವಿದ್ಯಾಲಕ್ಷ್ಮಿ ಯೋಜನೆಗೆ ಅನುಮೋದನೆ ನೀಡಿದೆ. ಇದರ ಅಡಿಯಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ನೀಡಲಾಗುವುದು. ಇದು ಯಾವುದೇ ಪ್ರತಿಭಾವಂತ ವಿದ್ಯಾರ್ಥಿಗೆ ಉತ್ತಮ ಗುಣಮಟ್ಟದ ಉನ್ನತ ಶಿಕ್ಷಣವನ್ನು ಪಡೆಯಲು ಹಣಕಾಸಿನ ನಿರ್ಬಂಧಗಳು ಅಡ್ಡಿಯಾಗದಂತೆ ನೋಡಿಕೊಳ್ಳಲು ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಉನ್ನತ ವ್ಯಾಸಂಗಕ್ಕೆ ಆರ್ಥಿಕ ಸಮಸ್ಯೆಯಿಂದ ಹಿಂಜರಿಯುತ್ತಿರುವ ವಿದ್ಯಾರ್ಥಿಗಳು ಈ ಯೋಜನೆಯ ಸದುಪಯೋಗ ಪಡೆಯಬಹುದು.
ಪ್ರಧಾನ ಮಂತ್ರಿ ವಿದ್ಯಾಲಕ್ಷ್ಮಿ ಯೋಜನೆಯನ್ನು ಸರ್ಕಾರಿ ಪೋರ್ಟಲ್ ಮೂಲಕ ಜಾರಿಗೊಳಿಸಲಾಗುವುದು. ಅದರ ಮೂಲಕ ಗುಣಮಟ್ಟದ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಬ್ಯಾಂಕ್ಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಕೊಲ್ಯಾಟರಲ್ ಇಲ್ಲದೆ, ಗ್ಯಾರಂಟಿದಾರರ ಅಗತ್ಯವಿಲ್ಲದೆ ಸಾಲವನ್ನು ಪಡೆಯಲು ಅರ್ಹರಾಗಿರುತ್ತಾರೆ. ಈ ಸಾಲವು ಪೂರ್ಣ ಪ್ರಮಾಣದ ಬೋಧನಾ ಶುಲ್ಕ ಮತ್ತು ಕೋರ್ಸ್ನ ಇತರ ವೆಚ್ಚಗಳನ್ನು ಒಳಗೊಂಡಿರುತ್ತದೆ.
ಈ ಯೋಜನೆಯು NIRF ಶ್ರೇಯಾಂಕದಲ್ಲಿ ಅಗ್ರ 100ರೊಳಗೆ ಸ್ಥಾನ ಪಡೆದಿರುವ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗುತ್ತದೆ. ಜೊತೆಗೆ NIRFನಲ್ಲಿ 101-200ರಲ್ಲಿ ರಾಜ್ಯ ಸರ್ಕಾರದ HEIಗಳು ಮತ್ತು ಎಲ್ಲಾ ಕೇಂದ್ರ ಸರ್ಕಾರದ ಆಡಳಿತದ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಲು ಇಚ್ಛಿಸುವ ವಿದ್ಯಾರ್ಥಿಗಳಿಗೂ ಇದು ಅನ್ವಯವಾಗಲಿದೆ. ವರ್ಷಕ್ಕೆ 22 ಲಕ್ಷ ವಿದ್ಯಾರ್ಥಿಗಳು ಈ ಯೋಜನೆಯ ಪ್ರಯೋಜನ ಪಡೆಯಬಹುದು.
ವಾರ್ಷಿಕ ಕುಟುಂಬ ಆದಾಯದ 8 ಲಕ್ಷ ರೂ.ವರೆಗಿನ ವಿದ್ಯಾರ್ಥಿಗಳಿಗೆ ಈ ಯೋಜನೆಯು 10 ಲಕ್ಷ ರೂ.ವರೆಗಿನ ಸಾಲದ ಮೇಲೆ 3% ಬಡ್ಡಿ ರಿಯಾಯಿತಿಯನ್ನು ನೀಡುತ್ತದೆ. ಪ್ರತಿ ವರ್ಷ ಒಂದು ಲಕ್ಷ ವಿದ್ಯಾರ್ಥಿಗಳಿಗೆ ಸಹಾಯಧನ ನೀಡಲಾಗುವುದು.
ಈ ಯೋಜನೆಯು ಕೇಂದ್ರ ವಲಯದ ಬಡ್ಡಿ ಸಬ್ಸಿಡಿ (CSIS) ಮತ್ತು ಶಿಕ್ಷಣ ಸಾಲಗಳ ಕ್ರೆಡಿಟ್ ಗ್ಯಾರಂಟಿ ಫಂಡ್ ಯೋಜನೆ (CGFSEL), ವಾರ್ಷಿಕ ಕುಟುಂಬ ಆದಾಯ 4.5 ಲಕ್ಷ ರೂ.ವರೆಗೆ ಮತ್ತು ಅನುಮೋದಿತ ಸಂಸ್ಥೆಗಳಿಂದ ತಾಂತ್ರಿಕ ಅಥವಾ ವೃತ್ತಿಪರ ಕೋರ್ಸ್ ಅನ್ನು ಅನುಸರಿಸುವ ವಿದ್ಯಾರ್ಥಿಗಳಿಗೆ ಪೂರಕವಾಗಿರುತ್ತದೆ. ಅಂತಹ ವಿದ್ಯಾರ್ಥಿಗಳು ಶಿಕ್ಷಣ ಸಾಲಗಳಿಗೆ ಮೊರಟೋರಿಯಂ ಅವಧಿಯಲ್ಲಿ ಸಂಪೂರ್ಣ ಬಡ್ಡಿ ರಿಯಾಯಿತಿಯನ್ನು ಪಡೆಯಲಿದ್ದಾರೆ.
7.5 ಲಕ್ಷ ರೂ.ವರೆಗಿನ ಸಾಲಕ್ಕಾಗಿ ವಿದ್ಯಾರ್ಥಿಗಳು 75% ಬಾಕಿ ಉಳಿದಿರುವ ಡೀಫಾಲ್ಟ್ನ ಕ್ರೆಡಿಟ್ ಗ್ಯಾರಂಟಿಯನ್ನು ಸಹ ಪಡೆಯಬಹುದು. ಈ ಯೋಜನೆಯಡಿ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲಗಳನ್ನು ಲಭ್ಯವಾಗುವಂತೆ ಮಾಡಲು ಬ್ಯಾಂಕ್ಗಳಿಗೆ ಬೆಂಬಲವನ್ನು ನೀಡುತ್ತದೆ.
ಸರ್ಕಾರದ ಅಧಿಸೂಚನೆಯ ಪ್ರಕಾರ, ಮಿಷನ್-ಆಧಾರಿತ ವಿಧಾನದ ಮೂಲಕ, ದೇಶದ ಉನ್ನತ 860 ಪ್ರತಿಷ್ಠಿತ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶಿಸುವ ಅರ್ಹ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲಗಳನ್ನು ವಿಸ್ತರಿಸಲಾಗುವುದು. ವಾರ್ಷಿಕವಾಗಿ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಾರೆ.

