ಬೆಂಗಳೂರು, : 1948ರಲ್ಲಿ ಹೈದರಾಬಾದ್ ನಿಜಾಮರ ರಜಾಕರು ಖರ್ಗೆಯವರ ಗ್ರಾಮವನ್ನು ಸುಟ್ಟುಹಾಕಿದ್ದರು, ಇದರಿಂದ ಖರ್ಗೆಯವರ ತಾಯಿ ಮತ್ತು ಸಹೋದರಿ ಸುಟ್ಟು ಕರಕಲಾಗಿದ್ದರು ಎಂದು ಹೇಳಿಕೆ ನೀಡಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
ಯೋಗಿ ಆದಿತ್ಯನಾಥ್ ಅವರಿಗೆ ಖರ್ಗೆ ಸಾಹೇಬರ ಇತಿಹಾಸ ಗೊತ್ತಿಲ್ಲ. ಸುಟ್ಟಿದ್ದು ರಜಾಕಾರರು. ಮುಸ್ಲಿಮ್ ಸಮುದಾಯ ಅಲ್ಲ. ಬೇರೆ ಬೇರೆ ಸಮುದಾಯದ ಕೆಲವರಿಂದ ಮೋಸ ಆಗುತ್ತೆ ಅಂತ ಇಡೀ ಸಮುದಾಯವನ್ನು ದೂರಲು ಆಗುತ್ತಾ? ಮುಸ್ಲಿಮರಿಗೆಲ್ಲ ಆರೋಪ ಮಾಡಲು ಆಗುತ್ತಾ? ಇದೆಲ್ಲ ಈಗ ಅಪ್ರಸ್ತುತ ಚರ್ಚೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಇವರು ಇಷ್ಟೆಲ್ಲ ಮಾತಾಡ್ತಾರಲ್ಲ ದಲಿತರಿಗೆ ದೇವಸ್ಥಾನಗಳಿಗೆ ಪ್ರವೇಶ ಕೊಡುತ್ತಾರಾ? ಮೊದಲು ಬಿಜೆಪಿ, ಆರ್ಎಸ್ಎಸ್ ಸಿದ್ಧಾಂತಗಳಲ್ಲಿ ಸಮಾನತೆ ತರಲಿ. ಬಿಜೆಪಿಯವರು ಅಪಾಯದಲ್ಲಿದ್ರೆ ಮಾತ್ರ ಆಗ ಹಿಂದೂಗಳು ಅಪಾಯದಲ್ಲಿದ್ದಾರೆ ಅಂತ ಬಿಂಬಿಸುತ್ತಾರೆ . ನಿಜಕ್ಕೂ ಅಪಾಯದಲ್ಲಿ ಇರೋರು ಬಿಜೆಪಿಯವರು, ಹಿಂದೂಗಳಲ್ಲ. ತಾವು ಅಪಾಯದಲ್ಲಿ ಇದ್ದಾಗ ಹಿಂದೂಗಳ ಹೆದರು ಬಳಸಿಕೊಳ್ತಾರೆ ಎಂದು ವಾಗ್ದಾಳಿ ನಡೆಸಿದರು.
ಮಹಾರಾಷ್ಟ್ರದ ಅಚಲ್ಪುರದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಯೋಗಿ ಆದಿತ್ಯನಾಥ್, ಮುಸ್ಲಿಮರ ಮತಕ್ಕಾಗಿ ತಮ್ಮ ಕುಟುಂಬದ ತ್ಯಾಗವನ್ನೇ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮರೆತಿದ್ದಾರೆ. 1948ರಲ್ಲಿ ಹೈದರಾಬಾದ್ ನಿಜಾಮರ ರಜಾಕರು ಖರ್ಗೆಯವರ ಗ್ರಾಮವನ್ನು ಸುಟ್ಟುಹಾಕಿದ್ದರು, ಇದರಿಂದ ಖರ್ಗೆಯವರ ತಾಯಿ ಮತ್ತು ಸಹೋದರಿ ಸುಟ್ಟು ಕರಕಲಾಗಿದ್ದರು. ಆದರೂ ಸಹ ಮಲ್ಲಿಕಾರ್ಜುನ ಖರ್ಗೆ ಅವರು ಮುಸ್ಲಿಂ ಮತಗಳನ್ನು ಕಳೆದುಕೊಳ್ಳುವ ಭಯದಲ್ಲಿ ಅವರು ತಮ್ಮ ನೋವನ್ನು ಅದುಮಿಟ್ಟುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು.

