ಯಲ್ಲಾಪುರ: ಲಾರಿ ಪಲ್ಟಿಯಾಗಿ 10 ಮಂದಿ ಸಾವನ್ನಪ್ಪಿರುವ ದುರ್ಘಟನೆಯೊಂದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗುಳ್ಳಾಪುರ ಬಳಿ ಬುಧವಾರ ನಡೆದಿದೆ. ಕುಮಟಾದಲ್ಲಿ ನಡೆಯುವ ವಾರದ ಸಂತೆಗೆ ಹಾವೇರಿ ಜಿಲ್ಲೆಯ ಸವಣೂರಿನಿಂದ ಯಲ್ಲಾಪುರ ಮಾರ್ಗವಾಗಿ ತರಕಾರಿ ಸಾಗಿಸುವಾಗ ಮುಂಜಾನೆ 4.30 ರ ಸುಮಾರಿನಲ್ಲಿ 50 ಮೀಟರ್ ಆಳದ ಕಣಿವೆಗೆ ನಿಯಂತ್ರಣ ತಪ್ಪಿ ಉರುಳಿ ಬಿದ್ದು ಈ ದುರ್ಘಟನೆ ನಡೆದಿದೆ. ಮೃತರೆಲ್ಲರೂ ತರಕಾರಿ ವ್ಯಾಪಾರಿಗಳು ಎಂದು ವರದಿಯಾಗಿದೆ.
ಲಾರಿಯಲ್ಲಿ ತರಕಾರಿ ದಾಸ್ತಾನಿನ ಜೊತೆಗೆ ಸುಮಾರು 25ಕ್ಕೂ ಹೆಚ್ಚು ವ್ಯಾಪಾರಿಗಳು ಪ್ರಯಾಣಿಸುತ್ತಿದ್ದರು. ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಕ್ಕದ ಕಂದಕಕ್ಕೆ ಉರುಳಿದ ಪರಿಣಾಮ 10 ಮಂದಿ ಮೃತಪಟ್ಟಿದ್ದು ಅನೇಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ದೊರೆತಿದೆ. ಗಾಯಗೊಂಡಿರುವರ ಪೈಕಿ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಮೃತಪಟ್ಟವರನ್ನು ಫಯಾಜ್ ಜಮಖಂಡಿ (45), ವಾಸಿಂ ಮುಡಗೇರಿ (35), ಹಿಜಾಜ್ಮುಲ್ಲಾ (20), ಸಾಧಿಕ್ ಭಾಷ (30), ಗುಲಾಂ ಹುಸೇನ್ ಜವಳಿ (40), ಇಮ್ತಿಯಾಜ್ (36), ಅಲ್ಫಾಜ್ ಜಾಫರ್ (25), ಜಿಲಾನಿ ಅಬ್ದುಲ್ (28), ಅಸ್ಲಂ (24) ಎಂದು ಗುರುತಿಸಲಾಗಿದೆ, ಹಾಗೂ ಮತ್ತೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಯಲ್ಲಾಪುರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲಿಸಿ ಕ್ರೇನ್ ಸಹಾಯದಿಂದ ಲಾರಿಯನ್ನು ಮೇಲಕ್ಕೆತ್ತಿ ಮೃತದೇಹಗಳನ್ನು ಹೊರತೆಗೆದು ಸ್ಥಳೀಯರ ನೆರವಿನೊಂದಿಗೆ ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.ಉತ್ತರ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ್ ಅವರು ಸ್ಥಳಕ್ಕೆ ಆಗಮಿಸಿ, ಪರಿಶೀಲಿಸಿ ಮಾಹಿತಿ ಪಡೆದುಕೊಂಡಿದ್ದಾರೆ.
ಅಪಘಾತದಲ್ಲಿ ಮೃತಪಟ್ಟಿರುವ ಅಸ್ಲಾಂ ಎರಡು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ತಡರಾತ್ರಿ ತರಕಾರಿ ಸಾಗಿಸಲು ತಾನು ಬರುತ್ತೇನೆಂದು ಅಸ್ಲಾಂ ಹಠ ಹಿಡಿದು ಲಾರಿ ಹತ್ತಿದ್ದರು ಎಂದು ಕಟುಂಬಸ್ಥರು ಕಣ್ಣೀರು ಹಾಕಿದ್ದಾರೆ. ಅಪಘಾತದದಲ್ಲಿ ಸವಣೂರು ಪಟ್ಟಣದ 10 ಮಂದಿ ಮೃತಪಟ್ಟಿರುವ ಸುದ್ದಿ ತಿಳಿದು ಪಟ್ಟಣವೇ ಶೋಕಸಾಗರದಲ್ಲಿ ಮುಳುಗಿದ್ದು, ನೀರವ ಮೌನ ಆವರಿಸಿದೆ. ಈ ಅಪಘಾತದಲ್ಲಿ ಬಹುತೇಕ ಯುವಕರೇ ಮೃತಪಟ್ಟಿರುವುದು ವಿಷಾದಕರ.

