Pakistan Airspace : ದೆಹಲಿಯಿಂದ ಶ್ರೀನಗರಕ್ಕೆ ಹೊರಟಿದ್ದ ಇಂಡಿಗೋವಿಮಾನವು ಬುಧವಾರ ಗಾಳಿಯಲ್ಲಿ ತೀವ್ರ ಪ್ರಕ್ಷುಬ್ಧತೆ ಎದುರಿಸಿತ್ತು. ಈ ಸಂದರ್ಭದಲ್ಲಿ ವಾಯು ಪ್ರದೇಶವನ್ನು ಬಳಸಲು ಪಾಕಿಸ್ತಾನವು ಅನುಮತಿ ನೀಡಲಿಲ್ಲ ಎನ್ನುವ ವಿಚಾರ ಬಹಿರಂಗಗೊಂಡಿದೆ.
6E 2142 ವಿಮಾನವು ಶ್ರೀನಗರದ ಬಳಿ ತೀವ್ರ ಪ್ರತಿಕೂಲ ಹವಾಮಾನ ಪರಿಸ್ಥಿತಿಯನ್ನು ಎದುರಿಸಿತು ಅದಾದ ನಂತರ ಪೈಲಟ್ ಪ್ರಕ್ಷುಬ್ಧತೆಯನ್ನು ತಪ್ಪಿಸಲು ಪಾಕಿಸ್ತಾನದ ವಾಯುಪ್ರದೇಶವನ್ನು ಸ್ವಲ್ಪ ಸಮಯದವರೆಗೆ ಪ್ರವೇಶಿಸಲು ಲಾಹೋರ್ ವಾಯು ಸಂಚಾರ ನಿಯಂತ್ರಣ (ATC) ಯಿಂದ ಅನುಮತಿ ಕೋರಿದ್ದರು. ಆದರೆ, ಈ ವಿನಂತಿಯನ್ನು ತಿರಸ್ಕರಿಸಲಾಗಿದೆ.
ವಿಮಾನವು ತನ್ನ ಮೂಲ ಹಾರಾಟದ ಹಾದಿಯಲ್ಲಿ ಸಾಗುತ್ತಿರುವಾಗ, ಶ್ರೀನಗರ ಬಳಿ ಪ್ರಕ್ಷುಬ್ಧತೆಗೆ ಸಿಲುಕಿ, ಪ್ರಯಾಣಿಕರು ಭಯಭೀತರಾದರು. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ವೀಡಿಯೊಗಳಲ್ಲಿ, ವಿಮಾನವು ತೀವ್ರವಾಗಿ ಅಲುಗಾಡುತ್ತಿದ್ದಂತೆ ಪ್ರಯಾಣಿಕರು ಪ್ರಾರ್ಥಿಸುತ್ತಿರುವುದನ್ನು ಕಾಣಬಹುದು.
ವಿಮಾನಯಾನ ಸಂಸ್ಥೆಯ ಮಾಹಿತಿ ಪ್ರಕಾರ, ತೀವ್ರ ಪ್ರಕ್ಷುಬ್ಧತೆ ನಡುವೆಯೂ ಎಲ್ಲಾ 227 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಶ್ರೀನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು.
ವಿಮಾನದಲ್ಲಿದ್ದ ತೃಣಮೂಲ ಕಾಂಗ್ರೆಸ್ ಸಂಸದೆ ಸಾಗರಿಕಾ ಘೋಷ್ ಸೇರಿ ಪಕ್ಷದ ಇತರೆ ನಾಲ್ವರು ನಾಯಕರು ಕೂಡ ಇದ್ದರು. ಸಾವಿನ ಸಮೀಪ ಹೋಗಿ ವಾಪಸ್ ಬಂದಂತಹ ಅನುಭವವಾಗಿತ್ತು. ಜನರು ಕಿರುಚುತ್ತಿದ್ದರು ಮತ್ತು ಪ್ರಾರ್ಥಿಸುತ್ತಿದ್ದರು. ಆ ಪರಿಸ್ಥಿತಿಯಿಂದ ನಮ್ಮನ್ನು ಹೊರತಂದ ಪೈಲಟ್ಗೆ ಧನ್ಯವಾದ, ನಾವು ಇಳಿದಾಗ, ವಿಮಾನದ ಮುಂಭಾಗ ಮುರಿದಿರುವುದನ್ನು ನಾವು ನೋಡಿದ್ದೇವೆ ಎಂದು ಹೇಳಿದ್ದಾರೆ.

