ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲಾಗಿದೆ. ಬೆಂಗಳೂರು ಕೊಟ್ಟಿಗೆಪಾಳ್ಯದ ನಿವಾಸಿ ಗಿರೀಶ್ ಕುಮಾರ್ ಎಂಬುವವರು ಸುದೀರ್ಘ ಪತ್ರದೊಂದಿಗೆ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ಐಪಿಎಲ್-ಆರ್ಸಿಬಿ ವಿಜಯೋತ್ಸವಕ್ಕೆ ಸಾರ್ವಜನಿಕರನ್ನು ಸ್ವತಃ ಮುಖ್ಯಮಂತ್ರಿಗಳೇ ಆಹ್ವಾನಿಸಿದ್ದಾರೆ. ಸರಿಯಾದ ವ್ಯವಸ್ಥೆ ಮಾಡದೇ, ನಿರ್ಲಕ್ಷ್ಯ ವಹಿಸಿದ ಕಾರಣ ಅಮಾಯಕರ ಸಾವು-ನೋವಾಗಿದೆ. ಈ ಹಿನ್ನೆಲೆ ಸೂಕ್ತ ಕ್ರಮ ಜರುಗಿಸುವಂತೆ ಕೋರಿದ್ದಾರೆ
18 ವರ್ಷಗಳ ಬಳಿಕ ಆರ್ಸಿಬಿ ಕೆಕೆಟ್ ತಂಡ ಐಪಿಎಲ್ನಲ್ಲಿ ಟ್ರೋಫಿ ಗೆದ್ದಿದೆ. ಐಪಿಎಲ್ ಮೂಲ ಸಿದ್ಧಾಂತವೇ ವ್ಯಾಪಾರ, ಆದಾಯ ಗಳಿಸುವಿಕೆ, ಇದು ರಾಜ್ಯ, ರಾಷ್ಟ್ರಮಟ್ಟದಲ್ಲಿ ದೇಶ ಪ್ರೇಮ ಜಾಗೃತಗೊಳಿಸುವ ಕೆಲಸವನ್ನೇನು ಮಾಡುವುದಿಲ್ಲ. ಐಪಿಎಲ್ನಿಂದ ಜೂಜಾಡಿಕೊಂಡು ಮನೆ – ಮಠ ಕಳೆದುಕೊಂಡಿರುವ ಪ್ರಕರಣಗಳಿವೆ.
ಮ್ಯಾಚ್ ಫಿಕ್ಸಿಂಗ್ನಲ್ಲೂ ಭಾಗಿಯಾದ ಪ್ರಕರಣಗಗಳಿವೆ. ಖಾಸಗಿಯವರು ಆಟಗಾರರನ್ನ ಕೊಂಡುಕೊಂಡು ತಂಡಗಳನ್ನು ಮಾಡಿಕೊಂಡು ಆಟ ಆಡಿಸುತ್ತಾ ಅದರಲ್ಲಿ ಲಾಭದ ಉದ್ದೇಶವನ್ನೇ ಹೊಂದಿದ್ದಾರೆ. ಆಟಗಾರರಲ್ಲೂ ಸಹ ಉನ್ನತ ಸಿದ್ಧಾಂತ ಇರೋದಿಲ್ಲ. ಹೆಚ್ಚು ಹಣ ಕೊಟ್ಟವರ ತಂಡಕ್ಕಾಗಿ ಆಡುತ್ತಾರೆ. ಈ ರೀತಿ ಗೆದ್ದವರಿಗೆ ಸರ್ಕಾರದ ಮಟ್ಟದಲ್ಲಿ ವೈಭದಿಂದ ಗೌರವಿಸಬಹುದೇ? ಇವರನ್ನ ಸ್ವತಃ ಡಿಸಿಎಂ ಹೋಗಿ ಏರ್ಪೋರ್ಟ್ನಲ್ಲಿ ಸ್ವಾಗತಿಸಿದ್ದಾರೆ.
ಹಾಗೇ ನೋಡಿದ್ರೆ ರಾಷ್ಟ್ರ, ರಾಜ್ಯಕ್ಕಾಗಿ ಆಡಿ ಪದಕ ಪಡೆದ ಅನೇಕ ಜನ ಆಟಗಾರರಿದ್ದಾರೆ. ಈ ಮಟ್ಟದಲ್ಲಿ ಸರ್ಕಾರಗಳಲ್ಲಿ ಆದ್ಯತೆ ಕೊಟ್ಟಿರುವುದಿಲ್ಲ. ಯುದ್ಧದಲ್ಲಿ ಹೋರಾಡಿ ವೀರ ಮರಣ ಹೊಂದಿದ ಯೋಧರ ಮನೆಗೂ ಭೇಟಿ ಕೋಡಲು ಆಸಕ್ತಿ ತೋರಲ್ಲ. ಆದ್ರೆ ಈ ತಂಡಕ್ಕೆ ಸ್ವಾಗತ ಕೋರಿರುವುದು ಎಷ್ಟು ಸರಿ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಅಮಾಯಕರ ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

