Air India: ಅಹಮದಾಬಾದ್ನಲ್ಲಿ ಸಂಭವಿಸಿದ ಏರ್ ಇಂಡಿಯಾ ಬೋಯಿಂಗ್ ಡ್ರೀಮ್ಲೈನರ್ ವಿಮಾನ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 274ಕ್ಕೆ ಏರಿಕೆಯಾಗಿದೆ. ಈ ಸಾವು-ನೋವುಗಳಲ್ಲಿ ವಿಮಾನದಲ್ಲಿದ್ದ ಪ್ರಯಾಣಿಕರು, ಪೈಲಟ್ ಹಾಗೂ ಸಿಬ್ಬಂದಿ, ವಿಮಾನ ಅಪಘಾತಕ್ಕೀಡಾದ ಸ್ಥಳದಲ್ಲಿದ್ದ ಜನರು ಸೇರಿದ್ದಾರೆ.
ಗುರುವಾರ ಅಹಮದಾಬಾದ್ನಿಂದ ಲಂಡನ್ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ಟೇಕಾಫ್ ಆದ ಕೆಲವೇ ಸೆಕೆಂಡುಗಳಲ್ಲಿ ಅಪಘಾತಕ್ಕೀಡಾದ ವಿಮಾನದಲ್ಲಿ 230 ಪ್ರಯಾಣಿಕರು, ಇಬ್ಬರು ಪೈಲಟ್ಗಳು ಮತ್ತು 10 ಸಿಬ್ಬಂದಿ ಸೇರಿದಂತೆ 242 ಜನರಿದ್ದರು. ಈ ಪೈಕಿ ಭಾರತೀಯ ಮೂಲದ ಬ್ರಿಟಿಷ್ ಪ್ರಜೆ ಮಾತ್ರ ಅಪಘಾತದಲ್ಲಿ ಬದುಕುಳಿದರು.
ದುರಂತಕ್ಕೆ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ವಿಮಾನದಲ್ಲಿದ್ದ ಎರಡು ಬ್ಲ್ಯಾಕ್ಬಾಕ್ಸ್ಗಳ ಪೈಕಿ ಒಂದು ಪತ್ತೆಯಾಗಿದೆ. ಅದನ್ನು ಅಧಿಕಾರಿಗಳ ತಂಡ ಕೊಂಡೊಯ್ದಿದೆ. ಮತ್ತೊಂದು ಬ್ಲ್ಯಾಕ್ಬಾಕ್ಸ್ಗಾಗಿ ಹುಡುಕಾಟ ನಡೆದಿದೆ.
5 ತಂಡಗಳಿಂದ ತನಿಖೆ
100 ಕೋಟಿ ಪ್ರಯಾಣಿಕರನ್ನು ಸೇಫ್ ಲ್ಯಾಂಡ್ ಮಾಡಿ ಬ್ರ್ಯಾಂಡ್ ಸೃಷ್ಟಿಸಿದ್ದ ಏರ್ ಲೈನ್ಸ್ನಲ್ಲಿ ಏನು ತಾಂತ್ರಿಕದೋಷ ಉಂಟಾಯಿತು ಎಂಬ ಕುರಿತು ತನಿಖೆ ಆರಂಭಗೊಂಅಡಿದೆ.ಸುರಕ್ಷತೆ, ದಕ್ಷತೆ, ಆರಾಮದಾಯಕ ಬೋಯಿಂಗ್ 787 ವಿಮಾನಕ್ಕೆ ಏನಾಯಿತು? ಸೇಫ್ ಲ್ಯಾಂಡ್ಗೆ ಹೆಸರುವಾಸಿಯಾಗಿದ್ದ ವಿಮಾನ ಪತನ ಆಗಿದ್ದು ಹೇಗೆ ಎಂಬ ಕುರಿತು ತನಿಖೆ ತೀವ್ರಗೊಂಡಿದೆ. ವಿಮಾನ ಪತನಕ್ಕೆ ಕಾರಣ ಏನು ಎಂಬ ಕುರಿತು ಐದು ತಂಡಗಳು ತನಿಖೆ ಆರಂಭಿಸಿವೆ.
ಎಎಐಬಿ (ಏರ್ ಕ್ರಾಫ್ಟ್ ಆಕ್ಸಿಡೆಂಟ್ ಇನ್ವೆಸ್ಟಿಗೇಷನ್ ಬ್ಯೂರೋ):
ನಾಗರಿಕ ವಿಮಾನಯಾನ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಎಎಐಬಿ ದೇಶದಲ್ಲಿ ನಡೆಯುವ ವಿಮಾನ ದುರಂತಗಳ ಅಧಿಕೃತ ತನಿಖಾ ಸಂಸ್ಥೆಯಾಗಿದೆ.
ಉನ್ನತ ಮಟ್ಟದ ಸಮಿತಿ:
ಅಪಘಾತಕ್ಕೆ ನಿಖರ ಕಾರಣ ಪತ್ತೆ ಹಚ್ಚಿ, ವಿಮಾನಯಾನ ಸುರಕ್ಷತೆ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವಿವಿಧ ಕ್ಷೇತ್ರಗಳ ತಜ್ಞರನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ಈ ತಂಡ ತನಿಖಾ ತಂಡಗಳ ಸಹಯೋಗದೊಂದಿದೆ ಕಾರ್ಯ ನಿರ್ವಹಿಸಲಿದೆ.
ಅಮೆರಿಕ ಮತ್ತು ಬ್ರಿಟನ್ ತಂಡಗಳು:
ಅಮೆರಿಕ ಮತ್ತು ಬ್ರಿಟನ್ ತಂಡಗಳನ್ನು ಏರ್ ಇಂಡಿಯಾ ವಿಮಾನ ಪತನದ ತನಿಖೆಗೆ ನಿಯೋಜಿಸಲಾಗಿದೆ. ಅಮೆರಿಕ ಮೂಲದ ಬೋಯಿಂಗ್ ತಜ್ಞರು ಈ ತಂಡದಲ್ಲಿ ಇರಲಿದ್ದಾರೆ.
ಎನ್ಐಎ:
ಮತ್ತೊಂದಡೆ ರಾಷ್ಟ್ರೀಯ ತನಿಖಾ ದಳ ಕೂಡ ತನಿಖೆಗೆ ಇಳಿದಿದೆ. ವಿದ್ವಾಂಸಕ ಕೃತ್ಯ ದೃಷ್ಟಿಕೋನದಿಂದಲೂ ತನಿಖೆ ಆರಂಭಿಸಿದೆ.
ಗುಜರಾತ್ ಪೊಲೀಸ್:
ಗುಜರಾತ್ ಸರ್ಕಾರ 40 ಸದಸ್ಯರ ವಿಶೇಷ ತಂಡ ರಚಿಸಿದೆ. ಈ ತಂಡವು ನಾಗರಿಕ ವಿಮಾನಯಾನ ಸಚಿವಾಲಯದ ತನಿಖಾ ತಂಡಕ್ಕೆ ನೆರವು ನೀಡಲಿದೆ.

