ನವದೆಹಲಿ: 75ನೇ ಸಂವಿಧಾನ ದಿನದ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು 9 ಭಾರತೀಯ ಭಾಷೆಗಳಲ್ಲಿ ಸಂವಿಧಾನದ ಡಿಜಿಟಲ್ ಆವೃತ್ತಿಯನ್ನು ಬಿಡುಗಡೆಗೊಳಿಸಿದರು. ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಲಯಾಳಂ, ಮರಾಠಿ, ನೇಪಾಳಿ, ಪಂಜಾಬಿ, ಬೋಡೋ, ಕಾಶ್ಮೀರಿ, ತೆಲುಗು, ಒಡಿಯಾ ಮತ್ತು ಅಸ್ಸಾಮಿ ಭಾಷೆಗಳಲ್ಲಿ ಡಿಜಿಟಲ್ ಪ್ರತಿಗಳನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ “ಭಾರತ್ ಕೆ ಸಂವಿಧಾನ್ ಮೈ ಕಲಾ ಔರ್ ಕ್ಯಾಲಿಗ್ರಫಿ” ಎಂಬ ಸ್ಮರಣಾರ್ಥ ಕಿರುಪುಸ್ತಕವನ್ನೂ ರಾಷ್ಟ್ರಪತಿ ಮುರ್ಮು ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್, ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಂಸದ ರಾಹುಲ್ ಗಾಂಧಿ, ಕೇಂದ್ರ ಸಚಿವರಾದ ಜೆಪಿ ನಡ್ಡಾ, ಕಿರಣ್ ರಿಜಿಜು ಸೇರಿದಂತೆ ಉಭಯ ಸದನಗಳ ಹಲವಾರು ಸಚಿವರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ರಾಷ್ಟ್ರಪತಿ ಮುರ್ಮು ಮಾತನಾಡಿ, “ಸಂವಿಧಾನವು ನಮ್ಮ ರಾಷ್ಟ್ರದ ಗುರುತಿನ ಮೂಲಾಧಾರ. ವಸಾಹತುಶಾಹಿ ಮನಸ್ಥಿತಿಯನ್ನು ತೊರೆದು, ರಾಷ್ಟ್ರೀಯತೆಯ ಚಿಂತನೆಯನ್ನು ಅಳವಡಿಸಿಕೊಳ್ಳಲು ಇದು ಮಾರ್ಗದರ್ಶಕ ದಾಖಲೆ,” ಎಂದು ತಿಳಿಸಿದ್ದಾರೆ. ಅವರು ಮುಂದುವರಿದು, ಮಹಿಳೆಯರು, ಯುವಕರು, ಎಸ್ಸಿ–ಎಸ್ಟಿ ಸಮುದಾಯ, ರೈತರು, ಮಧ್ಯಮ ಮತ್ತು ಹೊಸ ಮಧ್ಯಮ ವರ್ಗಗಳು ಪ್ರಜಾಪ್ರಭುತ್ವವನ್ನು ಬಲಪಡಿಸುತ್ತಿದ್ದಾರೆ. ಇದರ ಫಲವಾಗಿ 25 ಕೋಟಿ ಜನರು ಬಡತನದಿಂದ ಹೊರಬಂದಿರುವುದು ದೇಶದ ದೊಡ್ಡ ಸಾಧನೆ ಎಂದು ತಿಳಿಸಿದ್ದಾರೆ.
ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಮಾತನಾಡಿ, “ನಮ್ಮ ಸಂವಿಧಾನದ ಆತ್ಮವು ಭಾರತ ಒಂದೇ ಎಂಬುದನ್ನು ಸಾಬೀತುಪಡಿಸಿದೆ. ಕಳೆದ ಏಳು ದಶಕಗಳಲ್ಲಿ ಸಾಮಾಜಿಕ ನ್ಯಾಯ ಮತ್ತು ಸಮಗ್ರ ಅಭಿವೃದ್ಧಿಯ ಗುರಿಗಳನ್ನು ಸಾಧಿಸಲು ಅನೇಕ ನೀತಿ–ಕಾನೂನುಗಳನ್ನು ರೂಪಿಸಿದ್ದೇವೆ,” ಎಂದು ಹೇಳಿದರು.

