ಬೆಂಗಳೂರು: ಕೋಗಿಲು ಲೇಔಟ್ನ ಅಕ್ರಮ ನಿವಾಸಿಗಳಿಗೆ ಸರ್ಕಾರ ಮನೆ ನೀಡುತ್ತಿರುವ ನಿರ್ಧಾರಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಸಚಿವ ಜಮೀರ್ ಅಹಮದ್ಗೆ ದೇಶವೂ ಬೇಡ, ರಾಜ್ಯವೂ ಬೇಡ. ತಮ್ಮ ಜನಸಂಖ್ಯೆ ಹಾಗೂ ಮತದಾರರನ್ನು ಹೆಚ್ಚಿಸಿಕೊಳ್ಳುವುದೇ ಗುರಿಯಾಗಿ ಮನೆಗಳನ್ನು ಹಂಚಲಾಗುತ್ತಿದೆ” ಎಂದು ಕಿಡಿಕಾರಿದರು.
ಅಕ್ರಮ ನಿವಾಸಿಗಳೆಲ್ಲಾ ಮುಸ್ಲಿಮರು ಎನ್ನುವ ರೀತಿಯಲ್ಲಿ ಜಮೀರ್ ಮಾತನಾಡುತ್ತಿರುವುದು ಅಪಾಯಕಾರಿ ಎಂದು ಆರೋಪಿಸಿದ ಯತ್ನಾಳ್, “ದೇಶವನ್ನು ಆದಷ್ಟು ಬೇಗ ಇಸ್ಲಾಮೀಕರಣ ಮಾಡಬೇಕೆಂಬ ಟಾರ್ಗೆಟ್ ಬಿಟ್ಟರೆ ಅವರ ತಲೆಯಲ್ಲಿ ಬೇರೆ ಏನೂ ಇಲ್ಲ. ಜಾತ್ಯಾತೀತತೆಯ ಹೆಸರಿನಲ್ಲಿ ಸಿಎಂ ಸಿದ್ದರಾಮಯ್ಯ ಮುಸ್ಲಿಂ ತುಷ್ಟೀಕರಣ ಮಾಡುತ್ತಿದ್ದಾರೆ. ಹೀಗಾಗಿಯೇ ಇಂತಹ ನಿರ್ಣಯಗಳು ಬರುತ್ತಿವೆ” ಎಂದು ವಾಗ್ದಾಳಿ ನಡೆಸಿದರು.
ಕರ್ನಾಟಕದಲ್ಲಿ ತುಷ್ಟೀಕರಣ ಪರಾಕಾಷ್ಠೆ ತಲುಪಿದೆ ಎಂದು ಆರೋಪಿಸಿದ ಅವರು, “ನಿಜವಾದ ಕನ್ನಡಿಗರು ಹಾಗೂ ಮೂಲ ನಿವಾಸಿಗಳಿಗೆ ವಸತಿ ಕಲ್ಪಿಸುವ ಬದಲು, ಕಾಂಗ್ರೆಸ್ ಹೈಕಮಾಂಡ್ನ ಒತ್ತಡಕ್ಕೆ ತಲೆಬಾಗಿ ಲೋಕಲ್ ಅಲ್ಲದವರಿಗೆ ಮನೆ ನೀಡಲಾಗುತ್ತಿದೆ. ಅವರ ಪೌರತ್ವ ಪರಿಶೀಲನೆ ಮಾಡದೇ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಸರ್ಕಾರ ನಿರ್ಧಾರ ಕೈಗೊಂಡಿದೆ. ಇದನ್ನು ನಾವು ವಿರೋಧಿಸುತ್ತೇವೆ” ಎಂದು ಹೇಳಿದರು.
ರಾಜ್ಯದಲ್ಲಿರುವ ನುಸುಳುಕೋರರು, ಬಾಂಗ್ಲಾದೇಶದವರು ಮತ್ತು ರೋಹಿಂಗ್ಯಾಗಳ ಕುರಿತು ಸಮಗ್ರ ತನಿಖೆ ನಡೆಸಿ, ಬಳಿಕವೇ ಪುನರ್ವಸತಿ ಕಲ್ಪಿಸಬೇಕು ಎಂದು ಒತ್ತಾಯಿಸಿದ ಯತ್ನಾಳ್, “ದಶಕಗಳಿಂದ ಉತ್ತರ ಕರ್ನಾಟಕದಿಂದ ಕೂಲಿ–ನಾಲಿ ಹಾಗೂ ಜೀವನಕ್ಕಾಗಿ ಬೆಂಗಳೂರಿಗೆ ಬಂದ ಕನ್ನಡಿಗರಿಗೆ ಮೊದಲು ಪುನರ್ವಸತಿ ಕಲ್ಪಿಸಬೇಕು. ಆದರೆ ಕಾಂಗ್ರೆಸ್ ಹೈಕಮಾಂಡ್ಗೆ ತಲೆಬಾಗಿ ಕನ್ನಡಿಗರಿಗೆ ಅಪಮಾನ ಮಾಡುವ ಕೆಲಸ ಈ ಸರ್ಕಾರ ಮಾಡುತ್ತಿದೆ” ಎಂದು ಆರೋಪಿಸಿದರು.
ಅಕ್ರಮ ಬಾಂಗ್ಲಾದೇಶಿಗಳ ಕುರಿತು ಕೇಂದ್ರ ಸರ್ಕಾರ ತನಿಖೆ ಆರಂಭಿಸಿದ್ದರೂ ಅದು ಈಗ ಯಾಕೆ ನಿಂತಿದೆ ಎಂಬುದು ತಿಳಿದಿಲ್ಲ ಎಂದ ಅವರು, ಈ ವಿಷಯದಲ್ಲಿ ಚರ್ಚೆ ಅಗತ್ಯವಿದೆ ಎಂದು ಹೇಳಿದರು. “ದೇಶದಲ್ಲಿ ಎಸ್ಐಆರ್ ನಡೆಯುತ್ತಿದೆ. ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ ತಲಾ ಒಂದು ಕೋಟಿ ನಕಲಿ ಮತದಾರರು ಪತ್ತೆಯಾಗಿದ್ದಾರೆ. ಕರ್ನಾಟಕದಲ್ಲೂ ನಕಲಿ ಮತದಾರರು, ಬಾಂಗ್ಲಾ ಹಾಗೂ ರೋಹಿಂಗ್ಯಾಗಳು ಇದ್ದಾರೆ. ವಿಜಯಪುರ ಜಿಲ್ಲೆಯಲ್ಲಿ 19 ಸಾವಿರ ನಕಲಿ ಮತದಾರರು ಇದ್ದಾರೆ ಎಂದು ನಾನು ಈಗಾಗಲೇ ಡಿಸಿಗೆ ಮಾಹಿತಿ ನೀಡಿದ್ದೇನೆ. ರಾಜ್ಯದಲ್ಲೂ ಎಸ್ಐಆರ್ ಆರಂಭಿಸಬೇಕು” ಎಂದು ಆಗ್ರಹಿಸಿದರು.
ನಕಲಿ ಮತದಾರರನ್ನು ದೇಶದ ಗಡಿಯಿಂದ ಹೊರಹಾಕಬೇಕು ಎಂದು ಹೇಳಿದ ಅವರು, “ಅದಾಗದಿದ್ದರೆ ಪರಿಸ್ಥಿತಿ ಗಂಭೀರವಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ 2026ರಲ್ಲಿ ಬಿಜೆಪಿಗೆ ವಾಪಸ್ ಬರ್ತೀರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯತ್ನಾಳ್, “ನಾನು ಬಿಜೆಪಿಗೆ ವಾಪಸ್ ಬರಬೇಕು ಎನ್ನುವ ಅಭಿಪ್ರಾಯ ಅನೇಕ ಶಾಸಕರಲ್ಲಿದೆ. 2026ರಲ್ಲಿ ಏನಾಗುತ್ತೋ ನೋಡಬೇಕು. ಯಾರಿಗೆ ಶುಭ ಸುದ್ದಿ, ಯಾರಿಗೆ ಅಶುಭ ಸುದ್ದಿ ಎಂಬುದು ಆಗ ಗೊತ್ತಾಗುತ್ತದೆ” ಎಂದರು.
ಬೆಳಗಾವಿ ಅಧಿವೇಶನದಲ್ಲಿಯೂ ಅನೇಕ ಶಾಸಕರು ಬಿಜೆಪಿಗೆ ಬರಬೇಕು ಎಂದು ತಮ್ಮ ಬಳಿ ಹೇಳಿದ್ದಾರೆ ಎಂದು ತಿಳಿಸಿದ ಅವರು, “ನಾನು ಹೋದರೆ ಜನ ದುಡ್ಡು ಖರ್ಚು ಮಾಡದೇ ಸೇರುತ್ತಾರೆ. ನಮ್ಮ ಶಾಸಕರಿಗೆ ಈ ವರ್ಷ ಖರ್ಚು ಕಡಿಮೆ ಆಗಲಿ” ಎಂದು ವ್ಯಂಗ್ಯವಾಡಿದರು.

