ಬೆಳಗಾವಿ: ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿ ಆದ ಬಳಿಕ “ಒಂದು ಯೋಜನೆಯನ್ನಾದರೂ ನಾನು ಮಾಡಿದ್ದೇನೆ” ಎಂದು ಹೇಳಲಿ ನೋಡೋಣ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಸವಾಲು ಹಾಕಿದರು.
ಮೆಟ್ರೋ ದರ ಏರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಅವರು, ಮೆಟ್ರೋ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದ್ದು ನಾನೇ ಎಂದು ಹೇಳಿದರು. ಇಂದು ಆರು ಲಕ್ಷಕ್ಕೂ ಅಧಿಕ ಜನರು ಮೆಟ್ರೋ ಮೂಲಕ ಪ್ರಯಾಣಿಸುತ್ತಿದ್ದಾರೆ. ಜನಸಂದಣಿ ಕಡಿಮೆ ಮಾಡಲು ಭಾರತ ಸರ್ಕಾರ ಸಹಕಾರ ನೀಡುತ್ತಿದೆ. ಆದರೆ ಅಲ್ಲಿನ ಅಧಿಕಾರಿಗಳು ಕೇಂದ್ರ ಸರ್ಕಾರದವರು ಅಲ್ಲ, ಅವರು ರಾಜ್ಯ ಸರ್ಕಾರದ ಅಧೀನದಲ್ಲಿ ಕೆಲಸ ಮಾಡುತ್ತಾರೆ. ಈ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಈ ರೀತಿಯ ಆರೋಪಗಳನ್ನು ಮಾಡಬಾರದು ಎಂದು ಸೋಮಣ್ಣ ಹೇಳಿದರು.
ಮತ್ತೊಮ್ಮೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲ್ಲ ಎಂದು ಭವಿಷ್ಯ ನುಡಿದ ಅವರು, “ಐದು ವರ್ಷ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರ್ತಾರೆ” ಎಂಬ ಯತೀಂದ್ರ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಕಾಂಗ್ರೆಸ್ ನೆಲ ಕಚ್ಚಿದೆ, ಆಡಳಿತ ದಾರಿ ತಪ್ಪಿದೆ ಎಂದು ಕಟುವಾಗಿ ಟೀಕಿಸಿದರು.
“ನಮ್ಮಪ್ಪ ಐದು ವರ್ಷ ಮುಖ್ಯಮಂತ್ರಿ ಆಗಿರ್ತಾರೆ ಅನ್ನೋದಾದರೆ, ಕಾಂಗ್ರೆಸ್ನಲ್ಲಿ ಇನ್ನೇನು ಆಗಬಹುದು ನೀವೇ ಹೇಳಿ” ಎಂದು ವ್ಯಂಗ್ಯವಾಡಿದರು. ರೆಸಾರ್ಟ್ ರಾಜಕೀಯ ಅಂದ್ರೆ ಏನು ಅಣ್ಣಾ? ಅದೇಂಗೆ ನಿನಗೆ ಗೊತ್ತಣ್ಣಾ, ನಾನು ಬೆಂಗಳೂರಿನಿಂದ ಬಂದಿದ್ದೀನಿ ಎಂದು ವ್ಯಂಗ್ಯಭರಿತವಾಗಿ ಹೇಳಿದರು.
ಕಾಂಗ್ರೆಸ್ ನೆಲ ಕಚ್ಚಿದೆ, ಆಡಳಿತ ವ್ಯವಸ್ಥೆ ಹಳಿ ತಪ್ಪಿದೆ. ಬಡವರು ಮತ್ತು ಸಾಮಾನ್ಯರ ನಿರೀಕ್ಷೆಗಳು ಗಾಳಿಯಲ್ಲಿ ತೂರಿವೆ. ಸಿದ್ದರಾಮಯ್ಯ ಅವರ ಆಡಳಿತ ವೈಖರಿ, ನಡವಳಿಕೆ ಹಾಗೂ ಭ್ರಷ್ಟಾಚಾರ ಎಲ್ಲರಿಗೂ ಗೊತ್ತಾಗಿದೆ ಎಂದು ಆರೋಪಿಸಿದರು.
ಇನ್ನೂ ಆರು ತಿಂಗಳಲ್ಲಿ ರಸ್ತೆ ಬಂದು ಬೈದಾಡುತ್ತಾರೆ. ಈಗ ಅಲ್ಲೋ ಇಲ್ಲೋ ಬೈದಾಡ್ತಿದ್ದರು, ನಿನ್ನೆಯಿಂದ ಅದು ಆರಂಭವಾಗಿದೆ. ವಂಶಪಾರಂಪರ್ಯ ರಾಜಕೀಯವನ್ನು ಸಿದ್ದರಾಮಯ್ಯ ಅವರ ಕುಟುಂಬ ಮಾಡುತ್ತಿದೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಅವರು ತೀವ್ರ ಆರೋಪ ಮಾಡಿದರು.

