ಬೆಂಗಳೂರು, ಫೆ.1: ರಾಜ್ಯ ಬಜೆಟ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭರ್ಜರಿ ಸಿದ್ಧತೆ ನಡೆಸಿದ್ದಾರೆ. ವಿಧಾನಸಭೆಯಲ್ಲಿ ಮಂಡಿಸಲಿರುವ ಬಜೆಟ್ಗೆ ಸಂಬಂಧಿಸಿದಂತೆ ಸಾಲು ಸಾಲು ಸಭೆಗಳನ್ನು ನಡೆಸುತ್ತಿರುವ ಸಿಎಂ ಸಿದ್ದು, ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಅಂತಿಮ ರೂಪ ನೀಡುತ್ತಿದ್ದಾರೆ.
ಇದರ ನಡುವೆಯೇ ರಾಜಕೀಯ ವಲಯದಲ್ಲಿ ಸಿಎಂ ಪಟ್ಟದ ಚರ್ಚೆ ಮತ್ತೆ ಚುರುಕುಗೊಂಡಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಹಲಿಯಲ್ಲಿ ಬೀಡುಬಿಟ್ಟು ಹೈಕಮಾಂಡ್ ನಾಯಕರೊಂದಿಗೆ ರಣತಂತ್ರ ರೂಪಿಸುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ಮುಂದಾಗಿರುವ ಡಿಕೆಶಿ, ತಮ್ಮ ಬೆಂಬಲಕ್ಕೆ 136 ಶಾಸಕರು ಇದ್ದಾರೆ ಎಂಬ ಸಂದೇಶವನ್ನು ಮೇಲ್ದರ್ಜೆಗೆ ರವಾನಿಸಿದ್ದಾರೆಯೆಂಬ ಮಾತುಗಳು ಕೇಳಿಬರುತ್ತಿವೆ.
ಹೈಕಮಾಂಡ್ ಮಟ್ಟದಲ್ಲೂ ಶಾಸಕರ ಬೆಂಬಲದ ವಿಷಯ ಪ್ರಸ್ತಾಪವಾಗಿದೆ ಎನ್ನಲಾಗಿದ್ದು, ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ. ಈ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಹೈಕಮಾಂಡ್ ಕರೆದರೆ ಹೋಗುತ್ತೇನೆ. ಈಗ ಬಜೆಟ್ ಕೆಲಸಗಳಲ್ಲಿ ನಿರತರಾಗಿದ್ದೇನೆ” ಎಂದು ತಿಳಿಸಿದ್ದಾರೆ.
ಒಟ್ಟಾರೆ ಬಜೆಟ್ ಸಿದ್ಧತೆಗಳ ಜೊತೆಗೆ ಸಿಎಂ ಪಟ್ಟದ ಫೈಟ್ ಕಾಳಗವೂ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದು, ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

