ರಾಯಚೂರು: ರೋಗಿಗಳಿಗೆ ಸಮರ್ಪಕವಾಗಿ ತಲುಪಬೇಕಾದ ಔಷಧಿಯನ್ನ ಬೇಕಾಬಿಟ್ಟಿ ಎಲ್ಲೆಂದರಲ್ಲಿ ಬೀಸಾಡುವ ನಿರ್ಲಕ್ಷ್ಯದ ಕೃತ್ಯಗಳು ರಾಜ್ಯದಲ್ಲಿ ಹೆಚ್ಚಾಗುತ್ತಿವೆ. ಈಗ ರಾಯಚೂರು ಜಿಲ್ಲೆಯ ಸರದಿ ಔಷಧಿಯ ಅವಧಿ ಇನ್ನೂ ಇದ್ರೂ ಲಕ್ಷಾಂತರ ಮೌಲ್ಯದ ಔಷಧಿ, ಸಿರೆಂಜ್ಗಳನ್ನ ರಸ್ತೆ ಪಕ್ಕದಲ್ಲಿ ಎಸೆದಿದ್ದಾರೆ.
ರಾಯಚೂರಿನ ಜಲಾಲನಗರ ರುದ್ರಭೂಮಿ ಬಳಿ ಮುಖ್ಯ ರಸ್ತೆ ಪಕ್ಕದಲ್ಲೇ ಲಕ್ಷಾಂತರ ಮೌಲ್ಯದ ಔಷಧಿಗಳು, ಸಿರೆಂಜ್ ಸೇರಿ ಮೆಡಿಕಲ್ ವೇಸ್ಟ್ನ್ನ ಬೀಸಾಡಲಾಗಿದೆ. ಆದ್ರೆ ಅಚ್ಚರಿ ಅಂದ್ರೆ ಇಲ್ಲಿ ಬಿದ್ದಿರುವ ಎಲ್ಲಾ ಔಷಧಿ, ಸಿರೆಂಜ್ಗಳ ಎಕ್ಷಪಯರಿ ಡೇಟ್ ಇನ್ನೂ ಒಂದು ವರ್ಷಯಿದೆ. ಆದ್ರೂ ಈ ಔಷಧಿಗಳನ್ನ ಇಲ್ಲಿ ಯಾಕೆ ಬೀಸಾಡಿದ್ದಾರೆ ಅನ್ನೋದು ಗೊಂದಲಕ್ಕೆ ಕಾರಣವಾಗಿದೆ.
ಮಕ್ಕಳ ಔಷಧಿ ಹೆಚ್ಚಾಗಿ ಪತ್ತೆಯಾಗಿದ್ದು ಕೆಮ್ಮು, ಜ್ವರ ಮೈಕೈ ನೋವು, ಮಲ್ಟಿ ವಿಟಮಿನ್ ಸಿರಪ್ ಬಾಟಲ್ಗಳು ಬಿದ್ದಿವೆ. ವೈದ್ಯರ ಸ್ಯಾಂಪಲ್ಗಳು ಮಾರಾಟಕ್ಕಿಲ್ಲ ಅನ್ನೋ ಬರಹಗಳು ಸಿರಪ್ ಬಾಟಲ್ಗಳ ಮೇಲೆ ಬರೆಯಲಾಗಿದೆ. ಹೀಗಾಗಿ ಇದು ಸರ್ಕಾರಿ ಆಸ್ಪತ್ರೆಗಳ ಸ್ಯಾಂಪಲ್ಲಾ, ಖಾಸಗಿ ವೈದ್ಯರಿಗೆ ನೀಡಿದ ಅಥವಾ ನೀಡಬೇಕಾದ ಸ್ಯಾಂಪಲ್ ಔಷಧಿಗಳಾ ಅಂತ ಸಾರ್ವಜನಿಕರು ಗೊಂದಲಕ್ಕೀಡಾಗಿದ್ದಾರೆ.
ಬಡ ರೋಗಿಗಳು ಔಷಧಿ ಕೊಳ್ಳುವುದು ಎಷ್ಟು ಕಷ್ಟಕರ , ಅಲ್ಲದೇ ಎಷ್ಟೋ ಬಾರಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರಗಡೆ ಔಷಧಿ ಬರೆಯುತ್ತಾರೆ. ಅಂತಹದರಲ್ಲಿ ಬೇಕಾಬಿಟ್ಟಿ ರಸ್ತೆ ಪಕ್ಕ ಔಷಧಿ ಬೀಸಾಡಿರುವುದಕ್ಕೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲವು ಔಷಧಿಗಳ ಎಕ್ಸಪಯಿರಿ ಡೇಟ್ ಆಗಸ್ಟ್ 2027 ಇದ್ರೆ ಇನ್ನೂ ಕೆಲವದ್ದು ಡಿಸೆಂಬರ್ 2027 ಇದೆ ಹೀಗಿರುವಾಗ ಔಷಧಿಯನ್ನ ಬೀಸಾಡಿರುವುದು ಯಾಕೆ ಅನ್ನೋದು ತಿಳಿಯುತ್ತಿಲ್ಲ. ಜಿಲ್ಲಾ ಔಷಧ ನಿಯಂತ್ರಣಾಧಿಕಾರಿಗಳೇ ತನಿಖೆ ನಡೆಸಿ ಇದರ ಸತ್ಯಾಸತ್ಯತೆ ಬಯಲಿಗೆಳೆಯಬೇಕಿದೆ.
ಸಾಮಾನ್ಯವಾಗಿ ಖಾಸಗಿ ಔಷಧಿ ಕಂಪನಿಗಳ ಮೆಡಿಕಲ್ ರೆಪ್ರೆಸೆಂಟೇಟಿವ್ಗಳು ತಮ್ಮ ಕಂಪನಿ ಸ್ಯಾಂಪಲ್ಗಳನ್ನ ವೈದ್ಯರಿಗೆ, ಮೆಡಿಕಲ್ ಶಾಪ್ಗಳಿಗೆ ನೀಡಿರುತ್ತಾರೆ. ಅಂತಹದೇ ಸ್ಯಾಂಪಲ್ಗಳನ್ನ ಇಲ್ಲಿ ಬೀಸಾಡಲಾಗಿದೆ. ಇದು ಯಾರ ಯಡವಟ್ಟು ಅನ್ನೋದು ಬಯಲಾಗಬೇಕಿದೆ.
ಸರ್ಕಾರಿ ಆಸ್ಪತ್ರೆಗಳಿಗೆ ಸರಬರಾಜು ಆಗುವ ಔಷಧಿಗಳು ಬಡ ರೋಗಿಗಳಿಗೆ ನೀಡದೆ ಅವಧಿ ಮುಗಿದ ಬಳಿಕ ಎಲ್ಲಂದರಲ್ಲಿ ಬೀಸಾಡಿದ ಪ್ರಕರಣಗಳೇ ಹೆಚ್ಚಾಗಿ ಬೆಳಕಿಗೆ ಬಂದಿವೆ. ಆದ್ರೆ ಇಲ್ಲಿ ಖಾಸಗಿಯವರು ಅವಧಿ ಇನ್ನೂ ಇರುವ ಔಷಧಿಯನ್ನ ಬೀಸಾಡಿದ್ದು ಹಲವು ಅನುಮಾನಗಳಿಗೆ ಎಡೆಮಾಡಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಮುಂದಾಗಬೇಕಿದೆ.

