ಬೆಳಗಾವಿ: ರಾಜ್ಯದಲ್ಲಿ ಖಾಸಗಿ ಫೈನಾನ್ಸ್ ಕಂಪನಿಗಳ ಕಿರುಕುಳದ ಪ್ರಕರಣಗಳು ಹೆಚ್ಚುತ್ತಿರುವ ನಡುವೆ ಬೆಳಗಾವಿ ಜಿಲ್ಲೆಯಲ್ಲಿ ಮನಕಲಕುವ ಘಟನೆ ಬೆಳಕಿಗೆ ಬಂದಿದೆ. ಸಾಲ ತೀರಿಸಲಿಲ್ಲವೆಂಬ ಕಾರಣಕ್ಕೆ Equitas Small Finance Bank ಅಧಿಕಾರಿಗಳು ಮನೆಯನ್ನೇ ಸೀಜ್ ಮಾಡಿರುವ ಹಿನ್ನೆಲೆಯಲ್ಲಿ ಕುಟುಂಬವೊಂದು ಮೂರು ತಿಂಗಳ ಹಸುಗೂಸು ಸಮೇತ ಬೀದಿಗೆ ಬಿದ್ದಿದೆ.
ಜಿಲ್ಲೆಯ ರಾಯಭಾಗ ತಾಲೂಕಿನ ಅಲಕನೂರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸುಮಾರು 7 ಲಕ್ಷ ರೂ. ಸಾಲ ಬಾಕಿ ಇತ್ತು, ಕಂತುಗಳನ್ನು ಸಮಯಕ್ಕೆ ಕಟ್ಟಿಲ್ಲವೆಂದು ಆರೋಪಿಸಿ ಫೈನಾನ್ಸ್ ಸಂಸ್ಥೆಯ ಸಿಬ್ಬಂದಿ ಮನೆ ಜಪ್ತಿ ಮಾಡಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಇದಷ್ಟೇ ಅಲ್ಲದೆ, ಮನೆಯಲ್ಲಿ ಇದ್ದ ಸಾಮಗ್ರಿಗಳನ್ನೂ ತೆಗೆದುಕೊಳ್ಳಲು ಅವಕಾಶ ನೀಡದೆ ಸಿಬ್ಬಂದಿ ದರ್ಪ ಮೆರೆದಿದ್ದಾರೆ ಎನ್ನುವ ಆರೋಪವೂ ಕೇಳಿಬಂದಿದೆ. ಸೀಜ್ ಪ್ರಕ್ರಿಯೆಯ ವೇಳೆ ಯಾವುದೇ ಸಮಯಾವಕಾಶ ನೀಡದೆ ಕ್ರಮ ಕೈಗೊಂಡಿರುವುದರಿಂದ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ.
“ಹಣ ಕಟ್ಟುತ್ತೇವೆ, ಸ್ವಲ್ಪ ಸಮಯಾವಕಾಶ ಕೊಡಿ” ಎಂದು ಕುಟುಂಬಸ್ಥರು ಮನವಿ ಮಾಡಿಕೊಂಡರೂ ಯಾವುದೇ ಸ್ಪಂದನೆ ದೊರಕಲಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಮಾನವೀಯತೆ ಮರೆತ ಕ್ರಮದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.

