ಹುಕ್ಕೇರಿ ತಾಲೂಕು, ನಿಡಸೋಸಿ ಗ್ರಾಮ: ಸುಮಾರು 30 ರಿಂದ 40 ವರ್ಷಗಳಿಂದ ಮೂಲಭೂತ ಸೌಲಭ್ಯವಾದ ರಸ್ತೆ ಇಲ್ಲದೆ ಜೀವನ ಸಾಗಿಸುತ್ತಿರುವ ನಿಡಸೋಸಿ ಗ್ರಾಮದ ಮಾಳಿ ತೋಟದ ಜನವಸತಿ ಪ್ರದೇಶದ ನಿವಾಸಿಗಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.
ವಯಸ್ಸಾದ ವೃದ್ಧರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾದರೆ ಸ್ಥಳೀಯರು ಹರಸಾಹಸ ಪಡಬೇಕಾಗುತ್ತದೆ. ರಸ್ತೆ ಇಲ್ಲದ ಕಾರಣ ವರ್ಷಗಳಿಂದ ಜನರು ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ವಿಶೇಷವಾಗಿ ಮಳೆಗಾಲದಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದ್ದು, ಶಾಲಾ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಸಾಧ್ಯವಾಗದೆ ಮನೆಯಲ್ಲಿ ಉಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಚುನಾವಣೆಯ ಸಮಯದಲ್ಲಿ ಮಾತ್ರ ರಾಜಕೀಯ ನಾಯಕರು ರಸ್ತೆ ನಿರ್ಮಾಣ ಮಾಡುವ ಭರವಸೆ ನೀಡಿ, ಹಣ ನೀಡಿ ಮತ ಕೇಳುತ್ತಾರೆ. ಆದರೆ ನಂತರ ಯಾರೂ ನಮ್ಮ ಕಡೆ ತಿರುಗಿ ನೋಡುವುದಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನೂ, ಕಬ್ಬು ಬೆಳೆವನ್ನು ಕಾರ್ಖಾನೆಗೆ ಸಾಗಿಸಲು ಒಂದು ಎಕರೆಗೆ ಸುಮಾರು 15 ರಿಂದ 20 ಸಾವಿರ ರೂಪಾಯಿ ಹೆಚ್ಚುವರಿ ಖರ್ಚು ಆಗುತ್ತಿದೆ. ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸ್ಥಳೀಯರು ತಮ್ಮದೇ ಹಣ ಸಂಗ್ರಹಿಸಿ ಕಬ್ಬಿಣದ ಸೇತುವೆಯನ್ನು ನಿರ್ಮಿಸಿಕೊಂಡಿದ್ದರೂ, ಅದು ಕೇವಲ ಓಡಾಟಕ್ಕೆ ಮಾತ್ರ ಸಹಾಯವಾಗುತ್ತಿದೆ. ಮನೆ ಬಳಕೆಯ ವಸ್ತುಗಳು ಅಥವಾ ಕೃಷಿ ಸಂಬಂಧಿತ ಸಾಮಗ್ರಿಗಳನ್ನು ಸಾಗಿಸಲು ತುಂಬಾ ಕಷ್ಟವಾಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಈ ಕುರಿತು ತಮ್ಮ ಆಕ್ರೋಶವನ್ನು ಮಾಧ್ಯಮಗಳ ಮೂಲಕ ಹೊರ ಹಾಕಿರುವ ಗ್ರಾಮಸ್ಥರು, ಸಂಬಂಧಪಟ್ಟ ಶಾಸಕರು ಮತ್ತು ಅಧಿಕಾರಿಗಳು ತಕ್ಷಣ ಗಮನ ಹರಿಸಿ, ಮಾಳಿ ತೋಟದ ಜನವಸತಿ ಪ್ರದೇಶಕ್ಕೆ ರಸ್ತೆ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ.

