ಬೆಂಗಳೂರು: ಕೊಲೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿದ್ದಾರೆ ದರ್ಶನ್. ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಪರಪ್ಪನ ಅಗ್ರಹಾರದಲ್ಲಿ ದಿನಗಳನ್ನು ದೂಡುತ್ತಿರುವ ನಟ ದರ್ಶನ್ಗೆ ಆಗಸ್ಟ್ 20 ರವರೆಗೂ ಜೈಲೂಟವೆ ಗತಿ ಎನ್ನುವಂತಾಗಿದೆ. ಮನೆಯೂಟಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ಕೋರ್ಟ್ ನೀಡಿರುವ ತೀರ್ಪು ಪ್ರಶ್ನಿಸಿ ಹೈಕೋರ್ಟ್ಗೆ ದರ್ಶನ್ ಪರ ವಕೀಲರು ಹೊಸದಾಗಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿಯನ್ನ ಕೈಗೆತ್ತಿಕೊಂಡ ಹೈಕೋರ್ಟ್ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ನ್ಯಾಯಪೀಠವು ಆ.20ಕ್ಕೆ ವಿಚಾರಣೆ ಮುಂದೂಡಿದೆ.
ಹೈಕೋರ್ಟ್ ನ್ಯಾ. ನಾಗಪ್ರಸನ್ನ ಅವರಿದ್ದ ಪೀಠ ಅರ್ಜಿ ವಿಚಾರಣೆ ನಡೆಸಿದ್ದು, ಸರ್ಕಾರ ಮತ್ತು ಪೊಲೀಸರಿಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿ, ಅರ್ಜಿ ವಿಚಾರಣೆಯನ್ನು ಮುಂದೂಡಿದೆ.ಮ್ಯಾಜಿಸ್ಟ್ರೇಟ್ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್ನಲ್ಲಿ ನಡೆದಿದ್ದು, ದರ್ಶನ್ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ವಾದ ಮಂಡಿಸಿದರು. ಕರ್ನಾಟಕ ಕಾರಾಗೃಹಗಳ ಕಾಯ್ದೆ ಓದುತ್ತಾ ವಾದ ಮಂಡಿಸಿದ ಪ್ರಭುಲಿಂಗ ನಾವದಗಿ ಅವರು, ಮ್ಯಾನ್ಯುವಲ್ ಪ್ರಕಾರ ವಿಚಾರಣಾಧೀನ ಕೈದಿಗೆ ಸ್ವಂತ ಖರ್ಚಿನಲ್ಲಿ ಖಾಸಗಿ ಊಟ ಪಡೆಯೋದಕ್ಕೆ ಅವಕಾಶ ಇದೆ. ಅಧೀನ ನ್ಯಾಯಾಲಯ ಇಲ್ಲಿ ಆ್ಯಕ್ಟ್ಗಿಂತ ಮ್ಯಾನ್ಯುಯಲ್ ಬಗ್ಗೆ ಪರಿಗಣಿಸಿದೆ. ಕರ್ನಾಟಕ ಪ್ರಿಸನ್ಸ್ ಆ್ಯಕ್ಟ್ 1963 ಅನ್ನು ಪರಿಗಣಸಿಯೇ ಇಲ್ಲ. ಸೆಕ್ಷನ್ 30ರಡಿಯಲ್ಲಿ ಮನೆ ಊಟ ಪಡೆಯಲು ಅವಕಾಶ ಇದೆ ಎಂದು ತಿಳಿಸಿದರು.
ಇನ್ನು ದರ್ಶನ್ಗೆ ಅನಾರೋಗ್ಯವಾಗಿರುವ ಬಗ್ಗೆ ವರದಿ ಇದೆ. ಜೈಲಿನ ಮುಖ್ಯ ಆರೋಗ್ಯಾಧಿಕಾರಿ ವರದಿ ನೀಡಿದ್ದಾರೆ ಎಂದು ವಕೀಲರು ಹೇಳಿದ್ದಕ್ಕೆ, ಪ್ರತಿ ವಿಚಾರಣಾಧೀನ ಕೈದಿಯೂ ಈ ಸಮಸ್ಯೆ ಎದುರಿಸುತ್ತಾರೆ. ಅವರು ಮನುಷ್ಯರೇ ಅಲ್ಲವೇ ಎಂದು ಜಡ್ಜ್ ಪ್ರಶ್ನೆ ಮಾಡಿದರು. ನ್ಯೂಟ್ರಿಷನ್ ಕೊರತೆ ಇದ್ದರೆ ಜೈಲಿನ ವೈದ್ಯಾಧಿಕಾರಿ ಪ್ರಿಸ್ಕ್ರಿಪ್ಷನ್ ನೀಡುತ್ತಾರೆ ಎಂದು ಹೇಳಿದರು.
ಡಾಕ್ಟರ್ ಏನು ಹೇಳುತ್ತಾರೋ ಅದನ್ನು ಜೈಲಿನಲ್ಲಿ ನೀಡಲಾಗುತ್ತದೆ. ಸೆಕ್ಷನ್ 30ರ ಬಗ್ಗೆ ಹೇಳಲು ಅವಕಾಶ ಇದೆ. ಆದರೆ ಮನೆ ಊಟದ ಬಗ್ಗೆ ಯಾಕೆ ಎಂದು ಜಡ್ಜ್ ಪ್ರಶ್ನಿಸಿದರು.ವಾದ- ಪ್ರತಿವಾದ ಆಲಿಸಿದ ಬಳಿಕ ಮಾತನಾಡಿದ ಜಡ್ಜ್ ನ್ಯಾ. ನಾಗ ಪ್ರಸನ್ನ ಅವರು, ಕೈದಿಗಳಲ್ಲಿ ಯಾವುದೇ ಶ್ರೀಮಂತ, ಬಡವ, ವಿಐಪಿ, ಪೊಲಿಟಿಕಲ್ ಪ್ರಿಸನ್ ಅಂತ ಬರಲ್ಲಾ, ಎಲ್ಲರೂ ಕೈದಿಗಳೇ ಅಭಿಪ್ರಾಯಪಟ್ಟು, ವಿಚಾರಣೆಯನ್ನು ಆಗಸ್ಟ್ 20ಕ್ಕೆ ಮುಂದೂಡಿದರು.

