ಇಂದು ನಟ ಡಾ.ವಿಷ್ಣುವರ್ಧನ್ ಅವರ ಹುಟ್ಟುಹಬ್ಬ ಹಿನ್ನಲೆ, ಅಭಿಮಾನ್ ಸ್ಟುಡಿಯೋದಲ್ಲಿರೋ ವಿಷ್ಣು ಸ್ಮಾರಕಕ್ಕೆ ಪೂಜೆ ಸಲ್ಲಿಸದಂತೆ ನಟ ಬಾಲಣ್ಣ ಅವರ ಮಕ್ಕಳಿಂದ ಆಕ್ಷೇಪ ವ್ಯಕ್ತವಾಗಿದೆ. ಆದ್ದರಿಂದ ಅಭಿಮಾನ್ ಸ್ಟುಡಿಯೋ ಮುಂದೆ ದಿ. ಡಾ.ವಿಷ್ಣುವರ್ಧನ್ ಅಭಿಮಾನಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ.
ಹೌದು, ಇಂದು ದಿ. ಡಾ.ವಿಷ್ಣುವರ್ಧನ್ ಅವರ 74ನೇ ಜನ್ಮದಿನದ ಅಂಗವಾಗಿ ಸಾವಿರಾರು ಅಭಿಮಾನಿಗಳು ಬೆಂಗಳೂರಿನ ಅಭಿಮಾನ್ ಸ್ಟುಡಿಯೋ ಸ್ಮಾರಕಕ್ಕೆ ಪೂಜೆ ಸಲ್ಲಿಸಲು ಆಗಮಿಸಿದ್ದರು, ಆದ್ರೆ ವಿಷ್ಣು ಸ್ಮಾರಕಕ್ಕೆ ಪೂಜೆ ಸಲ್ಲಿಸದಂತೆ ನಟ ಬಾಲಣ್ಣ ಅವರ ಮಕ್ಕಳು ಕೋರ್ಟಿನಿಂದ ತಡೆಯಾಜ್ಞೆ ಒಪ್ಪಿಗೆ ಪಡೆದಿದ್ದು, ಅಭಿಮಾನಿಗಳನ್ನು ತಡೆದಿದ್ದಾರೆ. ಅಷ್ಟು ಮಾತ್ರವಲ್ಲದೆ ಸ್ಟುಡಿಯೋ ಗೇಟ್ ಬೀಗ ಹಾಕಿ ಸ್ಮಾರಕ ಮೈಸೂರಿನಲ್ಲಿ ಆಗಿರುವುದರಿಂದ ಅಲ್ಲಿಗೇ ಹೋಗಿ ಪೂಜೆ ಮಾಡುವಂತೆ ಖಡಕ್ ಆಗಿ ಎಚ್ಚರಿಕೆ ನೀಡಿದ್ದಾರೆ. ಇದರಿಂದ ಆಕ್ರೋಶಗೊಂಡ ಅಭಿಮಾನಿಗಳು ಸ್ಮಾರಕದ ಗೇಟ್ ಬಳಿ ಪ್ರತಿಭಟನೆಗೆ ನಿರ್ಧರಿಸಿದ್ದಾರೆ.
ಆದ್ರೆ ಅಭಿಮಾನಿಗಳು ಪೂಜೆ ಸಲ್ಲಿಸೋಕೆ ಜಿಲ್ಲಾಧಿಕಾರಿ ಅನುಮತಿ ನೀಡಿದ್ದಾರೆ. ಇದರ ಹೊರತಾಗಿಯೂ ಕೋರ್ಟ್ ತಡೆಯಾಜ್ಞೆ ನೆಪ ಹೇಳಿ ಕೆಂಗೇರಿ ಪೋಲಿಸರು ಅನುಮತಿಗೆ ನಿರಾಕರಿಸಿದ್ದಾರೆ ಎನ್ನಲಾಗಿದೆ.ಇದರಿಂದ ಅಸಮಾಧಾನಗೊಂಡ ನೂರಾರು ಸಂಖ್ಯೆಯ ವಿಷ್ಣುವರ್ಧನ್ ಅಭಿಮಾನಿಗಳು ಅಭಿಮಾನ್ ಸ್ಟುಡಿಯೋ ಗೇಟ್ ಬಳಿಯೇ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ವಿಷ್ಣುವರ್ಧನ್ ಹೆಸರಿನಲ್ಲಿ ಅಭಿಮಾನಿ ಸ್ಟುಡಿಯೋದಲ್ಲಿ ಯಾವುದೇ ಕಾರ್ಯಕ್ರಮ, ಸಂಭ್ರಮಾಚಾರಣೆ ಮಾಡದಂತೆ ನಟ ಬಾಲಣ್ಣ ಅವರ ಮಕ್ಕಳು ಕೋರ್ಟಿನಿಂದ ತಡೆಯಾಜ್ಞೆ ತಂದಿದ್ದಾರೆ.

