ಬೆಂಗಳೂರು : ಹಲವಾರು ಸಿನಿಮಾಗಳಲ್ಲಿ ಖಳನಟನಾಗಿ, ಪೋಷಕ ನಟನಾಗಿ ಅಭಿನಯಿಸಿ ಖ್ಯಾತಿ ಗಳಿಸಿದ್ದ ಹರೀಶ್ ರಾಯ್ (Harish Roy) ಅವರು ನಿಧನರಾಗಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರು ಇಂದು (ನವೆಂಬರ್ 6) ಕೊನೆಯುಸಿರು ಎಳೆದರು. ಹರೀಶ್ ರಾಯ್ ಅವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅವರ ಚಿಕಿತ್ಸೆಗೆ ಚಿತ್ರರಂಗದವರು ಸಹಾಯ ಮಾಡಿದ್ದರು. ಆದರೂ ಕೂಡ ಹರೀಶ್ ರಾಯ್ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಚಿಕಿತ್ಸೆ ಫಲಿಸದೇ ಹರೀಶ್ ರಾಯ್ ನಿಧನರಾದರು.
ಉಡುಪಿಯ ಅಂಬಲಪಾಡಿಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ. ಪಾರ್ಥಿವ ಶರೀರ ಬೆಂಗಳೂರಿನಿಂದ ಉಡುಪಿಗೆ ಬಂದ ಬಳಿಕ ಅಂತಿಮ ಸಂಸ್ಕಾರಕ್ಕೆ ಕುಟುಂಬದವರು ಸಿದ್ಧತೆ ಮಾಡಿಕೊಳ್ಳಲಿದ್ದಾರೆ.
ಸದ್ಯ ಹರೀಶ್ ರಾಯ್ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನಲ್ಲಿರುವ ಅಂಜನಾಪುರದ ಮನೆಗೆ ತೆಗೆದುಕೊಂಡು ಹೋಗಲಾಗುತ್ತಿದೆ. ಅಂಜನಾಪುರದಲ್ಲಿರುವ ಮನೆಯ ಬಳಿ ಎರಡು ಗಂಟೆಗಳ ಕಾಲ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಮಧ್ಯಾಹ್ನದ ಬಳಿಕ ಉಡುಪಿಗೆ ಪಾರ್ಥಿವ ಶರೀರ ರವಾನೆ ಆಗಲಿದೆ. ಶುಕ್ರವಾರ (ನವೆಂಬರ್ 7) ಉಡುಪಿಯಲ್ಲಿ ಹರೀಶ್ ರಾಯ್ ಅಂತ್ಯ ಸಂಸ್ಕಾರ ನಡೆಯಲಿದೆ.
ಬೆಂಗಳೂರಿನಲ್ಲಿ ವಾಸವಾಗಿದ್ದ ಹರೀಶ್ ರಾಯ್ ಅವರು ಮೂಲತಃ ಉಡುಪಿಯ ಅಂಬಲಪಾಡಿಯವರು. ಅಲ್ಲಿ ಅವರ ಮನೆ ಇದೆ. ಹರೀಶ್ ರಾಯ್ ಅವರ ಮೂಲ ಹೆಸರು ಹರೀಶ್ ಆಚಾರ್ಯ. ಅಂಬಲಪಾಡಿಯಲ್ಲಿ ಇರುವ ಮನೆಯಲ್ಲಿ ಅವರ ತಾಯಿ ಮತ್ತು ಸಹೋದರ ವಾಸವಾಗಿದ್ದಾರೆ. ಅಂಬಲಪಾಡಿಯಲ್ಲೇ ಅಂತ್ಯಕ್ರಿಯೆ ನಡೆಸಲು ಕುಟುಂಬದವರು ತೀರ್ಮಾನಿಸಿದ್ದಾರೆ.
ಅಂಗಾಂಗ ದಾನ ಮಾಡುವ ಆಶಯ ಹೊಂದಿದ್ದ ಹರೀಶ್ ರಾಯ್
ನಿಧನದ ಬಳಿಕ ಅಂಗಾಂಗ ದಾನ ಮಾಡಬೇಕು ಎಂಬುದು ಹರೀಶ್ ರಾಯ್ ಅವರ ಆಶಯ ಆಗಿತ್ತು. ತಮ್ಮ ಸಾವಿನ ನಂತರ ಬೇರೆಯವರಿಗೆ ಅನುಕೂಲ ಆಗಲಿ ಎಂಬ ಉದ್ದೇಶ ಅವರಿಗೆ ಇತ್ತು. ಆ ಬಗ್ಗೆ ಪತ್ನಿ ಬಳಿ ಅವರು ಹೇಳಿಕೊಂಡಿದ್ದರು. ಆದರೆ ಕ್ಯಾನ್ಸರ್ ಇದ್ದ ಕಾರಣದಿಂದ ಅಂಗಾಗಗಳನ್ನು ತೆಗೆದುಕೊಳ್ಳಲು ಆಗುವುದಿಲ್ಲ ಎಂದು ವೈದ್ಯರು ಹೇಳಿದ್ದಾರೆ.
ಆಸ್ಪತ್ರೆ ಎದುರು ಪತ್ನಿ, ಮಗನ ಕಣ್ಣೀರು
ಪತ್ನಿ ಆರತಿ ಹಾಗೂ ಮಗ ರೋಷನ್ ಅವರು ಆಸ್ಪತ್ರೆಯ ಮುಂಭಾಗ ಕಣ್ಣೀರು ಹಾಕುತ್ತಿದ್ದಾರೆ. ಹರೀಶ್ ರಾಯ್ ನಿಧನಕ್ಕೆ ಕನ್ನಡ ಚಿತ್ರರಂಗದ ಅನೇಕರು ಕಂಬನಿ ಮಿಡಿಯುತ್ತಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಕೋರಲಾಗುತ್ತಿದೆ. ಹರೀಶ್ ರಾಯ್ ಅವರ ಚಿಕಿತ್ಸೆಗೆ ಕನ್ನಡ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ನೆರವಾಗಿದ್ದರು. ಅದರಿಂದ ಹರೀಶ್ ರಾಯ್ ಅವರಿಗೆ ಸಹಾಯ ಆಗಿತ್ತು. ಹಾಗಿದ್ದರೂ ಕೂಡ ಅವರು ಕ್ಯಾನ್ಸರ್ ವಿರುದ್ಧ ಹೋರಾಡಿ ಗೆಲ್ಲಲು ಸಾಧ್ಯವಾಗಲಿಲ್ಲ. 55ನೇ ವಯಸ್ಸಿನಲ್ಲಿ ಅವರು ಮೃತರಾಗಿದ್ದಾರೆ.
ಹರೀಶ್ ರಾಜ್ ಅಂತ್ಯಕ್ರಿಯೆಯ ಖರ್ಚು ಹೊತ್ತ ನಟ ಧ್ರುವ
ಸ್ಯಾಂಡಲ್ವುಡ್ನ ಪೋಷಕ ನಟ ಹರೀಶ್ ರಾಯ್ ನಿಧನರಾಗಿದ್ದು, ಕಷ್ಟದಲ್ಲಿರುವ ಹರೀಶ್ ರಾಯ್ ಕುಟುಂಬದ ಜೊತೆ ನಟ ಧ್ರುವ ಸರ್ಜಾ ನಿಂತಿದ್ದಾರೆ. ಹರೀಶ್ ರಾಯ್ ಅಂತ್ಯಸಂಸ್ಕಾರದ ಎಲ್ಲಾ ಖರ್ಚು ವೆಚ್ಚುವನ್ನ ಭರಿಸುವ ಸಂಪೂರ್ಣ ಜವಾಬ್ದಾರಿಯನ್ನು ಧ್ರುವಾ ಸರ್ಜಾ ವಹಿಸಿಕೊಂಡಿದ್ದಾರೆ.

