ನಟ ಶ್ರೀಧರ್ಗೆ ಅನಾರೋಗ್ಯ: ಬೆಂಗಳೂರಿನ ಆಸ್ಪತ್ರೆಗೆ ದಾಖಲು
ಕನ್ನಡ ಕಿರುತೆರೆಯ ಪ್ರಖ್ಯಾತ ನಟರಾದ ಶ್ರೀಧರ್
‘ಪಾರು’ ಹಾಗೂ ‘ವಧು’ ಧಾರಾವಾಹಿಗಳ ಮೂಲಕ ಮನೆಮಾತಾದ ಶ್ರೀಧರ್
‘ಕಮಲಿ’ ಧಾರಾವಾಹಿಯ ನಟಿ ಅಂಕಿತಾ ಅವರಿಂದ ಮನವಿ
ಕನ್ನಡ ಕಿರುತೆರೆಯ ಪ್ರಖ್ಯಾತ ನಟರಾದ ಶ್ರೀಧರ್ ಅವರು ಅನಾರೋಗ್ಯದ ಕಾರಣದಿಂದಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ‘ಪಾರು’ ಹಾಗೂ ‘ವಧು’ ಧಾರಾವಾಹಿಗಳ ಮೂಲಕ ಮನೆಮಾತಾದ ಶ್ರೀಧರ್ ಅವರಿಗೆ ಇತ್ತೀಚೆಗೆ ತೀವ್ರವಾದ ಇನ್ಫೆಕ್ಷನ್ನಿಂದಾಗಿ ಅಸ್ವಸ್ಥತರಾಗಿದ್ದಾರೆ.
ಸದ್ಯ ಅವರು ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶ್ರೀಧರ್ ಅವರು ‘ವಧು’ ಧಾರಾವಾಹಿಯಲ್ಲಿ ನಾಯಕಿ ವಧು ಚಿಕ್ಕಪ್ಪನ ಪಾತ್ರದಲ್ಲಿ ಗಮನಸೆಳೆದಿದ್ದರು. ಅವರ ನಟನೆಗೆ ಪ್ರೇಕ್ಷಕರಿಂದ ಬಹುಮಟ್ಟದ ಮೆಚ್ಚುಗೆ ಸಿಕ್ಕಿತ್ತು. ಶ್ರೀಧರ್ ಅವರು, ‘ಪಾರು’, ‘ವಧು’, ‘ಅಂಜಲಿ’, ‘ಅಮೃತವರ್ಷಿಣಿ’ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.
ಇತ್ತೀಚಿಗೆ ಬಿಡುಗಡೆಯಾದ ‘ಮ್ಯಾಕ್ಸ್’ ಸಿನಿಮಾದಲ್ಲೂ ಅವರು ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಅವರು ಕಿಚ್ಚ ಸುದೀಪ್ ಅವರೊಂದಿಗೆ ಕಾಣಿಸಿಕೊಂಡು, ಸಿನಿಮಾಭಿಮಾನಿಗಳ ಗಮನ ಸೆಳೆದಿದ್ದರು. ಆದರೆ ಈ ಯಶಸ್ಸಿನ ನಂತರವೇ ಅವರು ಆರೋಗ್ಯ ಸಮಸ್ಯೆಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈಗ ನಟ ಶ್ರೀಧರ್ ಅವರ ಸಹನಟಿಯೆನಿಸಿದ್ದ ‘ಕಮಲಿ’ ಧಾರಾವಾಹಿಯ ಅಂಕಿತಾ ಅವರು ಇನ್ಸ್ಟಾಗ್ರಾಮ್ ಮೂಲಕ ವಿಡಿಯೋ ಹಂಚಿಕೊಂಡು, ಶ್ರೀಧರ್ ಅವರಿಗೆ ತಕ್ಷಣ ಆರ್ಥಿಕ ಸಹಾಯ ಅಗತ್ಯವಿದೆ ಎಂದು ಮನವಿ ಮಾಡಿದ್ದಾರೆ. “ಶ್ರೀಧರ್ ಅಣ್ಣ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರು ತುಂಬಾ ಸಂಕಷ್ಟದಲ್ಲಿದ್ದಾರೆ. ನಾವು ಎಲ್ಲರೂ ಅವರಿಗೆ ಕೈಲಾದ ಸಹಾಯ ಮಾಡೋಣ. ದಯವಿಟ್ಟು ನೀವು ಮಾಡಬಹುದಾದಷ್ಟು ಸಹಾಯ ಮಾಡಿ” ಎಂದು ಮನಮಿಡಿಯುವಂತೆ ಕೇಳಿಕೊಂಡಿದ್ದಾರೆ.