ಬೆಂಗಳೂರು : ಕೊಲೆ ಕೇಸ್ ನಲ್ಲಿ ನಟ ದರ್ಶನ್ ಜೈಲು ಸೇರಿ 2 ತಿಂಗಳುಗಳೇ ಕಳೆದು ಹೋಗಿದೆ. ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ ಬಳಿಕ ಕನ್ನಡ ಚಿತ್ರರಂಗ ನಿರ್ಮಾಪಕರು, ನಿರ್ದೇಶಕರು, ನಟ-ನಟಿಯರು ಹಾಗೂ ಸ್ನೇಹಿತರು ಸೇರಿದಂತೆ ಅನೇಕರು ಜೈಲಿಗೆ ಬಂದು ದರ್ಶನ್ ಭೇಟಿ ಆಗಿದ್ದಾರೆ. ಇದೀಗ ಕನ್ನಡದ ಸ್ಟಾರ್ ನಟಿ ರಚಿತಾ ರಾಮ್ ಕೂಡ ಸೆಂಟ್ರಲ್ ಜೈಲಿಗೆ ಭೇಟಿ ನೀಡಿದ ದರ್ಶನ್ ಅವರನ್ನು ಭೇಟಿಯಾಗಿದ್ದಾರೆ.
ಪರಪ್ಪನ ಅಗ್ರಹಾರದಲ್ಲಿರುವ ಸೆಂಟ್ರಲ್ ಜೈಲಿಗೆ ಬಂದ ರಚಿತಾ ರಾಮ್ ಸ್ಪೆಷಲ್ ಎಂಟ್ರಿ ಮೂಲಕ ಒಳಗೆ ಹೋಗಿದ್ದಾರೆ. ನಟಿ ರಚಿತಾ ರಾಮ್ ಜೊತೆ ಬಿಜೆಪಿ ಮುಖಂಡ ಸಚ್ಚಿದಾನಂದ ಕೂಡ ಆಗಮಿಸಿದ್ರು. ದರ್ಶನ್ ಜೈಲು ಸೇರಿ 2 ತಿಂಗಳಾದ ಬಳಿಕ ಮೊದಲ ಬಾರಿಗೆ ರಚಿತಾ ರಾಮ್ ನಟನನ್ನು ನೋಡಲು ಜೈಲಿಗೆ ಭೇಟಿ ನೀಡಿದ್ರು.
ಜೈಲಿನಲ್ಲಿ ನಟ ದರ್ಶನ್ ಕಂಡು ರಚಿತಾ ರಾಮ್ ಕಣ್ಣೀರು ಹಾಕಿದ್ದು, ಇದೇ ವೇಳೆ ನಟ ದರ್ಶನ್ ಅವರೇ ರಚಿತಾಗೆ ಧೈರ್ಯ ಹೇಳಿದ್ದರಂತೆ. ಬಳಿಕ ನಟಿ ರಚಿತಾ ರಾಮ್ ನಟ ದರ್ಶನ್ ಅವರ ಯೋಗಕ್ಷೇಮ ವಿಚಾರಿಸಿದ್ರಂತೆ. ನಟ ದರ್ಶನ್ ಜೊತೆ ಕೆಲ ಹೊತ್ತು ಸಿನಿಮಾ ರಂಗದ ಬಗ್ಗೆ ಚರ್ಚೆ ನಡೆಸಿದ್ರು ಎನ್ನಲಾಗ್ತಿದೆ.
“ರಾಜನನ್ನು ರಾಜನ ಥರನೇ ನೋಡುವುದಕ್ಕೆ ನನಗೆ ಇಷ್ಟ. ಆದರೆ ಯಾಕೋ ಮನಸ್ಸು ತಡೆಯಲಿಲ್ಲ. ತುಂಬ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದಾಗ, ಅವರನ್ನು ನೋಡಿಕೊಂಡು ಬರೋದು ಉತ್ತಮ ಎಂದು ಅನ್ನಿಸಿತು. ಅದಕ್ಕೆ ಬಂದೆ, ಅವರನ್ನು ನೋಡಿದೆ. ಈಗ ಕೊಂಚ ನಿರಾಳ ಎನ್ನಿಸುತ್ತಿದೆ. ಮುಖ್ಯವಾಗಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿಕೊಂಡೆ. ಸದ್ಯ ಅವರೀಗ ಆರಾಮಾಗಿ ಇದ್ದಾರೆ” ಎಂದು ರಚಿತಾ ರಾಮ್ ತಿಳಿಸಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ತೂಗುದೀಪ, ನಟಿ ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ನಟ ದರ್ಶನ್ ಕಳೆದ 60 ದಿನಗಳಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ಪೊಲೀಸರು ಚಾರ್ಜ್ಶೀಟ್ ಸಲ್ಲಿಕೆ ಮಾಡಲಿದ್ದಾರೆ.

