ಬೆಂಗಳೂರು: ಸ್ಯಾಂಡಲ್ ವುಡ್ ಕ್ವೀನ್ ನಟಿ ರಮ್ಯಾ ಇತ್ತೀಚೆಗೆ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ ಎಂದು ಬರೆದು ಹಾಕಿದ್ದ ಒಂದು ಪೋಸ್ಟ್ ಭಾರೀ ಚರ್ಚೆಗೆ ಗ್ರಾಸವಾಗಿದ್ದಲ್ಲದೇ ದರ್ಶನ್ ಅಭಿಮಾನಿಗಳು ರಮ್ಯಾಗೆ ಕೆಟ್ಟ ಕೆಟ್ಟ ಕಮೆಂಟ್ಗಳನ್ನು ಮಾಡಿ ತಮ್ಮ ಬಂಡವಾಳ ತೋರಿದ್ದರು. ಅವರೆಲ್ಲರ ವಿರುದ್ಧ ಕಾನೂನು ಮೊರೆ ಹೋದ ರಮ್ಯಾಗೆ ಬಹಳಷ್ಟು ಜನರು ಬೆಂಬಲ ಸೂಚಿಸಿದ್ದಾರೆ. ಇದೀಗ ರಮ್ಯಾ ಮತ್ತೊಂದು ಪೋಸ್ಟ್ನಲ್ಲಿ ತಮ್ಮ ಅಭಿಮಾನಿಗಳು ಹಾಗೂ ಬೆಂಬಲ ವ್ಯಕ್ತಪಡಿಸಿದವರಿಗೆ ಧನ್ಯವಾದ ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮ ಫೇಸ್ಬುಕ್ ಪೋಸ್ಟ್ನಲ್ಲಿ ತಮಗೆ ಬೆಂಬಲ ಸೂಚಿಸಿ ಜನರು ಮಾಡಿರುವ ಕಮೆಂಟ್ ಹಾಗೂ ಮೆಸೇಜ್ಗಳ ಸ್ಕ್ರೀನ್ ಶಾಟ್ಗಳನ್ನು ರಮ್ಯಾ ಹಂಚಿಕೊಂಡಿದ್ದಾರೆ. ಜೊತೆಗೆ ಬರೆದಿರುವ ಅವರು, ದ್ವೇಷ ಮತ್ತು ಹತಾಶೆಯಿಂದ ತುಂಬಿರುವ ಈ ಜಗತ್ತಿನಲ್ಲಿ, ಪ್ರೀತಿ ಮತ್ತು ಕರುಣೆಯೇ ಅದನ್ನು ಉತ್ತಮ ಸ್ಥಳವನ್ನಾಗಿ ಮಾಡುತ್ತದೆ. ಆದ್ದರಿಂದ ನನಗೆ ಸ್ವಲ್ಪ ಪ್ರೀತಿಯನ್ನು ತೋರಿಸಲು ಸಮಯ ತೆಗೆದುಕೊಂಡಿದ್ದಕ್ಕಾಗಿ ಪ್ರತಿಯೊಬ್ಬರಿಗೂ ನಾನು ಧನ್ಯವಾದ ಹೇಳುತ್ತೇನೆ. ನಾನು ಎಂದಿಗೂ ನಿಮಗೆ ಚಿರಋಣಿ ಎಂದು ಅವರು ಬರೆದಿದ್ದಾರೆ.
ನಟಿ ರಮ್ಯಾ ಕೆಲ ದಿನಗಳ ಹಿಂದೆ ಕೊಲೆಯಾದ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಬರೆದು ಪೋಸ್ಟ್ ಮಾಡಿದ್ದರು. ರಮ್ಯಾ ಪೋಸ್ಟ್ಗೆ ಪ್ರತಿಕ್ರಿಯೆಯಾಗಿ ಕೆಲ ಪುಂಡ ದರ್ಶನ್ ಫ್ಯಾನ್ಗಳು ರಮ್ಯಾ ಅವರಿಗೆ ಅಶ್ಲೀಲ ಮೆಸೇಜ್ಗಳನ್ನು ಕಳುಹಿಸಿದ್ದರು. ದರ್ಶನ್ ಫ್ಯಾನ್ಸ್ಗಳ ದುರ್ನಡತೆಗೆ ರೊಚ್ಚಿಗೆದ್ದ ರಮ್ಯಾ ತಮಗೆ ಬಂದಿರುವ ಅಶ್ಲೀಲ ಮೆಸೇಜ್ಗಳ ಸ್ಕ್ರೀನ್ ಶಾಟ್ಗಳನ್ನು ಶೇರ್ ಮಾಡಿ, ರೇಣುಕಾಸ್ವಾಮಿ ಮೆಸೇಜ್ಗಳಿಗೂ ದರ್ಶನ್ ಅವರ ಫ್ಯಾನ್ಸ್ಗಳು ಕಳುಹಿಸುತ್ತಿರುವ ಅಶ್ಲೀಲ ಮೆಸೇಜ್ ಗಳಿಗೂ ಯಾವುದೇ ವ್ಯತ್ಯಾಸವಿಲ್ಲ. ಇಂತಹ ಟ್ರೋಲ್ಗಳಿಂದಲೇ ಹಣ್ಣುಮಕ್ಕಳ ಮೇಲೆ ದೌರ್ಜನ್ಯ ಆಗುತ್ತಿದೆ. ಈ ಮೈಂಡ್ ಸೆಟ್ನಿಂದಲೇ ಎಲ್ಲಾ ಅನಾಹುತ ಆಗುತ್ತಿರೋದು ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದರು.
ಇದಾದ ಬಳಿಕ ರಮ್ಯಾ ದರ್ಶನ್ ಫ್ಯಾನ್ಸ್ಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿ, ಬೆಂಗಳೂರು ನಗರ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ದೂರು ಸಲ್ಲಿಸಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರೇಣುಕಾಸ್ವಾಮಿ ಬಗ್ಗೆ ಪೋಸ್ಟ್ ಮಾಡಿದ ಬಳಿನ ನನಗೆ ಸಾಲು ಸಾಲು ಕೆಟ್ಟ ಮೆಸೇಜ್ಗಳು ಬಂದಿವೆ. ನಾನು ಒಬ್ಬ ನಟಿಯಾಗಿ, ಟ್ರೋಲ್ ಅಭ್ಯಾಸ ಇದೆ. ಆದರೆ ಇಷ್ಟೊಂದು ಕೀಳು ಮಟ್ಟದ ಮೆಸೇಜ್ಗಳು ನನಗೆ ಎಂದಿಗೂ ಬಂದಿರಲಿಲ್ಲ. ನನಗೆ ಈ ರೀತಿ ಆಗುತ್ತಿದೆ ಎಂದರೆ ಇನ್ನು ಸಾಮಾನ್ಯ ಮಹಿಳೆಯರೊಂದಿಗೆ ಇವರೆಲ್ಲಾ ಹೇಗೆ ವರ್ತಿಸಬಹುದು? ಹಾಗಾಗಿ ಎಲ್ಲಾ ಮಹಿಳೆಯರ ಪರವಾಗಿ ನಾನು ದೂರು ನೀಡಿದ್ದೇನೆ ಎಂದಿದ್ದಾರೆ. ನಟಿಗೆ ಈ ಮಟ್ಟದಲ್ಲಿ ದೌರ್ಜನ್ಯ ಆಗುತ್ತಿರುವ ಬಗ್ಗೆ ತಿಳಿದು, ಅವರ ಅಭಿಮಾನಿಗಳು, ಬಿಗ್ ಬಾಸ್ ಖ್ಯಾತಿಯ ಪ್ರಥಮ್, ನಟ ಶಿವರಾಜ್ ಕುಮಾರ್ ಸೇರಿದಂತೆ ಹಲವರು ಬೆಂಬಲ ವ್ಯಕ್ತಪಡಿಸಿದ್ದಾರೆ.

