ಗದಗ: ಗದಗ (Gadag) ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ (Lakkundi) ಗ್ರಾಮದಲ್ಲಿ ಕಳೆದ 15 ದಿನಗಳಿಂದ ಪುರಾತತ್ವ ಇಲಾಖೆಯ ವತಿಯಿಂದ ಉತ್ಖನನ (Excavation) ಕಾರ್ಯ ತೀವ್ರವಾಗಿ ನಡೆಯುತ್ತಿದೆ. ಗದಗ ತಾಲೂಕಿನ ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಈ ಕಾರ್ಯ ಕೈಗೊಳ್ಳಲಾಗಿದ್ದು, ಇಲಾಖೆಯ ಸುಮಾರು 35ಕ್ಕೂ ಹೆಚ್ಚು ಸಿಬ್ಬಂದಿಗಳು ಅತ್ಯಂತ ಸೂಕ್ಷ್ಮತೆಯಿಂದ ಉತ್ಖನನ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇದುವರೆಗೆ ನಡೆದ ಉತ್ಖನನದಲ್ಲಿ 50ಕ್ಕೂ ಹೆಚ್ಚು ಪ್ರಾಚ್ಯಾವಶೇಷಗಳು ಪತ್ತೆಯಾಗಿದ್ದು, ಅವು ಪುರಾತನ ಕಾಲದ ಸಂಸ್ಕೃತಿ, ವಾಸ್ತುಶಿಲ್ಪ ಹಾಗೂ ಜನಜೀವನದ ಕುರಿತು ಮಹತ್ವದ ಮಾಹಿತಿಯನ್ನು ನೀಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅವಶೇಷಗಳು ದೊರಕುವ ನಿರೀಕ್ಷೆಯಿದ್ದು, ಲಕ್ಕುಂಡಿಯ ಐತಿಹಾಸಿಕ ಮಹತ್ವ ಮತ್ತಷ್ಟು ಬೆಳಕಿಗೆ ಬರಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ. ಈ ಉತ್ಖನನ ಕಾರ್ಯವು ರಾಜ್ಯದ ಪುರಾತತ್ವ ಇತಿಹಾಸಕ್ಕೆ ಹೊಸ ಅಧ್ಯಾಯ ಸೇರಿಸಲಿದೆ ಎನ್ನಲಾಗಿದೆ.
ಉತ್ಖನನ ಸ್ಥಳದಲ್ಲೇ ಹಾವು ಪತ್ತೆ:
ಲಕ್ಕುಂಡಿಯಲ್ಲಿ ನಿಧಿ ಪತ್ತೆಯಾದ ಹಿನ್ನೆಲೆಯಲ್ಲಿ ಸುತ್ತಮುತ್ತಲ ಪ್ರದೇಶದಲ್ಲಿ ಉತ್ಖನನ ಕಾರ್ಯ ಮುಂದುವರಿದಿದ್ದು, ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಉತ್ಖನನದ ವೇಳೆ ಜೀವಂತ ಹಾವು ಪತ್ತೆಯಾದ ಘಟನೆ ನಡೆದಿದೆ.
ಉತ್ಖನನ ನಡೆಯುತ್ತಿದ್ದ ಸ್ಥಳದಲ್ಲೇ ಹಾವು ಚಲಿಸುತ್ತಿರುವುದನ್ನು ಗೋಳಪ್ಪ ಕೋಳಿವಾಡ ಎಂಬ ಸ್ಥಳೀಯ ವ್ಯಕ್ತಿ ಗಮನಿಸಿ, ತಕ್ಷಣವೇ ಉತ್ಖನನ ಕಾರ್ಯದ ಮೇಲ್ವಿಚಾರಕರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಸಿಬ್ಬಂದಿಗಳು ಯಾವುದೇ ಆತಂಕ ಉಂಟಾಗದಂತೆ ಎಚ್ಚರಿಕೆಯಿಂದ ಹಾವನ್ನು ಹಿಡಿದು, ಸುರಕ್ಷಿತವಾಗಿ ಕಾಡಿನ ಪ್ರದೇಶಕ್ಕೆ ಬಿಡಲಾಗಿದೆ.
ಈ ಘಟನೆ ಹಿನ್ನೆಲೆಯಲ್ಲಿ ಕೆಲಕಾಲ ಉತ್ಖನನ ಕಾರ್ಯವನ್ನು ಸ್ಥಗಿತಗೊಳಿಸಲಾಗಿದ್ದು, ನಂತರ ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಪುನರಾರಂಭಿಸಲಾಗಿದೆ.
ಸ್ಥಳೀಯರಲ್ಲಿ ಕುತೂಹಲ:
ಕಳೆದ 13 ದಿನಗಳಿಂದ ನಿರಂತರವಾಗಿ ನಡೆಯುತ್ತಿರುವ ಉತ್ಖನನದಲ್ಲಿ ಈಗಾಗಲೇ 45ಕ್ಕೂ ಹೆಚ್ಚು ಪ್ರಾಚ್ಯಾವಶೇಷಗಳು, ಅದರಲ್ಲೂ ಮೂರು ನಾಗರಶಿಲೆಗಳು ಪತ್ತೆಯಾಗಿವೆ. ನಿನ್ನೆ ಮೂರು ಹೆಡೆಯ ಸರ್ಪಶಿಲೆ ದೊರೆತ ಬೆನ್ನಲ್ಲೇ, ಇಂದು ಬೆಳಗ್ಗೆ ಉತ್ಖನನ ಸ್ಥಳದ ‘ಎ’ ಬ್ಲಾಕ್ನಲ್ಲಿ ಸುಮಾರು 2 ರಿಂದ 2.5 ಅಡಿ ಉದ್ದದ ಹಾವು ಕಾಣಿಸಿಕೊಂಡಿದೆ. ಬೆಳಗ್ಗೆ 8.30ರ ಸುಮಾರಿಗೆ ಈ ಘಟನೆ ನಡೆದಿದೆ.
ಲಕ್ಕುಂಡಿಯ ನಿಧಿಗಳನ್ನು ಸರ್ಪಗಳು ಕಾಯುತ್ತವೆ ಎಂಬ ಸ್ಥಳೀಯರ ನಂಬಿಕೆಗೆ ಈ ಘಟನೆ ಮತ್ತಷ್ಟು ಬಲ ನೀಡಿದ್ದು, ಗ್ರಾಮದಲ್ಲಿ ಕುತೂಹಲ ಮತ್ತು ಚರ್ಚೆಗಳು ಜೋರಾಗಿವೆ. ಉತ್ಖನನ ಪ್ರದೇಶದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಪುರಾತತ್ವ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

