ತಿಪಟೂರು, ಡಿಸೆಂಬರ್ 24: ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರ ತವರಿನ ನಗರವೆನ್ನಲಾದ ತಿಪಟೂರಿನ 31ನೇ ವಾರ್ಡ್ನ ಗೊರಗೊಂಡನಹಳ್ಳಿ ಎ.ಕೆ. ಕಾಲೋನಿಯಲ್ಲಿ ದಲಿತರ ಮೇಲೆ ನಿರಂತರ ದೌರ್ಜನ್ಯ, ದಬ್ಬಾಳಿಕೆ ಹಾಗೂ ಪಾಳೆಗಾರಿಕೆ ನಡೆಯುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಸವರ್ಣಿಯರ ಹಿಂಸಾಚಾರದಿಂದ ಭಯದ ವಾತಾವರಣದಲ್ಲಿ ಬದುಕುವ ಸ್ಥಿತಿಗೆ ದಲಿತ ಕುಟುಂಬಗಳು ತಲುಪಿವೆ.
ಸರ್ವೆ ನಂಬರ್ 93/4A2ರಲ್ಲಿ ದಲಿತರು ರಸ್ತೆಯಲ್ಲಿ ಓಡಾಡದಂತೆ ಶೆಡ್ಡು ಹಾಗೂ ತಂತಿ ಬೇಲಿ ಕಂಬಗಳನ್ನು ನಿರ್ಮಿಸಿ ರಸ್ತೆ ಅಡ್ಡಗಟ್ಟಲಾಗಿದೆ ಎಂದು ಆರೋಪಿಸಲಾಗಿದೆ. ಈ ಅಕ್ರಮ ನಿರ್ಮಾಣಗಳನ್ನು ಗ್ರಾಮದ ಚೇರ್ಮನ್ ಶಿವನಂಜಪ್ಪ ಅವರ ಮಕ್ಕಳು ಹಾಗೂ ಮೊಮ್ಮಕ್ಕಳು ನಡೆಸಿದ್ದಾರೆ ಎನ್ನಲಾಗಿದೆ. ಇದರಿಂದ ದಲಿತರು ದಿನನಿತ್ಯ ರಸ್ತೆ ಬಳಸಲು ಸಾಧ್ಯವಾಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ.
ಈ ಕುರಿತು ತಹಶೀಲ್ದಾರ್ ಹಾಗೂ ನಗರಸಭೆಗೆ ದೂರು ನೀಡಲಾಗಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಸರ್ವೆ ಇಲಾಖೆ ಸ್ಥಳಕ್ಕೆ ಆಗಮಿಸಿ ಜಾಗದ ನಕ್ಷೆ ಗುರುತಿಸಿತ್ತು. ನಂತರ ನಡೆದ ಪರಿಶೀಲನೆಯಲ್ಲಿ ರಸ್ತೆ, ದಲಿತರ ಜಮೀನು–ನಿವೇಶನ ಹಾಗೂ ಕೆಂಪಯ್ಯ ಕುಟುಂಬಕ್ಕೆ ಸೇರಿದ ಜಮೀನು ಆಕ್ರಮಣಗೊಂಡಿರುವುದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಶಿವನಂಜಪ್ಪ ಕುಟುಂಬದವರಿಗೆ ನೋಟಿಸ್ ಜಾರಿಗೊಂಡರೂ, ಸರ್ವೆ ಸಂದರ್ಭದಲ್ಲಿಯೇ ಆರೋಪಿತರು ಹಾಜರಾಗಿರಲಿಲ್ಲ ಎಂದು ತಿಳಿದುಬಂದಿದೆ.
ಇದರಿಂದಾಗಿ ಶಿವನಂಜಪ್ಪ ಕುಟುಂಬದ ಸದಸ್ಯರಾದ ರಂಗನಾಥ, ದೊರೆರಾಜು, ಪವನ್ ಕುಮಾರ್, ಮೋಹನ್ ಕುಮಾರ್ ಸೇರಿದಂತೆ ಇತರರ ವಿರುದ್ಧ ಪರಿಶಿಷ್ಟ ಜಾತಿಗಳ ಮೇಲೆ ನಡೆದ ದೌರ್ಜನ್ಯ ಪ್ರಕರಣ ಹಾಗೂ ಕರ್ನಾಟಕ ವಿಶೇಷ ಭೂ ಕಬಳಿಕೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ದಲಿತ ಜನಾಂಗದ ಕೆಂಪಯ್ಯ ಕುಟುಂಬದ ಕಾಂತರಾಜು ಮನವಿ ಮಾಡಿದ್ದಾರೆ.
ಅಲ್ಲದೆ, ದಲಿತರಿಗೆ ಸೇರಿರುವ ಭೂಮಿಯಲ್ಲಿ ಹಾಗೂ ರಸ್ತೆಗೆ ಅಡ್ಡಲಾಗಿ ಅಕ್ರಮವಾಗಿ ಹಸುವಿನ ಸಾಕಾಣಿಕೆ ಶೆಡ್ಡು ನಿರ್ಮಿಸಿ, ತಂತಿ ಬೇಲಿ ಹಾಕಲಾಗಿದೆ. ಶೆಡ್ಡಿನಿಂದ ಹೊರಡುವ ಗಂಜಲ ಹಾಗೂ ಕಸದ ನೀರನ್ನು ನೇರವಾಗಿ ಚರಂಡಿ ಮತ್ತು ರಸ್ತೆಗೆ ಹರಿಸಲಾಗುತ್ತಿದೆ. ದಲಿತರು ವಾಸಿಸುವ ಮನೆಗಳ ಪಕ್ಕದಲ್ಲೇ ತಿಪ್ಪೆಗುಂಡಿ ನಿರ್ಮಾಣಗೊಂಡಿರುವುದರಿಂದ ನೊಣ–ಸೊಳ್ಳೆಗಳ ಕಾಟ ಹೆಚ್ಚಾಗಿ, ಎ.ಕೆ. ಕಾಲೋನಿ ಸಾಂಕ್ರಾಮಿಕ ರೋಗಗಳ ತಾಣವಾಗಿರುವ ಸ್ಥಿತಿಗೆ ತಲುಪಿದೆ. ವಯೋವೃದ್ಧರು, ಮಹಿಳೆಯರು ಹಾಗೂ ಚಿಕ್ಕ ಮಕ್ಕಳು ದಿನನಿತ್ಯ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬ ಆತಂಕಕಾರಿ ಚಿತ್ರಣ ಕಂಡುಬಂದಿದೆ.
ಸುಮಾರು ಮೂರು ತಿಂಗಳ ಬಳಿಕ ಇಂದು ಸರ್ವೆ ಇಲಾಖೆ ಹಾಗೂ ನಗರಸಭೆಯ ಕೆಲ ಸಿಬ್ಬಂದಿ ಪೊಲೀಸ್ ಬಂದೋಬಸ್ತಿನಲ್ಲಿ ಸ್ಥಳಕ್ಕೆ ಆಗಮಿಸಿ ಸರ್ವೆ ನಡೆಸಿ ಕಲ್ಲು ಹಾಕಿದ್ದಾರೆ. ಜಾಗ ಒತ್ತುವರಿ ಆಗಿರುವುದನ್ನು ದಲಿತ ಕಾಲೋನಿಯ ಮುಖಂಡರು ಹಾಗೂ ಸ್ಥಳದಲ್ಲಿದ್ದ ದಲಿತಪರ ಸಂಘಟನೆಗಳ ನಾಯಕರಿಗೆ ತಿಳಿಸಲಾಗಿದೆ.
ಈ ಸಮಸ್ಯೆಯನ್ನು ತ್ವರಿತವಾಗಿ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರ್ ಹಾಗೂ ನಗರಸಭೆ ಪೌರಾಯುಕ್ತರು ಪರಿಹರಿಸದಿದ್ದಲ್ಲಿ ಸಂಬಂಧಪಟ್ಟ ಇಲಾಖೆ ಮುಂಭಾಗ ದಯಾಮರಣಕ್ಕೆ ಮನವಿ ಸಲ್ಲಿಸುವುದಾಗಿ ಎ.ಕೆ. ಕಾಲೋನಿಯ ದಲಿತರು ಹಾಗೂ ಕೆಂಪಯ್ಯ ಕುಟುಂಬದವರು ಎಚ್ಚರಿಕೆ ನೀಡಿದ್ದಾರೆ.
ಈಗಲಾದರೂ ಒತ್ತುವರಿ ತೆರವುಗೊಳಿಸಿ, ರಸ್ತೆಗೆ ಅಡ್ಡವಾಗಿ ನಿರ್ಮಿಸಿರುವ ಶೆಡ್ಗಳನ್ನು ತೆರವುಗೊಳಿಸಲು ಜಿಲ್ಲಾ–ತಾಲೂಕು ಆಡಳಿತ ಹಾಗೂ ನಗರಸಭೆ ಮುಂದಾಗುತ್ತದೆಯೇ? ಅಥವಾ ಪಟ್ಟಭದ್ರ ಹಿತಾಸಕ್ತಿಗಳಿಗೆ ಮಣೆ ಹಾಕುತ್ತದೆಯೇ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಉದ್ಭವಿಸಿವೆ. ಮುಂದಿನ ದಿನಗಳಲ್ಲಿ ಏನಾಗಲಿದೆ ಎಂಬುದು ಕಾದು ನೋಡಬೇಕಾಗಿದೆ.
ವರದಿ: ಮಂಜುನಾಥ್ ಡಿ., ತಿಪಟೂರು

