ಅಮರಾವತಿ: ಬಾಲಕಿಯರ ಪ್ರೌಢಶಾಲೆ ಬಳಿಯ ಪೊದೆಗಳಲ್ಲಿ 21 ವರ್ಷದ ಮಹಿಳೆಯೊಬ್ಬರ (Women) ಶವ ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಾರ್ವಜನಿಕರ ಆತಂಕಕ್ಕೆ ಕಾರಣವಾದ ಘಟನೆ ಆಂಧ್ರಪ್ರದೇಶದ (Andhra Pradesh) ಎಪುರುಪಾಲೆಂ ಕುಗ್ರಾಮವೊಂದರಲ್ಲಿ ಘಟನೆ ನಡೆದಿದೆ.
ಬಾಪಟ್ಲಾ ಜಿಲ್ಲೆಯ ಎಪುರುಪಾಲೆಂ ಗ್ರಾಮದಲ್ಲಿ ಘಟನೆ ನಡೆದಿದ್ದು, ಮಹಿಳೆಯನ್ನು ಹತ್ಯೆಗೈಯುವ ಮುನ್ನ ಅತ್ಯಾಚಾರ ಎಸಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪ್ರಕರಣವೇನು?
ಬಾಪಟ್ಲಾ ಜಿಲ್ಲೆಯ ಎಪುರುಪಾಲೆಂ ಗ್ರಾಮದ ಮಹಿಳೆ ಮುಂಜಾನೆ 5:30ರ ಸುಮಾರಿಗೆ ನಿತ್ಯಕರ್ಮಗಳನ್ನು ಮುಗಿಸಿ, ರೈಲ್ವೇ ಟ್ರ್ಯಾಕ್ಗೆ (Railway Track) ಸಮೀಪವಿರುವ ಶಾಲೆಯ ಬಳಿ ಸ್ನಾನಕ್ಕೆ ಹೋಗಿದ್ದಾರೆ. ಮತ್ತೆ ಅವರು ಮನೆಗೆ ಹಿಂದಿರುಗಲಿಲ್ಲ. ಇದರಿಂದ ಆತಂಕಗೊಂಡಿದ್ದ ಆಕೆಯ ಕುಟುಂಬದ ಸದಸ್ಯರು ತುಂಬ ಹೊತ್ತು ಹುಡುಕಾಟ ನಡೆಸಿದ್ದಾರೆ. ನಂತರ ಪೊದೆಯಲ್ಲಿ ಬೆತ್ತಲೆ ಸ್ಥಿತಿಯಲ್ಲಿ ಮಹಿಳೆ ಸಾವನ್ನಪ್ಪಿರುವುದು ಕಂಡುಬಂದಿದೆ ಎಂದು ಬಪಟ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಕುಲ್ ಜಿಂದಾಲ್ ತಿಳಿಸಿದ್ದಾರೆ.

10 ಲಕ್ಷ ರೂ. ಪರಿಹಾರ ಘೋಷಣೆ:
ಮಹಿಳೆಯನ್ನು ಹತ್ಯೆ ಮಾಡುವುದಕ್ಕೂ ಮುನ್ನ ಕಾಮುಕರು, ಅತ್ಯಾಚಾರ ಎಸಗಿದ್ದಾರೆ. ಸದ್ಯ ಪ್ರಕರಣದ ತನಿಖೆಗಾಗಿ 5 ವಿಶೇಷ ತಂಡಗಳನ್ನ ರಚಿಸಲಾಗಿದೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ನಡುವೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಮೃತರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಘೋಷಣೆ ಮಾಡಿರುವುದಾಗಿ ಗೃಹ ಸಚಿವರಾದ ವಂಗಲಪುಡಿ ಅನಿತಾ ತಿಳಿಸಿದ್ದಾರೆ.
48 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿ:
ಸದ್ಯ ಈ ಘಟನೆ ಆಂಧ್ರ ಪ್ರದೇಶದಲ್ಲಿ ಸರ್ಕಾರದ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಯಾವುದೇ ಲೋಪಕ್ಕೆ ಅವಕಾಶ ನೀಡದಂತೆ 48 ಗಂಟೆಗಳ ಒಳಗೆ ಆರೋಪಿಗಳನ್ನು ಬಂಧಿಸುವಂತೆ ಸರ್ಕಾರ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಅಲ್ಲದೇ ಹೆಚ್ಚಿದ ಮಾದಕ ದ್ರವ್ಯ ಸೇವನೆಯಿಂದ ಇಂತಹ ಅಪರಾಧಗಳು ಹೆಚ್ಚಾಗುತ್ತಿವೆ ಎಂದು ಶಂಕಿಸಿದೆ.

