ನವದೆಹಲಿ : ದೆಹಲಿ ವಕ್ಫ್ ಮಂಡಳಿಯ ಇಮಾಮ್ಗಳು ತಮ್ಮ ವೇತನ ಬಿಡುಗಡೆ ವಿಳಂಬವನ್ನು ವಿರೋಧಿಸಿ ಆಮ್ ಆದ್ಮ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಈ ಬಗ್ಗೆ ಅಖಿಲ ಭಾರತೀಯ ಇಮಾಮ್ ಅಸೋಸಿಯೇಶನ್ ಅಧ್ಯಕ್ಷ ಸಾಜಿದ್ ರಶೀದಿ ಮಾತನಾಡಿದ್ದು, ಕಳೆದ 17 ತಿಂಗಳಿಂದ ಸರ್ಕಾರ ನಮಗೆ ಸರಿಯಾದ ಸಂಬಳ ನೀಡಿಲ್ಲ, ಕಳೆದ 6 ತಿಂಗಳಿಂದ ನಾವು ಇದನ್ನು ಎತ್ತಿ ಹಿಡಿಯಲು ಪ್ರಯತ್ನಿಸುತ್ತಿದ್ದೇವೆ, ಆದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಹೇಳಿದರು.
ಈಗಾಗಲೇ ದೆಹಲಿ ಸರ್ಕಾರದಿಂದ ದೆಹಲಿ ವಕ್ಫ್ ಬೋರ್ಡ್ ಇಮಾಮ್ಗಳ ವೇತನ ಬಿಡುಗಡೆಯಲ್ಲಿ ವಿಳಂಬದ ಬಗ್ಗೆ ನಿರಂತರವಾಗಿ ಹಲವಾರು ಅಧಿಕಾರಿಗಳು ಮತ್ತು ಸರ್ಕಾರದ ಮುಖಂಡರನ್ನು ಭೇಟಿಯಾಗುತ್ತಿದ್ದೇವೆ. ಆದರೆ ಈ ವಿಷಯದ ಬಗ್ಗೆ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಧ್ಯಕ್ಷ ಸಾಜಿದ್ ತಿಳಿಸಿದ್ದಾರೆ.
ಇದರಿಂದ ಬೇಸತ್ತು ನಾವೆಲ್ಲರೂ ಎಎಪಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದೇವೆ. ಒಂದು ವೇಳೆ ಇವತ್ತು ಕೂಡ ನಮಗೆ ಉತ್ತರವನ್ನು ನೀಡದಿದ್ದರೆ, ನಾವು ಇಲ್ಲಿ ಪ್ರತಿಭಟನೆಗೆ ಕುಳಿತುಕೊಳ್ಳುತ್ತೇವೆ ಮತ್ತು ನಮಗೆ ಸಂಬಳ ಪಡೆಯುವವರೆಗೆ ನಾವು ಹೋರಾಟ ನಡೆಸುತ್ತೇವೆ ಎಂದು ಸಾಜಿದ್ ಎಚ್ಚರಿಕೆ ನೀಡಿದ್ದಾರೆ.

