ಬೆಂಗಳೂರು : ಗ್ರಾಚುಟಿ, ಗೌರವಧನ ಹೆಚ್ಚಳ, ನೇಮಕಾತಿ ವಯೋಮಿತಿ ಸಡಿಲಿಕೆ, ಅಂಗನವಾಡಿ ಕೇಂದ್ರಗಳಿಗೆ ಗುಣಮಟ್ಟದ ಆಹಾರ ಪೂರೈಕೆ ಸೇರಿದಂತೆ ಹಲವು ಸಮಸ್ಯೆಗಳನ್ನು ಬಗೆಹರಿಸಲು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘಟನೆಗಳ ಸಂಯುಕ್ತ ಸಂಘರ್ಷ ಸಮಿತಿ ಇಂದು ಆಗ್ರಹಿಸಿತು
ಅಧ್ಯಕ್ಷ ಜಿ ಆರ್ ಶಿವಶಂಕರ್ ಮಾತನಾಡುತ್ತಾ, ಭಾರತಾದ್ಯಂತ ಸುಮಾರು 14 ಲಕ್ಷದಷ್ಟು ಹಾಗೂ ಕರ್ನಾಟಕ ರಾಜ್ಯದಲ್ಲಿ ಸುಮಾರು 70 ಸಾವಿರದಷ್ಟು ಅಂಗನವಾಡಿ ಕೇಂದ್ರಗಳು ಕಾರ್ಯೋನ್ಮುಖವಾಗಿದ್ದು, ರಾಜ್ಯದಲ್ಲಿ ತಲಾ 70 ಸಾವಿರ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಸೇರಿದಂತೆ ದೇಶದಲ್ಲಿ 28 ಲಕ್ಷ ಮಹಿಳೆಯರು ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಸದರಿ ಅಂಗನವಾಡಿಗಳ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಪರಿಶ್ರಮದಿಂದಾಗಿ ಆರು ವಯೋಮಾನದವರೆಗಿನ ಮಕ್ಕಳು, ಬಾಣಂತಿಯರು, ಗರ್ಭಿಣಿಯರಲ್ಲಿ ಅಪೌಷ್ಟಿಕತೆ, ರಕ್ತ ಹೀನತೆ ನಿವಾರಣೆ ಸಾದ್ಯವಾಗಿದೆ. ಮತ್ತು ಮಕ್ಕಳ ದೈಹಿಕ ಹಾಗೂ ಮಾನಸಿಕ ವಿಕಸನಕ್ಕೆ ಪೂರಕವಾಗಿ ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇಂತಹ ಮಹತ್ತರವಾದ ಯೋಜನೆಯನ್ನು ಮತ್ತಷ್ಟು ಬಲಗೊಳಿಸಿ ಅಂಗನವಾಡಿ ವ್ಯವಸ್ಥೆಯನ್ನು ಉಳಿಸಿ-ಬೆಳಸಬೇಕಾದ ಅನಿವಾರ್ಯತೆ ಇದೆ.
ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಪ್ರಮುಖ ಅಂಗನವಾಡಿ ಸಂಘಟನೆಗಳು ಸಂಯಕ್ತವಾಗಿ ಜಂಟಿ ಸಮಾವೇಶ ನಡೆಸುವ ಮೂಲಕ ಅಂಗನವಾಡಿ ಕೆಂದ್ರಗಳ ಸಬಲೀಕರಣಕ್ಕಾಗಿ ಸರ್ಕಾರಗಳು ಕ್ರಮ ಕೈಗೊಳ್ಳಬೇಕು, ಅದರಲ್ಲೂ ಅಂಗನವಾಡಿ ಕಾರ್ಯಕರ್ತೆಯರ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದರು. ಪತ್ರಿಕಾಗೋಷ್ಠಿಯಲ್ಲಿ ಜಿ ಅಮ್ಜದ್, ಎಂ ಜಯಮ್ಮ, ಬಿ ವಿ ನಾಗರತ್ನ ಮುಂತಾದವರು ಉಪಸ್ಥಿತರಿದ್ದರು

