ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ರಹಸ್ಯವಾಗಿ ಶವಗಳನ್ನ ಹೂತಿಡಲಾಗಿದೆ ಎಂಬ ಅನಾಮಿಕನೊಬ್ಬ ನೀಡಿದ ದೂರಿನ ತನಿಖೆ ಸದ್ಯ ಭಾರೀ ಚುರುಕು ಪಡೆದುಕೊಂಡಿದೆ. ಈಗಾಗಲೇ ಆರಂಭದಲ್ಲಿ ದೂರುದಾರ ತೋರಿಸಿದ್ದ ಪಾಯಿಂಟ್ಗಳನ್ನೆಲ್ಲಾ ಎಸ್ಐಟಿ ತಂಡ ಉತ್ಖನನ ನಡೆಸಿ ಮಾಹಿತಿ ಕಲೆ ಹಾಕಿದೆ. ಅದರಲ್ಲೂ ಅನಾಮಿಕ ವ್ಯಕ್ತಿ ತೋರಿಸಿರುವ ಸ್ಪಾರ್ಟ್ ನಂಬರ್ 13ರ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು.
ಈ ಸ್ಥಳದ ತನಿಖೆ ಹಾಗೇ ಬಿಟ್ಟಿದ್ದ ಎಸ್ಐಟಿ ತಂಡ ಕೊನೆಗೂ ಇಂದು (ಆಗಸ್ಟ್ 12) ಕಾರ್ಯಾಚರಣೆ ನಡೆಸಿದೆ. ಜಿಪಿಆರ್ (GPR) ಟೆಕ್ನಾಲಜಿ ಬಳಸಿಕೊಂಡು ಪಾಯಿಂಟ್ ನಂ 13 ರ ಕಾರ್ಯಾಚರಣೆ ನಡೆಸಲಾಗಿತ್ತು. ಆದ್ರೆ ಸಂಜೆಯಾದ್ರೂ ಪಾಯಿಂಟ್ ನಂಬರ್ 13ರಲ್ಲಿ ಯಾವುದೇ ಕಳೇಬರ ಸಿಕ್ಕಿಲ್ಲ ಎಂದು ವರದಿಯಾಗಿದೆ.
ಕಳೆದ 12 ದಿನಗಳಿಂದ ಎಸ್ಐಟಿ ನೇತೃತ್ವದಲ್ಲಿ ಶೋಧ ಕಾರ್ಯ ನಡೆಯುತ್ತಿದ್ದು, ನೇತ್ರಾವತಿ ನದಿ ಬದಿಯಲ್ಲಿ ಗುರುತು ಮಾಡಿದ 13ರ ಶೋಧ ಕುತೂಹಲಕ್ಕೆ ಕಾರಣವಾಗಿತ್ತು. ಅನಾಮಧೇಯ ಮುಸುಕುಧಾರಿ ದೂರುದಾರ ವ್ಯಕ್ತಿ ಈ ಸ್ಥಳದಲ್ಲಿ ಹಲವು ಶವಗಳನ್ನು ಹೂತು ಹಾಕಿರುವುದಾಗಿ ಮಾಹಿತಿ ನೀಡಿದ್ದ ಹಿನ್ನೆಲೆಯಲ್ಲಿ ಈ ಜಾಗ ಅಧಿಕಾರಿಗಳೂ ಸೇರಿದಂತೆ ಎಲ್ಲರಲ್ಲೂ ಕುತೂಹಲದಾಯಕ ಮಾರ್ಕ್ ಆಗಿತ್ತು.
ಅದಲ್ಲದೇ, ಈ ಜಾಗದ ಬದಿಯಲ್ಲೇ ನೇತ್ರಾವತಿ ನದಿಗೆ ಅಳವಡಿಸಲಾಗಿದ್ದ ಕಿಂಡಿ ಅಣೆಕಟ್ಟು ಹಾಗೂ ವಿದ್ಯುತ್ ಪರಿವರ್ತಕ ಇದ್ದುದರಿಂದ ಡ್ರೋನ್ ಜಿಪಿಆರ್ ಟೆಕ್ನಾಲಜಿ ಬಳಸಿ ನಂತರ ಯಂತ್ರದ ಮೂಲಕ ಶೋಧ ಕಾರ್ಯವನ್ನು ಮಾಡಲಾಯಿತು. ಮಧ್ಯಾಹ್ನ ಪ್ರಾರಂಭಗೊಂಡ ಕಾರ್ಯಾಚರಣೆ ಸಂಜೆ 6.30ರವರೆಗೆ ಸುಮಾರು 15 ಅಡಿ ಆಳ ಅಗೆದರೂ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ.
18 ಅಡಿ ಆಳ ಅಗೆದರೂ ಸಿಗದ ಕಳೇಬರ! : ಮಾನವ ಸಹಾಯದಿಂದ, ಜೆಸಿಬಿ ಮೂಲಕ ಅನಾಮಿಕ ತೋರಿಸಿದ ಸ್ಥಳಗಳ ಉತ್ಖನನ ಕಾರ್ಯಾಚರಣೆಯನ್ನು ಹಲವರು ವಿರೋಧಿಸಿದ್ದರು. ಇಷ್ಟೆಲ್ಲಾ ಟೆಕ್ನಾಲಜಿ ಮುಂದುವರೆದಿರುವಾಗ ಜಿಪಿಆರ್ ಬಳಕೆ ಮಾಡಬಹುದಲ್ವಾ ಎಂದು ಹಲವರು ಆಗ್ರಹಿಸಿದ್ದರು. ಆನಂತರ ಕೊನೆಗೂ ಧರ್ಮಸ್ಥಳದಲ್ಲಿ ಕಾರ್ಯಾಚರಣೆಗಾಗಿ ಜಿಪಿಆರ್ ಯಂತ್ರವನ್ನು ತರಲಾಗಿತ್ತು. ಜಿಪಿಆರ್ ಯಂತ್ರದ ಮೂಲಕ ಈಗಾಗಲೇ ಸ್ಪಾಟ್ ನಂಬರ್ 13ರ ಕಾರ್ಯಾಚರಣೆ ಪೂರ್ಣಗೊಂಡಿದೆ.
13ನೇ ಪಾಯಿಂಟ್ನಲ್ಲಿ 15 ರಿಂದ 18 ಅಡಿಯಷ್ಟು ಮಣ್ಣು ತೆಗೆಯಲು ಎಸ್ಐಟಿ ತಂಡ ನಿರ್ಧರಿಸಿ, ನಂತರ ಜಿಪಿಆರ್ ಯಂತ್ರದ ಮೂಲಕ ಪರಿಶೀಲನೆ ನಡೆಸುವುದಾಗಿ ಹೇಳಲಾಗಿತ್ತು. ಇದೀಗ ಎಸ್ಐಟಿ ತಂಡದ ಕಾರ್ಯಾಚರಣೆಯಲ್ಲಿ 20 ಅಡಿ ಆಳ ಅಗೆದರೂ ಯಾವುದೇ ರೀತಿಯ ಕಳೇಬರ ಪತ್ತೆಯಾಗಿಲ್ಲ ಎಂದು ಹೇಳಲಾಗಿದೆ. ಈ ಹಿನ್ನೆಲೆ ಎಸ್ಐಟಿ ತಂಡ ಇಂದೂ ಕೂಡಾ ಕಾರ್ಯಾಚರಣೆ ಸ್ಥಳದಿಂದ ಬರೀ ಕೈಯಲ್ಲಿ ಹೋಗುವಂತಾಗಿದೆ.
13 ನೇ ಸ್ಪಾಟ್ ನಲ್ಲಿ ಸಾಮೂಹಿಕ ಶವಗಳನ್ನು ಹೂತಿಟ್ಟಿದ್ದೆ ಅಂದಿದ್ದ ದೂರುದಾರನ ಆರೋಪದ ಹಿನ್ನೆಲೆ ಎಸ್ಐಟಿ ತಂಡ ಜಿಪಿಆರ್ ಯಂತ್ರದಿಂದಲೂ ಪರಿಶೀಲನೆ ಮಾಡಲಾಗಿತ್ತು. ಈಗ ಸುಮಾರು 20 ಅಡಿ ಆಸುಪಾಸಿಗೂ ಹೋದರೂ ಯಾವುದೇ ಕಳೇಬರ ಪತ್ತೆಯಾಗಿಲ್ಲ. ಏನೂ ಸಿಗದ ಹಿನ್ನಲೆ ತೆಗೆದಿದ್ದ ಗುಂಡಿ ಮತ್ತೆ ಸಿಬ್ಬಂದಿಗಳು ಮುಚ್ಚುತ್ತಿದ್ದಾರೆ ಎನ್ನಲಾಗಿದೆ.

