ನವದೆಹಲಿ: ದೆಹಲಿ ವಿಧಾನಸಭೆ ಸಂಕೀರ್ಣ ಹಾಗೂ ಸ್ಪೀಕರ್ ವಿಜೇಂದರ್ ಗುಪ್ತಾ ಅವರ ಕಚೇರಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.
ಇಂದು ಬೆಳಗ್ಗೆ 7:28ರ ಸುಮಾರಿಗೆ ವಿಧಾನಸಭೆ ಸಂಕೀರ್ಣಕ್ಕೆ ಮೊದಲ ಬೆದರಿಕೆ ಇಮೇಲ್ ಕಳುಹಿಸಲಾಗಿದ್ದು, ಇದೇ ವೇಳೆ ಸ್ಪೀಕರ್ ಅವರ ಅಧಿಕೃತ ಇಮೇಲ್ ವಿಳಾಸಕ್ಕೂ ಬೆದರಿಕೆ ಸಂದೇಶ ತಲುಪಿದೆ ಎಂದು ಮೂಲಗಳು ತಿಳಿಸಿವೆ.
ಬೆದರಿಕೆ ಸಂದೇಶದಲ್ಲಿ ವಿಧಾನಸಭಾ ಮೆಟ್ರೋ ನಿಲ್ದಾಣದ ಹೆಸರನ್ನೂ ಉಲ್ಲೇಖಿಸಿರುವುದು ಮತ್ತಷ್ಟು ಆತಂಕ ಹೆಚ್ಚಿಸಿದೆ ಎಂದು ವರದಿಯಾಗಿದೆ.
ಘಟನೆಯ ಬೆನ್ನಲ್ಲೇ ವಿಧಾನಸಭೆ ಆವರಣ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಬಾಂಬ್ ನಿಷ್ಕ್ರಿಯ ದಳ ಹಾಗೂ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ದೆಹಲಿ ನಗರಾದ್ಯಂತ ಪ್ರಮುಖ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಇದೀಗ ಇಮೇಲ್ಗಳ ಮೂಲ ಪತ್ತೆ ಹಚ್ಚಲು ಭದ್ರತಾ ಸಂಸ್ಥೆಗಳು ತನಿಖೆ ಆರಂಭಿಸಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

