ಉಡುಪಿ : ಕಾರ್ಕಳದ ಮಾಜಿ ಶಾಸಕ ದಿ.ಗೋಪಾಲ್ ಭಂಡಾರಿ ಅವರ ಪುತ್ರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಜಿ ಶಾಸಕರ ಪುತ್ರ ಆಗಿರುವ ಸುದೀಪ್ ಅವರು ಹೆಬ್ರಿ ತಾಲೂಕು ನಿವಾಸಿ. ಸುದೀಪ್ ಅವರು ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದ್ದರು ಎನ್ನಲಾಗಿದ್ದು, ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಉದ್ಯಮಿ ಸುದೀಪ್ ಭಂಡಾರಿ ಅವರು ವ್ಯವಹಾರದಲ್ಲಿ ಉಂಟಾದ ತೀವ್ರ ಆರ್ಥಿಕ ನಷ್ಟದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಮವಾರ ರಾತ್ರಿ ಬಾರ್ಕೂರು ಬಳಿ ರೈಲಿಗೆ ತಲೆಕೊಟ್ಟು ಅವರು ಸಾವಿಗೆ ಶರಣಾಗಿದ್ದಾರೆ. ಅವರ ಛಿದ್ರಗೊಂಡ ಮೃತದೇಹ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಸೋಮವಾರ ರಾತ್ರಿ 7:15ರ ಸುಮಾರಿಗೆ ಸುದೀಪ್ ಕೊನೆಯ ಬಾರಿಗೆ ವಾಟ್ಸ್ಯಾಪ್ನಲ್ಲಿ ಸಕ್ರಿಯರಾಗಿದ್ದರು. ಆ ಬಳಿಕ ಅವರು ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಕುಟುಂಬಸ್ಥರು ಮತ್ತು ಸ್ನೇಹಿತರು ಹುಡುಕಾಟ ನಡೆಸಿದಾಗ ಬಾರ್ಕೂರು ಸಮೀಪದ ರೈಲ್ವೆ ಹಳಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ರೈಲು ಡಿಕ್ಕಿ ಹೊಡೆದ ರಭಸಕ್ಕೆ ಸುದೀಪ್ ಭಂಡಾರಿ ಅವರ ದೇಹ ಸಂಪೂರ್ಣವಾಗಿ ಛಿದ್ರ ಛಿದ್ರವಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ಮುಂದುವರೆಸಿದ್ದಾರೆ.
1999 ರಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು ಸುದೀಪ್ ತಂದೆ ಹೆಚ್.ಗೋಪಾಲ್ ಭಂಡಾರಿ ಅವರು. ನಂತರ 2008 ರಲ್ಲಿಯೂ ಎರಡನೇ ಬಾರಿ ಶಾಸಕರಾಗಿದ್ದಾರೆ.

