ಮಹಾಕುಂಭ ನಗರ : ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಇಂದು(ಜನವರಿ 29) ಕಾಲ್ತುಳಿತ ಸಂಭವಿಸಿದ್ದು, ಇದರಲ್ಲಿ ಹಲವರು ಸಾವನ್ನಪ್ಪಿದ್ದು, ಇನ್ನು ಹಲವು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಈ ಕಾಲ್ತುಳಿತದಲ್ಲಿ ಕಾಣೆಯಾಗಿದ್ದ ಬೆಳಗಾವಿಯ ಇಬ್ಬರು ತಾಯಿ ಮಗಳು ಸೇರಿದಂತೆ ಒಟ್ಟು ನಾಲ್ವರು ಮೃತಪಟ್ಟಿದ್ದಾರೆ ಎಮದು ತಿಳಿದುಬಂದಿದೆ.
ಮಹಾ ಕುಂಭಮೇಳದಲ್ಲಿಸಂಭವಿಸಿದ ಕಾಲ್ತುಳಿತದಲ್ಲಿ ಬೆಳಗಾವಿಯ ತಾಯಿ-ಮಗಳು ಮಿಸ್ಸಿಂಗ್ ಎಂದು ಬೆಳಿಗ್ಗೆಯಿಂದಲೇ ಸುದ್ದಿಯಾಗಿತ್ತು. ಬೆಳಗಾವಿಯ ವಡಗಾವಿ ನಿವಾಸಿ ಜ್ಯೋತಿ ಹತ್ತರವಾಠ (50) ಮತ್ತು ಪುತ್ರಿ ಮೇಘಾ ಹತ್ತರವಾಠ್ (25) ನಾಪತ್ತೆಯಾಗಿದ್ದರು ಎನ್ನಲಾಗಿತ್ತು. ಆದ್ರೆ ಇದೀಗ ಈ ಇಬ್ಬರೂ ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದಾರೆ ಎನ್ಜುವ ಮಾಹಿತಿ ತಿಳಿದುಬಂದಿದೆ. ಇನ್ನು ಇಬ್ಬರು ಮೃತಪಟ್ಟಿರುವ ಬಗ್ಗೆ ಕುಟುಂಬಸ್ಥರು ಖಚಿತಪಡಿಸಿದ್ದಾರೆ.
ಕಾಲ್ತುಳಿತದ ಬಳಿಕ ಇಂದು ಬೆಳಗ್ಗೆ ತಾಯಿ-ಮಗಳನ್ನು ಪ್ರಯಾಗ್ರಾಜ್ದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ತಾಯಿ ಮಗಳು ಕೊನೆಯುಸಿರೆಳೆದಿದ್ದಾರೆ. ಚಿದಂಬರ್ ಎಂಬುವವರು ಅವರ ಜೊತೆಗೆ ಇರುವವರಿಂದ ಮಾಹಿತಿ ಸಿಕ್ಕಿದೆ. ಮೃತಪಟ್ಟಿದ್ದಾರೆ ಎಂದು ಅವರ ಜೊತೆಗೆ ಇದ್ದ ಚಿದಂಬರ ತಿಳಿಸಿದ್ದಾರೆ. ಸಾವು ಖಚಿತ ಪಡಿಸಿದ ಮೇಘಾ ಅವರ ತಂದೆ ದೀಪಕ್ ಹತ್ತರವಾಠ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದಾರೆ.
ಜನವರಿ 26ರಂದು ಬೆಳಗಾವಿಯಿಂದ ಮಹಾ ಕುಂಭಮೇಳಕ್ಕೆ ಹೋಗಿದ್ದರು. ಬೆಳಗಾವಿಯಿಂದ ಒಟ್ಟು 13 ಜನ ಹೋಗಿದ್ದರು ಆದ್ರೆ, ಈಗ ಪತ್ನಿ ಜ್ಯೋತಿ ಹತ್ತರವಾಠ, ಪುತ್ರಿ ಮೇಘಾ ಹತ್ತರವಾಠ ಮೃತಪಟ್ಟಿದ್ದಾರೆ. ನಾಲ್ವರಿಗೆ ಗಂಭೀರ ಗಾಯವಾಗಿದೆ ಎಂದು ಮಾಹಿತಿ ನೀಡಿದರು.
ಬೆಳಗಾವಿಯ ಮೂಲದ ಇನ್ನು ಇಬ್ಬರು ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಶಿವಾಜಿನಗರದ ನಿವಾಸಿ ಮಹಾದೇವಿ ಹನುಮಂತ ಬಾವನೂರ ಹಾಗೂ ಬೆಳಗಾವಿ ನಗರದ ಶೆಟ್ಟಿಗಲ್ಲಿ ನಿವಾಸಿ ಅರುಣ್ ಕೋಪರ್ಡೆ ಸಾವನ್ನಪ್ಪಿದ್ದಾರೆ. ಇನ್ನು ಅರುಣ್ ಹೆಂಡತಿ ಕಾಂಚನಾಗೆ ಗಂಭೀರವಾಗಿ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಇವರು ಭಾನುವಾರ 30 ಜನರ ಜೊತೆ ಮಹಾ ಕುಂಭಮೇಳಕ್ಕೆ ತೆರಳಿದ್ದರು.