ಖಾನಾಪುರ: ವೈದ್ಯೋ ನಾರಾಯಣಿ ಹರಿ ಎನ್ನುವ ಮಾತು ಇದ್ದರೂ, ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಬೀಡಿ ಸರಕಾರಿ ಆಸ್ಪತ್ರೆ ಸಿಬ್ಬಂದಿಗೆ ಮಾತ್ರ ಇದು ಅನ್ವಯಿಸುವುದಿಲ್ಲವೇನೋ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ. ರಾತ್ರಿ ವೇಳೆ ಆಸ್ಪತ್ರೆಗೆ ಕರೆತಂದ ಒಂದು ವರ್ಷದ ಮಗುವಿಗೆ ಪ್ರಥಮ ಚಿಕಿತ್ಸೆ ನೀಡದೆ ಆಸ್ಪತ್ರೆ ಸಿಬ್ಬಂದಿ ತೋರಿದ ಅಮಾನವೀಯ ನಡೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಹಾವೇರಿಯಿಂದ ಉದ್ಯೋಗ ಅರಸಿ ಬೀಡಿಗೆ ಬಂದು ನೆಲೆಸಿರುವ ಬಡ ಕುಟುಂಬದ ಒಂದು ವರ್ಷದ ಮಗು ಬುಧವಾರ ರಾತ್ರಿ ಏಕಾಏಕಿ ಅಸ್ವಸ್ಥಗೊಂಡಿದೆ. ಖಾಸಗಿ ಆಸ್ಪತ್ರೆಗೆ ಹೋಗಲು ಆರ್ಥಿಕವಾಗಿ ಅಸಮರ್ಥರಾಗಿದ್ದ ಕುಟುಂಬವು ತಡರಾತ್ರಿ ಬೀಡಿಯಲ್ಲಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಗುವನ್ನು ಕರೆದುಕೊಂಡು ಹೋಗಿದೆ.
ಆದರೆ, ರಾತ್ರಿ ಕರ್ತವ್ಯದಲ್ಲಿದ್ದ ಸಿಬ್ಬಂದಿ ಆಸ್ಪತ್ರೆಯ ಬಾಗಿಲನ್ನೇ ತೆರೆಯದೆ, ಕನಿಷ್ಠ ಪ್ರಥಮ ಚಿಕಿತ್ಸೆ ಕೂಡ ನೀಡಲು ನಿರಾಕರಿಸಿದ್ದಾರೆ. “ನಾವು ನೋಡಲು ಸಾಧ್ಯವಿಲ್ಲ, ನಂದಗಡ ಆಸ್ಪತ್ರೆಗೆ ಕರೆದುಕೊಂಡು ಹೋಗಿ” ಎಂದು ನರ್ಸಿಂಗ್ ಸಿಬ್ಬಂದಿ ಕುಟುಂಬವನ್ನು ಹಿಂದಿರುಗಿಸಿದ್ದಾರೆ ಎನ್ನಲಾಗಿದೆ.
ತಡರಾತ್ರಿ ವಾಹನ ವ್ಯವಸ್ಥೆ ಇಲ್ಲದೆ ಬಡ ಕುಟುಂಬ ಕಂಗಾಲಾಗಿದ್ದ ವೇಳೆ, ವಿಷಯ ತಿಳಿದು ಸ್ಥಳಕ್ಕೆ ಬಂದ ಪತ್ರಕರ್ತ ನಾಗೇಶ ನಾಯ್ಕರ್ ಸಿಬ್ಬಂದಿಗೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಅವರು ತಮ್ಮ ಸ್ವಂತ ವಾಹನದಲ್ಲೇ ಮಗುವನ್ನು ನಂದಗಡದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಚಿಕಿತ್ಸೆ ಪಡೆದ ಮಗು ಈಗ ಆರೋಗ್ಯವಾಗಿರುವುದು ತಿಳಿದುಬಂದಿದೆ.
ಈ ಘಟನೆಗೆ ಸಾರ್ವಜನಿಕ ವಲಯದಲ್ಲಿ ಆಸ್ಪತ್ರೆ ಸಿಬ್ಬಂದಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸಮಯೋಚಿತವಾಗಿ ಸ್ಪಂದಿಸಿ ಮಗುವಿನ ಪ್ರಾಣ ಉಳಿಸಿದ ಪತ್ರಕರ್ತನ ಸಾಮಾಜಿಕ ಕಾಳಜಿಗೆ ಸಾರ್ವಜನಿಕರು ಶಹಬ್ಬಾಶ್ ಹೇಳಿದ್ದಾರೆ.

