ಬೆಂಗಳೂರು: ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಚಾರಣ (ಟ್ರೆಕ್ಕಿಂಗ್) ಕೈಗೊಳ್ಳುವವರಿಗೆ ಅರಣ್ಯ ಇಲಾಖೆ ಹೊಸ ಹಾಗೂ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಇನ್ಮುಂದೆ ಅರಣ್ಯ ಇಲಾಖೆಯ ಅನುಮೋದಿತ ಪಥಗಳಲ್ಲಿ ಪ್ರಕೃತಿ ಮಾರ್ಗದರ್ಶಕರಿಲ್ಲದೆ ಚಾರಣ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಚಾರಣದ ವೇಳೆ ಪ್ರವಾಸಿಗರು ನಾಪತ್ತೆಯಾಗಿರುವ ಹಾಗೂ ಅನಾಹುತಗಳಿಗೆ ಗುರಿಯಾದ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ, ‘ಪ್ರಮಾಣಿತ ಕಾರ್ಯಾಚರಣೆ ವಿಧಾನ’ (SOP) ಬಿಡುಗಡೆ ಮಾಡಿದೆ.
ಹೊಸ ನಿಯಮಗಳ ಪ್ರಮುಖ ಅಂಶಗಳು:
ಮಾರ್ಗದರ್ಶಕರು ಕಡ್ಡಾಯ: ಪ್ರತಿ 10 ಚಾರಣಿಗರಿಗೆ ಒಬ್ಬ ಸ್ಥಳೀಯ ಗೈಡ್ ಇರಲಿದ್ದಾರೆ. ಒಬ್ಬರೇ ಚಾರಣಿಗ ಬಂದರೂ ಗೈಡ್ ಒದಗಿಸಲಾಗುತ್ತದೆ.
ಜಿಪಿಎಸ್ ಮತ್ತು ಆಪ್ ಕಡ್ಡಾಯ: ಚಾರಣಿಗರು ಪಥದ ನಕ್ಷೆ ಹೊಂದಿರುವ ಮೊಬೈಲ್ ಆಪ್ ಬಳಸಬೇಕು. ಗೈಡ್ಗಳ ಬಳಿ ಜಿಪಿಎಸ್ ಹೊಂದಿದ ವಾಕಿ-ಟಾಕಿ ಇರಲಿದೆ.
ಮಿತಿ ಮತ್ತು ನೋಂದಣಿ: ಒಂದು ಪಥದಲ್ಲಿ ದಿನಕ್ಕೆ ಗರಿಷ್ಠ 150 ಜನರಿಗೆ ಮಾತ್ರ ಅವಕಾಶ. ಆನ್ಲೈನ್ ಮುಂಗಡ ನೋಂದಣಿ ಕಡ್ಡಾಯ.
ಕಟ್ಟುನಿಟ್ಟಿನ ನಿಷೇಧ: ಅರಣ್ಯದೊಳಗೆ ಪ್ಲಾಸ್ಟಿಕ್, ಶಬ್ದ ಮಾಡುವ ಸಾಧನಗಳು, ಹರಿತವಾದ ವಸ್ತುಗಳು ಹಾಗೂ ಕ್ಯಾಂಪ್ ಫೈರ್ ಸಂಪೂರ್ಣ ನಿಷೇಧ.
ಹೆಚ್ಚುವರಿ ನಿಯಮಗಳು:
ಅಪ್ರಾಪ್ತ ವಯಸ್ಕರು ಚಾರಣಕ್ಕೆ ತೆರಳಲು ಪೋಷಕರ ಅನುಮತಿ ಪತ್ರ ಕಡ್ಡಾಯವಾಗಿದೆ. ಹಿರಿಯ ನಾಗರಿಕರು ದೈಹಿಕ ಸದೃಢತೆಯ ಪ್ರಮಾಣಪತ್ರ ಸಲ್ಲಿಸಬೇಕು. ಪ್ರತಿ ಅರ್ಧಗಂಟೆಗೆ ಗೈಡ್ಗಳು ವಾಕಿ-ಟಾಕಿ ಮೂಲಕ ಬೇಸ್ ಕ್ಯಾಂಪ್ಗೆ ಮಾಹಿತಿ ನೀಡುವ ಮೂಲಕ ಸುರಕ್ಷತೆ ಖಚಿತಪಡಿಸಬೇಕು.
ಚಾರಣಿಗರ ಅನುಕೂಲಕ್ಕಾಗಿ ರಾಜ್ಯದ ಎಲ್ಲಾ ಪಥಗಳ ಮಾಹಿತಿ aranyavihaara.karnataka.gov.in ಜಾಲತಾಣದಲ್ಲಿ ಲಭ್ಯವಿದೆ.
ಈ ಹೊಸ ನಿಯಮಗಳ ಮೂಲಕ ಅರಣ್ಯ ಸಂರಕ್ಷಣೆ ಹಾಗೂ ಚಾರಣಿಗರ ಸುರಕ್ಷತೆಯನ್ನು ಖಚಿತಪಡಿಸಲು ಇಲಾಖೆ ಮುಂದಾಗಿದೆ.

