ಬೆಂಗಳೂರು: ರಾಜ್ಯದಲ್ಲಿ ಅನೇಕ ಜನರು ಅಡುಗೆ ಎಣ್ಣೆ ಮತ್ತೆ ಮತ್ತೆ ಬಳಕೆ ಮಾಡುತ್ತಿರುವ ಮಾಹಿತಿ ಬಂದ ಕಾರಣ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಬಹುತೇಕ ಬೇಕರಿ, ಹೋಟೆಲ್ ಹಾಗೂ ಎಣ್ಣೆ ಉದ್ಯಮಗಳನ್ನ ಮಾಡುತ್ತಿರುವರಿಗೆ ಆರೋಗ್ಯ ಇಲಾಖೆ ಆದೇಶ ನೀಡಿದ್ದು, ಯಾವುದೇ ಕಾರಣಕ್ಕೂ ಅಡುಗೆ ಎಣ್ಣೆಯನ್ನ ಮರು ಬಳಕೆ ಮಾಡಬಾರದು ಎಂದು ತಿಳಿಸಿದೆ. ಇನ್ನು ಇದಿಷ್ಟೇ ಅಲ್ಲದೇ, ಅಡುಗೆ ಎಣ್ಣೆ ತಯಾರಿಕಾ ಘಟಕ ನಡೆಸುತ್ತಿರುವವರು ಕಡ್ಡಾಯವಾಗಿ ತಪ್ಪದೇ ಆರು ತಿಂಗಳಿಗೊಮ್ಮೆ ಗುಣಮಟ್ಟ ತಪಾಸಣೆ ಮಾಡಿಸಬೇಕು ಎಂದು ಇಲಾಖೆ ಆದೇಶ ಹೊರಡಿಸಿದೆ.
ಆರೋಗ್ಯ ಇಲಾಖೆ ನೀಡಿರುವ ಆದೇಶದ ಪ್ರಕಾರ, ಪ್ಯಾಕಿಂಗ್ ಮಾಡುವಾಗ ಹಾಗೂ ಲೇಬಲಿಂಗ್ ಮಾಡುವಾಗ ಸ್ವಚ್ಛತೆ ಕಾಪಾಡಿಕೊಳ್ಳುವುದು ಕಡ್ಡಾಯ ಹಾಗೂ ಎ&ಡಿ ವಿಟಮಿನ್ ಇರುವ ಎಣ್ಣೆ ಮಾರಾಟ ಮಾಡಬೇಕು ಎಂದು ತಿಳಿಸಿದೆ. ಇದರ ಜೊತೆಗೆ ಟ್ರಾನ್ಸ್ ಫ್ಯಾಟ್ ಕಡಿಮೆ ಇರುವ ಎಣ್ಣೆಯನ್ನು ಮಾತ್ರ ಬಳಕೆ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಸದ್ಯ 32,68,999 ಲೀಟರ್ ಬಳಕೆ ಮಾಡಿದ ಎಣ್ಣೆ ಇರುವುದು ಪತ್ತೆಯಾಗಿದ್ದು, ಅದನ್ನ ಸೂಕ್ತ ರೀತಿಯಲ್ಲಿ ಸೂಕ್ತ ವಿಲೇವಾರಿ ಮಾಡಲು ಹಾಗೂ ಬಯೋ ಡಿಸೇಲ್ ಘಟಕಕ್ಕೆ ಕಳುಹಿಸಲು ಬೇಕಾದ ವ್ಯವಸ್ಥೆ ಮಾಡಲಾಗಿದೆ, ಮುಂದಿನ ದಿನಗಳಲ್ಲಿ ಸಹ ಈ ರೀತಿಯೇ ಮಾಡಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಕಳೆದ ಎರಡು-ಮೂರು ತಿಂಗಳಿನಿಂದ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದೆ. ಹಾಸನ ಜಿಲ್ಲೆಯೊಂದರಲ್ಲಿಯೇ ಸುಮಾರು 30ಕ್ಕೂ ಹೆಚ್ಚು ಜನ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಅಲ್ಲದೇ, ವಿವಿಧ ಜಿಲ್ಲೆಗಳಲ್ಲಿ ಸಹ ಹೃದಯಾಘಾತ ಪ್ರಕರಣಗಳು ವರದಿಯಾದ ಬೆನ್ನಲ್ಲೆ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಸಮಿತಿ ರಚನೆ ಮಾಡಿತ್ತು. ಈ ಸಮಿತಿ ನೀಡಿದ ವರದಿಯಲ್ಲಿ ಹೃದಯಾಘಾತಕ್ಕೆ ಜೀವನಶೈಲಿ ಹಾಗೂ ಬೊಜ್ಜು ಕಾರಣ ಎಂದು ತಿಳಿಸಲಾಗಿದೆ.

