ಬೆಂಗಳೂರು: ಈ ಸಲ ಕಪ್ ನಮ್ದೇ… ಕಳೆದ ಹದಿನೆಂಟು ವರ್ಷಗಳಿಂದ ಕೇಳಿ ಬರುತ್ತಿರುವ ಆರ್ಸಿಬಿ ಅಭಿಮಾನಿಗಳು ಬಹು ದೊಡ್ಡ ಕೂಗು ನಿಜವಾಗುವ ಸಮಯ ಸಮೀಪಿಸಿದೆ. ಇಂದು ಅಹ್ಮದಾಬಾದ್ನಲ್ಲಿ ನಡೆಯುವ ಐಪಿಎಲ್ ಫೈನಲ್(IPL 2025 Final) ಪಂದ್ಯದಲ್ಲಿ ಕನ್ನಡಿಗರ ನೆಚ್ಚಿನ ತಂಡ ಆರ್ಸಿಬಿ ಪಂಜಾಬ್(rcb vs pbks) ತಂಡದ ಸವಾಲು ಎದುರಿಸಲಿದೆ.
ಸಟ್ಟಾ ಬಜಾರ್ ಭವಿಷ್ಯ :
ಎರಡೂ ತಂಡಗಳು ಕಳೆದ 17 ವರ್ಷಗಳಿಂದ ಒಮ್ಮೆಯೂ ಐಪಿಎಲ್ ಪ್ರಶಸ್ತಿ ಗೆದ್ದಿಲ್ಲ. ಹೀಗಾಗಿ ಉಭಯ ತಂಡಗಳಿಗೂ ಈ ಪಂದ್ಯ ಬಹಳ ಮುಖ್ಯವಾಗಿದೆ. ಇದೀಗ ಈ ಫೈನಲ್ ಪಂದ್ಯಕ್ಕೂ ಮುನ್ನ, ನಿಖರ ಭವಿಷ್ಯಕ್ಕೆ ಹೆಸರಾದ ರಾಜಸ್ಥಾನದ ಹೆಸರಾಂತ ಬೆಟ್ಟಿಂಗ್ ಬಜಾರ್, ಫಲೋಡಿ ಬಾಜಿ ಮಾರುಕಟ್ಟೆ (Satta Bazaar Projection), ಆರ್ಸಿಬಿ ಮತ್ತು ಪಂಜಾಬ್ ನಡುವೆ ಯಾವ ತಂಡ ಮೊದಲ ಬಾರಿಗೆ ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿಯುತ್ತದೆ ಎಂದು ಭವಿಷ್ಯ ನುಡಿದಿದೆ.
ಸಿಎಂ, ಡಿಸಿಎಂ ಶುಭಾಷಯ :
ಪಂದ್ಯಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah), ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಟ್ವೀಟ್ ಮಾಡಿ ಆರ್ಸಿಬಿಗೆ ಶುಭ ಹಾರೈಸಿದ್ದಾರೆ. “ಪಂಜಾಬ್ ತಂಡದ ವಿರುದ್ಧ ಇಂದು ಫೈನಲ್ ಪಂದ್ಯವಾಡುತ್ತಿರುವ ನಮ್ಮ ಆರ್ಸಿಬಿ ತಂಡಕ್ಕೆ ಶುಭ ಹಾರೈಕೆಗಳು. ಆರ್ಸಿಬಿ ತಂಡದ ಸೋಲು – ಗೆಲುವು, ಏಳು – ಬೀಳುಗಳಲ್ಲಿ ಸದಾ ಜತೆ ನಿಂತು, ಮೊದಲ ಆವೃತ್ತಿಯಿಂದ ಇಂದಿನವರೆಗೂ ಅದೇ ರೀತಿಯ ಪ್ರೀತಿ – ಸ್ಪೂರ್ತಿ ನೀಡುತ್ತಿರುವ ಕೋಟ್ಯಂತರ ಅಭಿಮಾನಿಗಳಿಗಾಗಿ ಈ ಬಾರಿ ಆರ್ಸಿಬಿ ಕಪ್ ಗೆಲ್ಲಲಿ ಎನ್ನುವುದು ನನ್ನ ಅಂತರಾಳದ ಬಯಕೆ. ತಾಳ್ಮೆಯ ಫಲ ಸಿಹಿಯಾಗಿರುತ್ತದೆಯಂತೆ, ಆ ಸಿಹಿ ಇಂದು ಕನ್ನಡಿಗರ ಮತ್ತು ಜಗತ್ತಿನಾದ್ಯಂತ ಇರುವ ಆರ್ಸಿಬಿ ಅಭಿಮಾನಿಗಳ ಪಾಲಿಗಿರಲಿ ಎಂದು ಹಾರೈಸುತ್ತೇನೆ. ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಆರ್ಸಿಬಿ ಜೆರ್ಸಿ ತೊಟ್ಟು ತಂಡ ಈ ಬಾರಿ ಕಪ್ ಗೆಲ್ಲಲಿ ಎಂದು ಹಾರೈಸಿದ್ದಾರೆ. “ಕಳೆದ 18 ವರ್ಷಗಳಿಂದ ಆರ್ಸಿಬಿ ತಂಡ ಐಪಿಎಲ್ ಚಾಂಪಿಯನ್ಶಿಪ್ ಗೆಲ್ಲಲಿ ಅಂತ ಹಾರೈಸುತ್ತಿದ್ದೇವೆ, ಇವತ್ತು ಮತ್ತೊಂದು ಅವಕಾಶ, ಇಡೀ ಕರ್ನಾಟಕ ಮಾತ್ರ ಅಲ್ಲ ಭಾರತವೂ ನಿಮ್ಮೊಂದಿಗಿದೆ, ನಿಮ್ಮ ಪರಿಶ್ರಮ ಗಮನಿಸುತ್ತಿದ್ದೇವೆ, ಗೆಲುವು ನಿಮ್ಮದೇ, ಈ ಸಲ ಕಪ್ ನಮ್ದೇ” ಎಂದು ಹಾರೈಸಿದ್ದಾರೆ.
RCB ಗೆದ್ದರೆ ಇಂದಿರಾ ಕ್ಯಾಂಟೀನ್ಗಳಲ್ಲಿ ಫ್ರೀ ಹೋಳಿಗೆ ಊಟ ಮತ್ತು ಮಸಾಲಾ ಪೂರಿ!
ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025ರ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಗೆದ್ದರೆ ಬೆಂಗಳೂರು ಮತ್ತು ಮೈಸೂರಿನಲ್ಲಿ ಅಭಿಮಾನಿಗಳಿಗೆ ವಿಶೇಷ ಸಂತಸ! ನಗರದ ಪ್ರಸಿದ್ಧ ಇಂದಿರಾ ಕ್ಯಾಂಟೀನ್ಗಳಲ್ಲಿ ಉಚಿತ ಹೋಳಿಗೆ ಊಟ ಮತ್ತು ಮಹಾಲಕ್ಷ್ಮಿ ಲೇಔಟ್ನಲ್ಲಿರುವ ಚಾಟ್ಸ್ ಸೆಂಟರ್ಗಳಲ್ಲಿ ಉಚಿತ ಮಸಾಲಾ ಪೂರಿ, ಪಾನಿ ಪುರಿ, ಭೇಲ್ ಪುರಿ ನೀಡಲಾಗುವುದು.
ಮಹಾಲಕ್ಷ್ಮಿ ಲೇಔಟ್ನಲ್ಲಿರುವ ಅನಿಲ್ ಚಾಟ್ಸ್ ಸೆಂಟರ್ RCB ಗೆದ್ದರೆ ಜೂನ್ 4ರಂದು ಸಂಜೆ 5:00 ಗಂಟೆಯಿಂದ ಉಚಿತ ಮಸಾಲಾ ಪೂರಿ, ಪಾನಿ ಪುರಿ, ಭೇಲ್ ಪುರಿ ನೀಡಲು ಸಿದ್ಧವಾಗಿದೆ. “RCB ಕಪ್ ಗೆದ್ದರೆ, ಒಂದು ದಿನದ ಚಾಟ್ಸ್ ನಿಮಗೆ ಉಚಿತ!” ಎಂಬ ಸಂದೇಶದೊಂದಿಗೆ ಅವರು ಬೋರ್ಡ್ ಹಾಕಿಕೊಂಡಿದ್ದಾರೆ.

