ನವದೆಹಲಿ: ಭಾರತೀಯರೇ ಆದಷ್ಟು ಬೇಗ ನಿಮ್ಮ ಸಾವು ಬರಲಿದೆ ಎಂದು. 2001ರ ಸಂಸತ್ ದಾಳಿ ಮಾಸ್ಟರ್ಮೈಂಡ್, ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಬಿಲದಲ್ಲಿ ಕುಳಿತು ಎಚ್ಚರಿಕೆ ನೀಡಿದ್ದಾನೆ. ಇದಲ್ಲದೆ ಪ್ರಧಾನಿ ಮೋದಿ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಅವಹೇಳನಕಾರಿ ಪದ ಬಳಸಿ ಬೆದರಿಕೆ ಹಾಕಿದ್ದಾನೆ.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಬಹವಾಲ್ಪುರದಲ್ಲಿ ನಡೆದ ಸಮಾರಂಭ ಒಂದರಲ್ಲಿ ಈ ಬಗ್ಗೆ ಮಾತನಾಡಿರುವ ಮಸೂದ್ ಅಜರ್ , ಭಾರತದ ಮೇಲೆ ದಾಳಿಯನ್ನು ಮುಂದುವರೆಸಲಾಗುವುದು. ನಾವು ಭಾರತದ ವಿರುದ್ಧ ದಾಳಿ ನಡೆಸುತ್ತಲೇ ಇರುತ್ತೇವೆ ಎಂದು ಹೇಳುವ ಮೂಲಕ ಉಗ್ರ ಉದ್ದಟತನ ಮೆರೆದಿದ್ದಾನೆ.
ಇತ್ತ ಮಸೂದ್ ಅಜರ್ ಹೇಳಿಕೆ ಹೊರಬೀಳುತ್ತಿದ್ದಂತೆ ಕಿಡಿಕಾರಿರುವ ಭಾರತ ಆತನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದು, ಈ ಬಗ್ಗೆ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಸುದ್ದಿಗೋಷ್ಠಿ ನಡೆಸಿ ಕಿಡಿಕಾರಿದ್ದಾರೆ.
2001ರ ಸಂಸತ್ ದಾಳಿ ಮತ್ತು 2019ರ ಪುಲ್ವಾಮಾ ದಾಳಿ ಸೇರಿದಂತೆ ಭಾರತದ ನೆಲದಲ್ಲಿ ಕೆಲವು ಅತ್ಯಂತ ಭಯಾನಕ ಭಯೋತ್ಪಾದಕ ದಾಳಿಗಳಲ್ಲಿ ಮಸೂದ್ ಅಜರ್ ಪ್ರಮುಖ ಪಾತ್ರ ವಹಿಸಿದ್ದ. ಇದೀಗ ಈತನ ಹೇಳಿಕೆ ವಿಶ್ವಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಪಾಕಿಸ್ತಾನದ ನರಿಬುದ್ದಿ ಮತ್ತೊಮ್ಮೆ ಬಟಾಬಯಲಾಗಿದೆ.
ಭಾರತದ ಮೇಲೆ ಅನೇಕ ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿರುವ ಅಜರ್ ವಿರುದ್ಧ ಪಾಕಿಸ್ತಾನವು ಕಠಿಣ ಕ್ರಮ ತೆಗೆದುಕೊಳ್ಳಬೇಕು. ಭಯೋತ್ಪಾದನೆ ವಿಷಯದಲ್ಲಿ ಪಾಕಿಸ್ತಾನದ ದ್ವಂದ್ವ ನಿಲುವನ್ನು ಹೊಂದಿದೆ ಎಂದು ಕಿಡಿಕಾರಿದ್ದಾರೆ.