ಇಸ್ಲಾಮಾಬಾದ್: ಭಾರತದಲ್ಲಿ ನಡೆದ ಮೂರು ಪ್ರಮುಖ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಕೋರನಾಗಿದ್ದ ಲಷ್ಕರ್-ಎ-ತೈಬಾ ಸಂಘಟನೆಯ ಟಾಪ್ ಉಗ್ರನನ್ನು ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಭಾನುವಾರ ಹತ್ಯೆ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.
ಸೈಫುಲ್ಲಾ ಅಲಿಯಾಸ್ ವಿನೋದ್ ಕುಮಾರ್ ಅಲಿಯಾಸ್ ಮೊಹಮ್ಮದ್ ಸಲೀಮ್ ಅಲಿಯಾಸ್ ಖಾಲಿದ್ ಅಲಿಯಾಸ್ ವನಿಯಾಲ್ ಅಲಿಯಾಸ್ ವಾಜಿದ್ ಅಲಿಯಾಸ್ ಸಲೀಂ ಭಾಯ್ ಹೆಸರುಗಳಿಂದ ಮೋಸ್ಟ್ ವಾಂಟೆಡ್ ಆಗಿದ್ದ ಲಷ್ಕರ್ ಉಗ್ರರನನ್ನು ಸಿಂಧ್ ಪ್ರಾಂತ್ಯದ ಬಾದಿನ್ ಜಿಲ್ಲೆಯ ಮಟ್ಲಿ ತಾಲೂಕಿನಲ್ಲಿ ಅಪರಿಚಿತ ಗುಂಪೊಂದು ಹತ್ಯೆ ಮಾಡಿದೆ ಎಂದು ತಿಳಿದುಬಂದಿದೆ.
ವಿನೋದ್ ಕುಮಾರ್, ಮೊಹಮ್ಮದ್ ಸಲೀಂ, ಖಾಲಿದ್, ವನಿಯಾಲ್, ವಾಜಿದ್ ಮತ್ತು ಸಲೀಂ ಭಾಯ್ ಸೇರಿದಂತೆ ಬಹು ಅಲಿಯಾಸ್ಗಳಿಂದ ಕರೆಯಲ್ಪಡುವ ಸೈಫುಲ್ಲಾ, ಎಲ್ಇಟಿಯ ಕಾರ್ಯಾಚರಣೆಗಳು, ನೇಮಕಾತಿ, ನಿಧಿಸಂಗ್ರಹಣೆ ಮತ್ತು ಗಡಿಯಾಚೆಗಿನ ಒಳನುಸುಳುವಿಕೆಯಲ್ಲಿ ಪ್ರಮುಖ ವ್ಯಕ್ತಿಯಾಗಿದ್ದ.
2001 ರಲ್ಲಿ ರಾಂಪುರದಲ್ಲಿ ನಡೆದ ಸಿಆರ್ಪಿಎಫ್ ಶಿಬಿರದ ಮೇಲಿನ ದಾಳಿ, 2005 ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (IISc) ನಡೆದಿದ್ದ ಗುಂಡಿನ ದಾಳಿ ಹಾಗೂ 2006 ರಲ್ಲಿ ನಾಗ್ಪುರದ ಆರ್ಎಸ್ಎಸ್ ಪ್ರಧಾನ ಕಚೇರಿ ಮೇಲೆ ನಡೆದಿದ್ದ ದಾಳಿಗಳಿಗೆ ಖಾಲಿದ್ ಪ್ರಮುಖ ಸಂಚುಕೋರನಾಗಿದ್ದ.
5 ವರ್ಷಗಳ ಅವಧಿಯಲ್ಲಿ ನಡೆದಿದ್ದ ಈ ಮೂರು ದಾಳಿಗಳು ಹಲವಾರು ಜೀವಗಳನ್ನು ಬಲಿ ಪಡೆದಿದ್ದವು. ಇದಾದ ಬಳಿಕ ʻವಿನೋದ್ ಕುಮಾರ್ʼ ಹೆಸರಿನಲ್ಲಿ ಖಾಲಿದ್ ಹಲವು ವರ್ಷಗಳ ಕಾಲ ನೇಪಾಳದಲ್ಲಿ ತಲೆ ಮರೆಸಿಕೊಂಡಿದ್ದ. ಅಲ್ಲಿಯೇ ನಗ್ಮಾ ಬಾನು ಎಂಬ ಮಹಿಳೆಯನ್ನ ವಿವಾಹವಾಗಿದ್ದ. ನಕಲಿ ಗುರುತು ಹೊಂದಿದ್ದ ಖಾಲಿದ್ ಆಗಾಗ್ಗೆ ಭಾರತಕ್ಕೆ ಬಂದು ಲಷ್ಕರ್ ಸಂಘಟನೆಯ ಉಗ್ರ ಚಟುವಟಿಕೆಗಳನ್ನು ಸಂಘಟಿಸುತ್ತಿದ್ದ ನೇಮಕಾತಿ ಮತ್ತು ಲಾಜಿಸ್ಟಿಕ್ಸ್ನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಎಂದು ವರದಿಗಳಿಂದ ತಿಳಿದುಬಂದಿದೆ.

