ಪ್ರಯಾಗ್ರಾಜ್. ಜ.29 : ಮೌನಿ ಅಮಾವಾಸ್ಯೆಯಂದು ಸ್ನಾನಕ್ಕೆ ಜನಸಂದಣಿ ಹೆಚ್ಚಾದ ಕಾರಣ ಮಹಾ ಕುಂಭದಲ್ಲಿ ನೂಕುನುಗ್ಗಲು ಉಂಟಾಜಿ ಕಾಲ್ತುಳಿತ ಸಂಭವಿಸಿದೆ. ಇದರಲ್ಲಿ ಅನೇಕರು ಸಾವನ್ನಪ್ಪಿರುವ ಶಂಕೆಯಿದ್ದು ಹಲವರು ಗಾಯಗೊಂಡಿದ್ದಾರೆ. ಪ್ರಸ್ತುತ ಯಾರ ಸಾವಿನ ಬಗ್ಗೆಯೂ ಯಾವುದೇ ಮಾಹಿತಿ ಇಲ್ಲ. ಈ ಅಪಘಾತ ರಾತ್ರಿ 1 ಗಂಟೆ ಸುಮಾರಿಗೆ ಸಂಭವಿಸಿದೆ.
ಮೌನಿ ಅಮವಾಸ್ಯೆಯಂದು ಸ್ನಾನ ಮಾಡಲು ಸಂಗಮದಲ್ಲಿ ಜನಸಂದಣಿ ಇದ್ದಕ್ಕಿದ್ದಂತೆ ಹೆಚ್ಚಾಗಲು ಪ್ರಾರಂಭಿಸಿತು. ಜನರು ಮುಖ್ಯ ಸಂಗಮದಲ್ಲಿ ಮಾತ್ರ ಸ್ನಾನ ಮಾಡಬೇಕೆಂದು ಒತ್ತಾಯಿಸಲು ಪ್ರಾರಂಭಿಸಿದರು. ನಂತರ ಇದ್ದಕ್ಕಿದ್ದಂತೆ ಹೆಚ್ಚುತ್ತಿರುವ ಜನಸಂದಣಿಯ ಒತ್ತಡದಿಂದಾಗಿ ಕಾಲ್ತುಳಿತ ಉಂಟಾಯಿತು. ಸುತ್ತಲೂ ಕಿರುಚಾಟ ಕೇಳಿಬಂದವು.
ಎರಡನೇ ಅಮೃತಸ್ನಾನದ ದಿನವಾದ ಬುಧವಾರ ಲಕ್ಷಾಂತರ ಭಕ್ತರು ಪ್ರಯಾಗ್ರಾಜ್ ಯಾತ್ರೆ ಕೈಗೊಂಡಿರುವುದರಿಂದ ಭಾರಿ ಜನದಟ್ಟಣೆ ಕಂಡುಬಂದಿದೆ. ಕಾಲ್ತುಳಿತದ ವೇಳೆ ನೂಕು ನುಗ್ಗಲು ಉಂಟಾದಾಗ ಸ್ನಾನಕ್ಕೆ ಸೇರಿದ್ದ ಭಕ್ತರು ಚೆಲ್ಲಾಪಿಲ್ಲಿಯಾಗಿ ಓಡಿದ್ದು, ಹಲವರು ನಾಪತ್ತೆಯಾಗಿರುವುದಾಗಿ ವರದಿಯಾಗಿದೆ. ತೀವ್ರ ಗಾಯಗೊಂಡವರನ್ನು ತಕ್ಷಣವೇ ಆಂಬ್ಯುಲೆನ್ಸ್ನಲ್ಲಿ ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಜನವರಿ 13ರಂದು ಆರಂಭವಾದ ಮಹಾಕುಂಭ ಮೇಳಕ್ಕೆ ಈ ಬಾರಿ ಅತ್ಯಧಿಕ ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದು, ಇದುವರೆಗೆ ಸುಮಾರು 15 ಕೋಟಿ ಮಂದಿ ಸಂಗಮಕ್ಷೇತ್ರದಲ್ಲಿ ಪವಿತ್ರಸ್ನಾನ ಕೈಗೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.
ತಾತ್ಕಾಲಿಕ ತಡೆ :
ಕಾಲ್ತುಳಿತದಲ್ಲಿ ಗಾಯಗೊಂಡಿರುವ ಹಲವರ ಪೈಕಿ ಕೆಲವರು ಸಾವನ್ನಪ್ಪಿದ್ದಾರೆಂದು ವರದಿಗಳು ತಿಳಿಸಿವೆ. ಕಾಲ್ತುಳಿತ ಘಟನೆ ವರದಿಯಾದ ಬೆನ್ನಲ್ಲೇ 2ನೇ ಅಮೃತಸ್ನಾನಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ ಎಂದು ಅಖಿಲ ಭಾರತೀಯ ಅಖಾರಾ ಪರಿಷತ್ ಅಧ್ಯಕ್ಷ ಶ್ರೀ ಮಹಾಂತ ರವೀಂದ್ರ ಅವರು ಹೇಳಿದ್ದಾರೆ.
ಅಮೃತಸ್ನಾನಕ್ಕೆ ಆಗಮಿಸದಂತೆ ಆಡಳಿತಯಂತ್ರ ನಮಗೆ ಮನವಿ ಮಾಡಿಕೊಂಡಿದೆ. ಶ್ರೀಗಳು ಮತ್ತು ನಾಗಾ ಸಾಧುಗಳ ಮೆರವಣಿಗೆ ಮುಂದೆ ಸಾಗುವ ಸಿದ್ಧತೆ ನಡೆದಿದ್ದರೂ, ನಾವು ಪ್ರಸ್ತುತ ಹಿಂದಿರುಗಿದ್ದೇವೆ. ಸದ್ಯಕ್ಕೆ ಅಮೃತಸ್ನಾನ ತಡೆಹಿಡಿಯಲಾಗಿದೆ. ಶೀಘ್ರವೇ ಮುಂದಿನ ಕ್ರಮ ಕೈಗೊಳ್ಳುತ್ತೇವೆಂದು ಅಧಿಕಾರಿಗಳೂ ತಿಳಿಸಿದ್ದಾರೆ.

