ಇಂಫಾಲ್: ಮಣಿಪುರದಲ್ಲಿ ಮತ್ತೆ ಹಿಂಸಾಚಾರ ನಡೆದಿದೆ. ಮೈಥಿ ಸಮುದಾಯದ ಸ್ವಯಂ ಸೇವಕ ಗುಂಪು ಅರಾಂಬೈ ಟೆಂಗೋಲ್ (AT)ನ ಪ್ರಮುಖ ನಾಯಕನನ್ನು ಪೊಲೀಸರು ಬಂಧಿಸಿದ್ದು ಖಂಡಿಸಿ ಹಲವೆಡೆ ಭಾರಿ ಪ್ರತಿಭಟನೆ ಮಾಡಲಾಗಿದೆ.
ಮಣಿಪುರದಲ್ಲಿ ಮೈಥಿ ಮತ್ತು ಕುಕಿ ಸಮುದಾಯಗಳ ನಡುವಿನ ಘರ್ಷಣೆಯ ಕಿಡಿ ಇನ್ನೂ ಹಾಗೆಯೇ ಉಳಿದುಕೊಂಡಿದೆ. ಆಗಾಗ್ಗೆ ಇದು ಭುಗಿಲೇಳುವ ಲಕ್ಷಣಗಳು ಕಂಡು ಬರುತ್ತಿವೆ. ಪ್ರಕರಣಕ್ಕೆ ಸಂಬಂಧಿಸಿ ತನಿಖಾಧಿಕಾರಿಗಳು ಶಂಕಿತರನ್ನು ಬಂಧಿಸಲು ಹೋದಾಗ ಭಾರಿ ವಿರೋಧವನ್ನು ಎದುರಿಸುತ್ತಿದ್ದಾರೆ.
ಶನಿವಾರ ಮೈಥಿ ಸಮುದಾಯದ ಸ್ವಯಂ ಸೇವಕ ಗುಂಪು ಅರಾಂಬೈ ಟೆಂಗೋಲ್ (AT)ನ ಪ್ರಮುಖ ನಾಯಕನನ್ನು ಪೊಲೀಸರು ಬಂಧಿಸಿದ್ದು, ಈ ವೇಳೆ ಯುವಕರ ಗುಂಪೊಂದು ತಲೆಗೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವುದಾಗಿ ಬೆದರಿಕೆ ಹಾಕಿ ಹೈಡ್ರಾಮಾ ಮಾಡಿದೆ.
ಮೈಥಿ ಮತ್ತು ಕುಕಿ ಸಮುದಾಯಗಳ ಘರ್ಷಣೆಯಲ್ಲಿ ಪಾಲ್ಗೊಂಡಿರುವ ಆರೋಪದಲ್ಲಿ ಭದ್ರತಾ ಪಡೆಗಳು ಎಟಿ ನಾಯಕ ಕಾನನ್ ಸಿಂಗ್ ಅವರನ್ನು ಶನಿವಾರ ಬಂಧಿಸಿತ್ತು. ಇದಾದ ಬಳಿಕ ಶನಿವಾರ ರಾತ್ರಿ ಮಣಿಪುರದ ರಾಜಧಾನಿ ಇಂಫಾಲ್ನಲ್ಲಿ ಪ್ರತಿಭಟನೆಗಳು ಭುಗಿಲೆದ್ದವು. ಈ ವೇಳೆ ಯುವಕರ ಗುಂಪೊಂದು ತಮ್ಮ ತಲೆಗೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವುದಾಗಿ ಬೆದರಿಕೆ ಹಾಕಿದೆ.
ಕಾನನ್ ಸಿಂಗ್ ಬಂಧನವನ್ನು ಖಂಡಿಸಿ ಪ್ರತಿಭಟನಾಕಾರರು ಟೈರ್ಗಳನ್ನು ಸುಟ್ಟು ರಸ್ತೆಗಳನ್ನು ತಡೆದರು. ಕೆಲವು ಕಡೆ ಗುಂಡಿನ ಶಬ್ದವೂ ಕೇಳಿಬಂದಿತ್ತು ಎನ್ನಲಾಗಿದೆ.
2024ರ ಫೆಬ್ರವರಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮೊಯಿರಾಂಗ್ಥೆಮ್ ಅಮಿತ್ ಅವರ ಮನೆ ಮೇಲೆ ನಡೆದ ದಾಳಿ ಮತ್ತು ನಂತರ ನಡೆದ ಹಿರಿಯ ಪೊಲೀಸ್ ಅಧಿಕಾರಿಯ ಅಪಹರಣ ಪ್ರಕರಣದಲ್ಲಿ ಕಾನನ್ ಸಿಂಗ್ ಪ್ರಮುಖ ಶಂಕಿತ ಎನಿಸಿಕೊಂಡಿದ್ದಾನೆ.
ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಬಿಷ್ಣುಪುರ, ಇಂಫಾಲ್ ಪಶ್ಚಿಮ, ಇಂಫಾಲ್ ಪೂರ್ವ, ತೌಬಲ್ ಮತ್ತು ಕಕ್ಚಿಂಗ್ ಎಂಬ ಐದು ಜಿಲ್ಲೆಗಳಲ್ಲಿ ಐದು ದಿನಗಳವರೆಗೆ ಕರ್ಫ್ಯೂ ವಿಧಿಸಲಾಗಿದೆ ಮತ್ತು ಇಂಟರ್ನೆಟ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮಣಿಪುರದಲ್ಲಿ ಎಟಿ ಮುಖ್ಯಸ್ಥ ಕೊರೌಂಗನ್ಬಾ ಖುಮಾನ್ ವಿರುದ್ಧದ ಹಲವಾರು ಪ್ರಕರಣಗಳನ್ನು ಪರಿಶೀಲಿಸುತ್ತಿದೆ ಎನ್ನಲಾಗಿದೆ.

