ಬೆಂಗಳೂರು : ತಾವು ಸಕ್ರಿಯ ರಾಜಕಾರಣದಲ್ಲಿ ಇಲ್ಲದಿದ್ದರೂ ನಿರಂತರವಾಗಿ ತಮ್ಮ ಹಾಗೂ, ತಮ್ಮ ಸಮುದಾಯದ, ಕುಟುಂಬದ ವಿರುದ್ಧ ಅವಹೇಳನಕಾರಿ ಬಿಜೆಪಿಯು ಕೋಮುವಾದಿ ಹೇಳಿಕೆ ನೀಡುತ್ತಿದೆ ಎಂದು ಆರೋಪಿಸಿ ಸಚಿವ ದಿನೇಶ್ ಗುಂಡೂರಾವ್ ಅವರ ಪತ್ನಿ ಟಬು ರಾವ್ (ತಬಸುಮ್ ರಾವ್) ಅವರು ಕರ್ನಾಟಕ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
ಕೆಲವೊಮ್ಮೆ ಮಹಿಳೆಯರ ಮೇಲೆ ಹಲ್ಲೆ ಮಾಡಿದರೆ ಅದು ತಪ್ಪೇ..ಅದು ಕ್ಷುಲ್ಲಕವಾದರೂ ಮಹಿಳೆಯರ ಗೌರವಕ್ಕೆ ಧಕ್ಕೆ ತರುವುದು, ನಿಂದಿಸುವುದು ಮಹಾ ತಪ್ಪು. ಬಿಜೆಪಿ ಮತ್ತು ಅದರ ಸೋಷಿಯಲ್ ಮೀಡಿಯಾ ಮೂಲಕ ತನ್ನ ಹಾಗೂ ತಮ್ಮ ಸುಮುದಾಯದ ಬಗ್ಗೆ ಹೀನಾಯವಾಗಿ ನಿಂದಿಸಿದೆ ಎಂದು ಶಾಸಕ ಬಸನಗೌಡ ಯತ್ನಾಳ್ ಅವರನ್ನು ಉಲ್ಲೇಖಿಸಿ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಅವರಿಗೆ ಪತ್ರ ಬರೆದು, ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಇತ್ತಿಚೆಗೆ ಯತ್ನಾಳ್, ಸಚಿವ ದಿನೇಶ್ ಗುಂಡೂರಾವ್ ಅವರ ಮನೆ ಅರ್ಧ ಪಾಕಿಸ್ತಾನದಂತಿದೆ ಎಂಬ ಹೇಳಿಕೆ ನೀಡಿದ್ದು, ತೀವ್ರ ಟೀಕೆಗೆ ಕಾರಣವಾಗಿತ್ತು. ಅಲ್ಲದೇ ಯತ್ನಾಳ್ ವಿರುದ್ಧ ಮಾನನಷ್ಟ ಮೊಕದ್ದಮೆಯೂ ದಾಖಲಾಗಿತ್ತು.
ಈ ಪ್ರಕರಣದ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಮನೆಯ ಪತಿ ಅಥವಾ ಪತ್ನಿ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂಬ ಕಾರಣಕ್ಕೆ ಆ ಕುಟುಂಬವನ್ನು ಅರ್ಧ ಪಾಕಿಸ್ತಾನ ಎಂದು ಕರೆಯುವುದು ಎಷ್ಟು ಸರಿ ಎಂದು ಯತ್ನಾಳ್ ಪರ ವಕೀಲರಿಗೆ ಹೈಕೋರ್ಟ್ನ ಜಡ್ಜ್ ಅವರು ತರಾಟೆಗೆ ತೆಗೆದುಕೊಂಡಿದ್ದರು.

