ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ರೋಹಿಣಿ ಪ್ರದೇಶದ ಸಿಆರ್ಪಿಎಫ್ ಶಾಲೆ ಬಳಿಯ ಸ್ಫೋಟ ಪ್ರಕರಣ ಮಾಸುವ ಮುನ್ನವೇ ಇಂದು ದೇಶದಾದ್ಯಂತ ಸಿಆರ್ಪಿಎಫ್ ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ ಸೋಮವಾರ ತಡರಾತ್ರಿ ದೆಹಲಿಯ ಎರಡು ಮತ್ತು ಹೈದರಾಬಾದ್ನ ಒಂದು ಸಿಆರ್ಪಿಎಫ್ ಶಾಲೆಯ ಆಡಳಿತ ಮಂಡಳಿಗೆ ಇ-ಮೇಲ್ ಮೂಲಕ ಬೆದರಿಕೆ ಸಂದೇಶ ರವಾನಿಸಲಾಗಿದೆ.
ಭಾರತೀಯ ವಿಮಾನಯಾನ ಸಂಸ್ಥೆಗಳು ನಿರ್ವಹಿಸುವ ಸುಮಾರು 30 ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ . ಇಂಡಿಗೊ, ವಿಸ್ತಾರ ಮತ್ತು ಏರ್ ಇಂಡಿಯಾದ ವಿಮಾನಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ. ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ವಿಮಾನಯಾನ ಸಂಸ್ಥೆಗಳ ವಕ್ತಾರರು ತಿಳಿಸಿದ್ದಾರೆ.
ದೆಹಲಿಯ ರೋಹಿಣಿ ಪ್ರದೇಶದ ಪ್ರಶಾಂತ್ ವಿಹಾರದಲ್ಲಿ ಭಾನುವಾರ ಬೆಳಿಗ್ಗೆ ಸ್ಫೋಟ ಸಂಭವಿಸಿತ್ತು. ಶಾಲೆಯ ಆವರಣ ಗೋಡೆ ಹಾಗೂ ಸಮೀಪದ ಕೆಲ ಅಂಗಡಿಗಳಿಗೆ ಹಾನಿಯುಂಟಾಗಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಭಾರಿ ಸ್ಫೋಟದ ಸದ್ದು ಹಾಗೂ ಸ್ಥಳದಲ್ಲಿ ದಟ್ಟವಾದ ಬಿಳಿ ಹೊಗೆಯಿಂದ ಗಾಬರಿಗೊಂಡ ಜನರು, ಮನೆಗಳಿಂದ ಹೊರಗೆ ಓಡಿ ಬಂದಿದ್ದರು.
ಕಚ್ಚಾಬಾಂಬ್ ಅನ್ನು ಪ್ಲಾಸ್ಟಿಕ್ ಬ್ಯಾಗ್ನಲ್ಲಿ ಸುತ್ತಿ, ಒಂದು ಅಡಿ ಆಳದ ಗುಂಡಿ ಅಗೆದು ಅದರಲ್ಲಿ ಇಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದರು. ಘಟನೆ ಸಂಬಂಧ ಭಾರತೀಯ ನ್ಯಾಯಸಂಹಿತೆಯ ವಿವಿಧ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಿದ್ದರು.

