ಮೈಸೂರು: ಒಂದೆಡೆ ಆನೆಗಳಿಗೆ ದಸರಾ ಸಂಭ್ರಮ ಮತ್ತೊಂದೆಡೆ ಸೂತಕದ ಛಾಯೆ. ಮೈಸೂರಿನಲ್ಲಿ ದಸರಾ ಆನೆಗಳ ಮೆರವಣಿಗೆಗೆ ತಯಾರಿ ಹಾಗೂ ಆನೆ ದಿನಾಚರಣೆಯ ಸಂಭ್ರಮದ ಈ ವಾರದಲ್ಲೇ ಹಿರಿಯ ಆನೆಯಾದ ಪದ್ಮಾವತಿ ಎಂಬ ಹೆಣ್ಣಾನೆ ವಯೋಸಹಜ ಅನಾರೋಗ್ಯದಿಂದ ಕಣ್ಮುಚ್ಚಿದೆ. ಮೈಸೂರು ಮೃಗಾಲಯದ ಅತ್ಯಂತ ಹಿರಿಯ ಆನೆ ಎಂದೇ ಕರೆಸಿಕೊಳ್ಳುತ್ತಿದ್ದ 71 ವರ್ಷದ ಹಿರಿಯ ಆನೆ ಪದ್ಮಾವತಿ ಆನೆ ನಿಧನಗೊಂಡಿದೆ.
ಬುಧವಾರದವರೆಗೂ ಪದ್ಮಾವತಿ ಓಡಾಡಿಕೊಂಡು ಚೆನ್ನಾಗಿಯೇ ಇದ್ದಳು. ಆದರೂ ವಯಸ್ಸಿಗೆ ಸಂಬಂಧಿಸಿದ ದೌರ್ಬಲ್ಯದ ಲಕ್ಷಣಗಳು ಕಾಣುತ್ತಿತ್ತು. ಗುರುವಾರ ಬೆಳಿಗ್ಗೆ, ಅದು ಮಲಗಿ ಎದ್ದೇಳಲು ಇಚ್ಛಾಶಕ್ತಿ ತೋರಿಸಲಿಲ್ಲ. ಮೃಗಾಲಯದ ಪಶುವೈದ್ಯಕೀಯ ತಂಡವು ತೀವ್ರ ವೈದ್ಯಕೀಯ ಆರೈಕೆ ಮತ್ತು ಸಹಾಯಕ ಚಿಕಿತ್ಸೆಯನ್ನು ನೀಡಿತು. ಆದರೆ ಗುರುವಾರ ಸಾಯಂಕಾಲ 5:10 ರಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದೆ. ದಶಕಗಳಿಂದ ಸಿಬ್ಬಂದಿ, ಸಂದರ್ಶಕರು ಮತ್ತು ವನ್ಯಜೀವಿ ಉತ್ಸಾಹಿಗಳ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದ್ದ ತನ್ನ ಆನೆಯ ನಷ್ಟಕ್ಕೆ ಮೃಗಾಲಯವು ತೀವ್ರ ದುಃಖವನ್ನು ವ್ಯಕ್ತಪಡಿಸಿದೆ.
1973ರಲ್ಲಿ ಖೆಡ್ಡಾ ಕಾರ್ಯಾಚರಣೆಯ ಸಮಯದಲ್ಲಿ ರಕ್ಷಿಸಲ್ಪಟ್ಟ ಪದ್ಮಾವತಿ 53 ವರ್ಷಗಳ ಕಾಲ ಮೃಗಾಲಯದ ಆರೈಕೆಯಲ್ಲಿತ್ತು. ಅವಳು ಮೂರು ಮಕ್ಕಳ ತಾಯಿಯಾಗಿದ್ದಳು. ಗಜಲಕ್ಷ್ಮೀ, ಕೋಮಲ ಮತ್ತು ಅಭಿಮನ್ಯು ಎಂದು ಮೂರು ಮಕ್ಕಳು ಅವಳಿಗೆ. ಪದ್ಮಾವತಿಯ ಜನನ ವರ್ಷ ಸುಮಾರು 1953-54 ಎಂದು ಅಂದಾಜಿಸಲಾಗಿದೆ ಎಂದು ಮೃಗಾಲಯದ ಆಡಳಿತ ಮಂಡಳಿ ತಿಳಿಸಿದೆ.

