ಬೆಂಗಳೂರು: ಕೆಂಪೇಗೌಡ ಏರ್ಪೋರ್ಟ್ನ ರಾಮೇಶ್ವರಂ ಕೆಫೆ ತಿಂಡಿಯಲ್ಲಿ ಹುಳು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಹಕನ ವಿರುದ್ಧ ಹಣಕ್ಕಾಗಿ ಬ್ಲ್ಯಾಕ್ಮೇಲ್ ಆರೋಪದಡಿ ದೂರು ದಾಖಲಾಗಿದೆ.
ಗುರುವಾರ ಬೆಳಿಗ್ಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ರಾಮೇಶ್ವರಂ ಕೆಫೆಯಲ್ಲಿ ಗ್ರಾಹಕನೋರ್ವ ಪೊಂಗಲ್ ಖರೀದಿಸಿ, ಸೇವಿಸುತ್ತಿರುವಾಗ ಅದರಲ್ಲಿ ಹುಳು ಪತ್ತೆಯಾಗಿದೆ. ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದರು. ವಿಡಿಯೋ ವೈರಲ್ ಆಗುತ್ತಿದ್ದಂತೆ ರಾಮೇಶ್ವರಂ ಕೆಫೆ ಸ್ಪಷ್ಟನೆ ನೀಡಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಗ್ರಾಹಕರು ಆಹಾರ ಮಾಲಿನ್ಯದ ಬಗ್ಗೆ ಸುಳ್ಳು ಆರೋಪ ಹೊರಿಸುತ್ತಿದ್ದು, ಈ ಮೂಲಕ ಬ್ರ್ಯಾಂಡ್ಮೇಲ್ಗೆ ಹಾನಿ ಮಾಡಲು ಹೊರಟಿದ್ದಾರೆ. ಜೊತೆಗೆ ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡಿದ್ದಾರೆ ಎಂದು ಆರೋಪಿಸಿದೆ. ಈ ಸಂಬಂಧ ಗ್ರಾಹಕನ ವಿರುದ್ಧ ದಾಖಲಾಗಿದೆ.
ಭಾರತದ ಅತ್ಯಂತ ಜನಪ್ರಿಯ ಕ್ವಿಕ್ ಸರ್ವಿಸ್ ರೆಸ್ಟೋರೆಂಟ್ ಬ್ರ್ಯಾಂಡ್ಗಳಲ್ಲಿ ಒಂದಾದ ರಾಮೇಶ್ವರಂ ಕೆಫೆ, ತನ್ನ ಬೆಂಗಳೂರು ವಿಮಾನ ನಿಲ್ದಾಣದ ಔಟ್ಲೆಟ್ನಲ್ಲಿ ಆಹಾರ ಮಾಲಿನ್ಯದ ಸುಳ್ಳು ಘಟನೆಯನ್ನು ಪ್ರದರ್ಶಿಸಿ, ಬ್ರ್ಯಾಂಡ್ಗೆ ಹಾನಿಯಾಗಿದೆ. ಜೊತೆಗೆ ಹಣ ಸುಲಿಗೆ ಮಾಡಲು ಯತ್ನಿಸಿದ ವ್ಯಕ್ತಿಗಳ ಗುಂಪಿನ ವಿರುದ್ಧ ಅಧಿಕೃತ ಪೊಲೀಸ್ ದೂರು ದಾಖಲಿಸಿದೆ.
ಬ್ರ್ಯಾಂಡ್ನ ಮುಖ್ಯಸ್ಥರು ನೀಡಿದ ಔಪಚಾರಿಕ ದೂರಿನ ಪ್ರಕಾರ, ಜು.24ರ ಬೆಳಿಗ್ಗೆ ಈ ಘಟನೆ ಸಂಭವಿಸಿದೆ, 5-7 ವ್ಯಕ್ತಿಗಳ ಗುಂಪು ಸಾರ್ವಜನಿಕವಾಗಿ ಗೊಂದಲ ಸೃಷ್ಟಿಸಿದ್ದಾರೆ. ನೀಡಿದ ಆಹಾರದಲ್ಲಿ ಜಿರಳೆಯಿದೆ ಎಂದು ತಪ್ಪಾಗಿ ಆರೋಪಿಸಿದ್ದಾರೆ. ಬಳಿಕ ವ್ಯಕ್ತಿಗಳು ನಮಗೆ ಪರಿಹಾರ ನೀಡದಿದ್ದಲ್ಲಿ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಉಲ್ಲೇಖಿಸಿದೆ.
ಸ್ವಲ್ಪ ಸಮಯದ ನಂತರ ಕೆಫೆಗೆ 25 ಲಕ್ಷ ರೂ. ನಗದು ನೀಡುವಂತೆ ಬೆದರಿಕೆ ಕರೆ ಬಂದಿತ್ತು. ಬಳಿಕ ಕೆಫೆಯು ಕರೆ ದಾಖಲೆಗಳು, ಸಂದೇಶಗಳ ಸ್ಕ್ರೀನ್ಶಾಟ್ ಮತ್ತು ಇತರ ದಾಖಲಾತಿಗಳನ್ನು ಪೊಲೀಸರಿಗೆ ಸಲ್ಲಿಸಿದೆ.
ಈ ಆರೋಪವನ್ನು ತಳ್ಳಿಹಾಕಿರುವ ರಾಮೇಶ್ವರಂ ಕೆಫೆಯ ಸಂಸ್ಥಾಪಕಿ ದಿವ್ಯಾ ರಾಘವ್, ನಮ್ಮ ಆಹಾರದಲ್ಲಿ ಹುಳು ಅಥವಾ ಕೀಟ ಕಂಡುಬಂದಿದೆ ಎಂಬ ಆಧಾರರಹಿತ ಆರೋಪವನ್ನು ನಾವು ಒಪ್ಪುವುದಿಲ್ಲ. ನಾವು ಕಟ್ಟುನಿಟ್ಟಾದ, ಗುಣಮಟ್ಟದ ಪ್ರೋಟೋಕಾಲ್ಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತೇವೆ. ವಿಶೇಷವಾಗಿ ವಿಮಾನ ನಿಲ್ದಾಣಗಳು ಮತ್ತು ಸೂಕ್ಷ್ಮ ಸ್ಥಳಗಳಲ್ಲಿ ಇದು ಸ್ಪಷ್ಟವಾಗಿ ಹಣ ಸುಲಿಗೆ ಮಾಡುವ ಮತ್ತು ನಮ್ಮ ಬ್ರ್ಯಾಂಡ್ಗೆ ಹಾನಿ ಮಾಡುವ ದುರುದ್ದೇಶದ ಕೃತ್ಯವಾಗಿದೆ ಎಂದಿದ್ದಾರೆ.

