ಬೀದರ್: ಕರ್ನಾಟಕದಲ್ಲಿ ಗುರುವಾರ ರಾಜ್ಯವೇ ಬೆಚ್ಚಿ ಬೀಳುವ ಎಟಿಎಂ ದರೋಡೆ ಪ್ರಕರಣ ಬೀದರ್ ಜಿಲ್ಲೆಯಲ್ಲಿ ನಡೆದಿದೆ. ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಎಟಿಎಂಗೆ ಹಾಕಲು ಸಾಗಿಸುತ್ತಿದ್ದ ಹಣವನ್ನು ಸಿನಿಮಾ ಶೈಲಿಯಲ್ಲಿ ಲೂಟಿ ಮಾಡಿ ಪರಾರಿಯಾದ ಘಟನೆ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ನಡೆದಿದೆ. ಈ ವೇಳೆ ಎಸ್ಬಿಐ ಸೆಕ್ಯೂರಿಟಿ ಏಜೆನ್ಸಿ ಸಿಬ್ಬಂದಿ ಮೇಲೆ ಖಾರದ ಪುಡಿ ಎರಚಿ, ಗುಂಡು ಹಾರಿಸಿದ್ದರಿಂದ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದರೆ, ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೆಳಿಗ್ಗೆ 11.30 ಕ್ಕೆ ಜನನಿಬಿಡ ಶಿವಾಜಿ ಚೌಕ್ನಲ್ಲಿರುವ ಎಸ್ಬಿಐ ಬ್ಯಾಂಕ್ ಎಟಿಎಂಗೆ ಹಣವನ್ನು ತುಂಬಿಸಲು ಭದ್ರತಾ ಸಿಬ್ಬಂದಿ CMS ಏಜೆನ್ಸಿಯ ವಾಹನದಲ್ಲಿ ಲಕ್ಷಾಂತರ ಹಣವನ್ನು ತೆಗೆದುಕೊಂಡು ಬಂದಿದ್ದರು. ಇನ್ನೇನು ಎಟಿಎಂಗೆ ಹಣ ಹಾಕಬೇಕು ಎನ್ನುವಷ್ಟರಲ್ಲಿ ಸ್ಥಳಕ್ಕೆ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು, ಏಕಾಏಕಿ ಎಂಟು ಸುತ್ತಿನ ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ ಓರ್ವ ಸಿಬ್ಬಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ, ಮತ್ತೋರ್ವ ಸಿಬ್ಬಂದಿಯನ್ನು ಹೈದರಾಬಾದ್ ಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ದುಷ್ಕರ್ಮಿಗಳ ದಾಳಿಗೆ ಬಲಿಯಾದ ವ್ಯಕ್ತಿಯನ್ನು ಗಿರಿ ವೆಂಕಟೇಶ್ (ಎಟಿಎಂಗಳಿಗೆ ಹಣ ಹಾಕುವ ಸಿಎಂಎಸ್ ಏಜೆನ್ಸಿಯ ಸಿಬ್ಬಂದಿ) ಎಂದು ಗುರುತಿಸಲಾಗಿದೆ.
ಖರೀಮರು 93 ಲಕ್ಷ ರೂ. ಇದ್ದ ಹಣದ ಪೆಟ್ಟಿಗೆಯನ್ನು ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಸ್ಥಳೀಯರ ಫೋನ್ನಲ್ಲಿ ಸೆರೆಯಾಗಿದೆ. ಬೀದರ್ನ ಎಸ್ಬಿಐ ಮುಖ್ಯ ಕಚೇರಿ ಮುಂದೆ ಗುಂಡಿನ ದಾಳಿ ನಡೆದಿದ್ದು, ಬ್ಯಾಂಕ್ ಕಚೇರಿಯ ಮುಂದೆಯೇ ಮೃತದೇಹ ಬಿದ್ದಿದೆ. ಸ್ಥಳಕ್ಕೆ ಬೀದರ್ ಎಸ್ಪಿ ಪ್ರದೀಪ್ ಗುಂಟಿ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರ ತಂಡ ಹಾಗೂ ಶ್ವಾನ ದಳದ ಆಗಮಿಸಿದ್ದು, ಪೊಲೀಸರು ಪ್ರತಿಯೊಂದನ್ನು ಪರಿಶೀಲನೆ ಮಾಡುತ್ತಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಪಕ್ಕದಲ್ಲೇ ಇರುವ ಎಸ್ಬಿಐ ಬ್ಯಾಂಕ್ನ ಎದುರು ಈ ಘಟನೆ ನಡೆದಿದೆ. ಎಟಿಎಂಗೆ ಹಣ ಹಾಕುವ ಪಿಸಿಎಸ್ ಏಜೆನ್ಸಿಯ ಸಿಬ್ಬಂದಿ ಬ್ಯಾಂಕ್ನ ಎದುರುಗಡೆ ಬಂದು ತಮ್ಮ ವಾಹನ ನಿಲ್ಲಿಸಿ, ಎಟಿಎಂ ಹಣ ತುಂಬಲು ವಾಹನದ ಡೋರ್ ತೆಗೆಯುತ್ತಿದ್ದಂತೆ ಅವರ ಮೇಲೆ ಐದು ಸುತ್ತು ಗುಂಡಿನ ದಾಳಿಯಾಗಿದೆ.ಈ ವೇಳೆ ಸಿಬ್ಬಂದಿಯ ಕಣ್ಣಿಗೆ ಖಾರದ ಪುಡಿಯನ್ನೂ ಎರಚಲಾಗಿದೆ. ದಾಳಿ ನಡೆದ ಬಳಿಕ ಹಣದ ಬಾಕ್ಸ್ ತೆಗೆದುಕೊಂಡು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಗಾಯಗೊಂಡಿರುವ ಇನ್ನೊಬ್ಬ ಸಿಬ್ಬಂದಿಯ ಸ್ಥಿತಿ ಕೂಡ ಗಂಭೀರವಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದೇನು..?
ಘಟನೆಗೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟೆ, ಇಂದು ಬೆಳಗ್ಗೆ ಸುಮಾರು 10:30 ಗಂಟೆಗೆ ಎಸ್ಬಿಐ ಬ್ಯಾಂಕಿನಿಂದ ಹಣ ತೆಗೆದುಕೊಂಡು ಎಟಿಎಂಗೆ ಹಾಕಲು ಸೆಕ್ಯೂರಿಟಿ ಏಜೆನ್ಸಿ ಸಿಬ್ಬಂದಿ ತೆರಳುತ್ತಿದ್ದರು. ಈ ವೇಳೆ, ಬೈಕಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು, ಅವರ ಮೇಲೆ ಗನ್ ಫೈರ್ ಮಾಡಿದ್ದಾರೆ. ಘಟನೆಯಲ್ಲಿ ಓರ್ವ ಮೃತಪಟ್ಟರೆ, ಮತ್ತೋರ್ವ ಗಾಯಗೊಂಡಿದ್ದಾರೆ. ಭಾರಿ ಮೊತ್ತದೊಂದಿಗೆ ದುಷ್ಕರ್ಮಿಗಳು ಪರಾರಿಯಾಗಿದ್ದು, ಅವರಿಗಾಗಿ ಶೋಧ ನಡೆದಿದೆ. ಎಷ್ಟು ಹಣ ಎಂಬುದನ್ನು ಬ್ಯಾಂಕ್ ಅಧಿಕಾರಿಗಳು ಮಾಹಿತಿ ನೀಡಲಿದ್ದಾರೆ.

