ರಾಯಚೂರು, ಡಿಸೆಂಬರ್ 24: ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಲಿಂಗಸೂಗೂರು ಪಟ್ಟಣದ ಕೆರೆಯನ್ನು ಪರಿಸರ ಸಂರಕ್ಷಣೆ ಹಾಗೂ ಸರೋವರ ಪುನರುಜ್ಜೀವನ ಕ್ಷೇತ್ರದಲ್ಲಿ ದೇಶಾದ್ಯಂತ ಖ್ಯಾತಿ ಪಡೆದಿರುವ ‘ಲೇಕ್ ಮ್ಯಾನ್’ ಆನಂದ್ ಅವರು ವೀಕ್ಷಿಸಿದರು.
ಈ ವೇಳೆ ಕೆರೆಯ ಹಾಲಿ ಸ್ಥಿತಿ, ಹೂಳೆತ್ತುವಿಕೆ, ನೀರಿನ ಸಂಗ್ರಹ ಸಾಮರ್ಥ್ಯ, ಮಳೆನೀರು ಹರಿವಿನ ಮಾರ್ಗಗಳು ಹಾಗೂ ಕೆರೆ ಬಂಡ್ಗಳ ಬಲವರ್ಧನೆ ಕುರಿತಂತೆ ಸ್ಥಳೀಯ ಸಾರ್ವಜನಿಕರೊಂದಿಗೆ ಚರ್ಚೆ ನಡೆಸಿದರು. ಕೆರೆಯ ಸಮಗ್ರ ಅಭಿವೃದ್ಧಿಗೆ ವೈಜ್ಞಾನಿಕ ಹಾಗೂ ದೀರ್ಘಕಾಲೀನ ಯೋಜನೆ ರೂಪಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕಡಿಮೆ ವೆಚ್ಚದಲ್ಲಿ ಜನಸಹಭಾಗಿತ್ವದೊಂದಿಗೆ ಕೆರೆಗಳನ್ನು ಪುನರುಜ್ಜೀವನಗೊಳಿಸಿದರೆ ಭೂಗರ್ಭ ಜಲಮಟ್ಟ ಹೆಚ್ಚುವುದರ ಜೊತೆಗೆ ರೈತರು ಹಾಗೂ ಸಾರ್ವಜನಿಕರಿಗೆ ಶಾಶ್ವತ ನೀರಿನ ಮೂಲ ಒದಗಿಸಲು ಸಾಧ್ಯವಾಗುತ್ತದೆ ಎಂದು ಲೇಕ್ ಮ್ಯಾನ್ ಆನಂದ್ ತಿಳಿಸಿದರು. ಲಿಂಗಸೂಗೂರು ಕೆರೆಯನ್ನು ಮಾದರಿ ಕೆರೆಯಾಗಿ ಅಭಿವೃದ್ಧಿಪಡಿಸುವ ಎಲ್ಲ ಸಾಧ್ಯತೆಗಳೂ ಇವೆ ಎಂದು ಅವರು ಹೇಳಿದರು.
ಈ ವೀಕ್ಷಣೆಯ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಬಸವಂತರಾಯ ಕುರಿ, ರಮೇಶ್ ಶಾಸ್ತ್ರಿ, ಬಸವರಾಜ ಅಂಗಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ: ರಿಯಾಜ್
ಸಂಪೂರ್ಣ ನ್ಯೂಸ್, ರಾಯಚೂರು

