Shobha Karandlaje : ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಹಾಗೂ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಇಂದು (ಗುರುವಾರ) ಮಧ್ಯ ಕಾಶ್ಮೀರದ ಗಂದೇರ್ಬಲ್ ಜಿಲ್ಲೆಯ ಬಾಲ್ಟಾಲ್ ಮೂಲ ಶಿಬಿರದಿಂದ ಅಮರನಾಥ ಪವಿತ್ರ ಗುಹೆಗೆ ಭಕ್ತರ ಜೊತೆ ಪಾದಯಾತ್ರೆಯನ್ನು ಕೈಗೊಂಡರು.
ಅಮರನಾಥ ಗುಹೆಗೆ ತೆರಳಿ ಹಿಮಲಿಂಗದ ದರ್ಶನ ಪಡೆದರು. ದುರ್ಗಮವಾದ ಹಾದಿಯಲ್ಲಿ ಕಾಲ್ನಡಿಗೆಯಲ್ಲೇ ಸಚಿವೆ ಶೋಭಾ ಕರಂದ್ಲಾಜೆ ಅಮರನಾಥ ಯಾತ್ರೆ ಮುಗಿಸಿದರು. ಪಾದಯಾತ್ರೆಗೂ ಮೊದಲು ಶೋಭಾ ಕರಂದ್ಲಾಜೆ ಇಂದು ಮುಂಜಾನೆ ಬಾಲ್ಟಾಲ್ ಮೂಲ ಶಿಬಿರಕ್ಕೆ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲಿಸಿ, ಭಕ್ತರೊಂದಿಗೆ ಸಂವಹನ ನಡೆಸಿದರು.
2025ರ ಅಮರನಾಥ ಯಾತ್ರೆಯ ಭಾಗವಾಗಿದ್ದಕ್ಕೆ ಅವರು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು. “ಇಂದು, ನಾವೆಲ್ಲರೂ ಭೋಲೆನಾಥನ ದರ್ಶನ ಪಡೆಯಲಿದ್ದೇವೆ. ಇದು ಅದ್ಭುತವೆನಿಸುತ್ತದೆ. ದೇವರು ನಮ್ಮೆಲ್ಲರನ್ನೂ ಆಶೀರ್ವದಿಸಲಿ. ಇಲ್ಲಿನ ವಾತಾವರಣ ಬಹಳ ಆಹ್ಲಾದಕರವಾಗಿದೆ” ಎಂದು ಅವರು ಸುದ್ದಿ ಸಂಸ್ಥೆ ANIಗೆ ತಿಳಿಸಿದ್ದಾರೆ.
ಹಿಮಲಿಂಗಕ್ಕೆ ಇಂದು ಮೊದಲ ಆರತಿ :
ಜಮ್ಮು ಮತ್ತು ಕಾಶ್ಮೀರದ ವಿವಿಧ ಸ್ಥಳಗಳಲ್ಲಿ ಬಿಗಿ ಭದ್ರತಾ ಕ್ರಮಗಳ ನಡುವೆ ಜುಲೈ 2ರಂದು ಅಮರನಾಥ ಯಾತ್ರೆಗೆ ಭಕ್ತರ ಮೊದಲ ಬ್ಯಾಚ್ ಮೂಲ ಶಿಬಿರವನ್ನು ತಲುಪಿತು. ಇಂದು ಮುಂಜಾನೆ ಭಕ್ತರ ಮೊದಲ ತಂಡ ಅಮರನಾಥ ಗುಹೆಯತ್ತ ಹೊರಟಿತು.

ನುನ್ವಾನ್ ಮತ್ತು ಬಾಲ್ಟಾಲ್ ಮೂಲ ಶಿಬಿರಗಳಿಂದ ಯಾತ್ರಾರ್ಥಿಗಳ ಮೊದಲ ಬ್ಯಾಚ್ ಹೊರಡುವ ಮೂಲಕ ಇಂದು ವಾರ್ಷಿಕ ಅಮರನಾಥ ಯಾತ್ರೆ ಪ್ರಾರಂಭವಾಯಿತು. ಈ ಅಮರನಾಥ ಗುಹೆಯ ದಾರಿ ಅತ್ಯಂತ ದುರ್ಗಮವಾದ ಮಾರ್ಗವಾಗಿದೆ.
ಭಕ್ತರ ತಂಡ ಇಂದು ಮಧ್ಯಾಹ್ನದ ವೇಳೆಗೆ ಅಮರನಾಥ ಗುಹೆಯ ಹಿಮಲಿಂಗವನ್ನು (ಬಾಬಾ ಬರ್ಫಾನಿ) ಕಣ್ತುಂಬಿಕೊಂಡಿದ್ದು, ಗುಹೆಯ ಬಾಬಾ ಬರ್ಫಾನಿಗೆ ಇಂದು ಮೊದಲ ಆರತಿ ಮಾಡಲಾಯಿತು. ಶಿವನ ಈ ಗುಹೆಯಲ್ಲಿ ಭಕ್ತರು ಮಂತ್ರ, ಘೋಷಣೆಗಳೊಂದಿಗೆ ದೇವರ ಪೂಜೆಗೆ ಸಾಕ್ಷಿಯಾದರು.
- ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿ : ಸರ್ವಪಕ್ಷ ಸಭೆ ಕರೆದ ಮೋದಿ ಸರ್ಕಾರ
- ಬೀದರ್: ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ
- ದೆಹಲಿ ವಿಧಾನಸಭೆ ಸಂಕೀರ್ಣ ಸ್ಫೋಟಿಸುವುದಾಗಿ ಬೆದರಿಕೆ ಇಮೇಲ್
- ಹಿಂದೂ, ಬೌದ್ಧ, ಸಿಖ್ ಬಿಟ್ಟು ಬೇರೆ ಧರ್ಮಕ್ಕೆ ಮತಾಂತರಗೊಂಡರೆ ಪರಿಶಿಷ್ಟ ಜಾತಿ ಸ್ಥಾನಮಾನ ರದ್ದು : ಸುಪ್ರೀಂ
- ಐಪಿಎಲ್-2026 ಪಂದ್ಯಗಳಿಗೆ ವಿಶೇಷ ಮಾರ್ಗಸೂಚಿ ಪ್ರಕಟಿಸಿದ ಪೊಲೀಸ್ ಇಲಾಖೆ

