ಬೆಂಗಳೂರು: ಕರಾವಳಿ ಅಭಿವೃದ್ಧಿ ಕುರಿತು ಮಾತನಾಡುವ ಮುನ್ನ ಕಲಬುರಗಿಯಲ್ಲಿ ಐಟಿ-ಬಿಟಿ ಕಂಪನಿಗಳು ಯಾಕೆ ಸ್ಥಾಪನೆಯಾಗಿಲ್ಲ ಎಂಬುದನ್ನು ಪರಿಶೀಲಿಸಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ತಿರುಗೇಟು ನೀಡಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ವಿಜಯೇಂದ್ರ, ಕರಾವಳಿಯ ಮಣ್ಣಿನ ಗುಣ, ಅಲ್ಲಿನ ಜನರ ಉದ್ಯಮಶೀಲತೆ ಹಾಗೂ ಪ್ರಗತಿಯನ್ನು ಕೀಳು ರಾಜಕೀಯದ ಕಣ್ಣಿನಿಂದ ನೋಡದೆ, ವಾಸ್ತವದ ನೆಲೆಯಲ್ಲಿ ಅವಲೋಕಿಸಬೇಕು ಎಂದು ತಿಳಿಸಿದ್ದಾರೆ.
ಕರಾವಳಿಗೆ ಕೋಮುವಾದದ ಹಣೆಪಟ್ಟಿ ಹಚ್ಚುವ ಪ್ರಯತ್ನವು ರಾಜಕೀಯ ದಿವಾಳಿತನವನ್ನು ತೋರಿಸುತ್ತದೆ ಎಂದು ಅವರು ಟೀಕಿಸಿದ್ದಾರೆ. ಕರಾವಳಿ ಕರ್ನಾಟಕವು ತನ್ನ ಸ್ವಂತ ಶಕ್ತಿಯಿಂದ ಶಿಕ್ಷಣ, ಬ್ಯಾಂಕಿಂಗ್ ಮತ್ತು ಉದ್ಯಮ ಕ್ಷೇತ್ರಗಳಲ್ಲಿ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದೆ. ಇಂತಹ ಹೆಮ್ಮೆಯ ಕರಾವಳಿ ಜಿಲ್ಲೆಗಳ ಬಗ್ಗೆ ಅನಗತ್ಯ ಹೇಳಿಕೆ ನೀಡಿ ಬಂಡವಾಳ ಹೂಡಿಕೆದಾರರಲ್ಲಿ ಭೀತಿ ಮೂಡಿಸುವುದು ದುರದೃಷ್ಟಕರ ಎಂದು ಹೇಳಿದರು.
ರಾಜ್ಯದ ಹಿತ ಕಾಯಬೇಕಾದ ಐಟಿ-ಬಿಟಿ ಸಚಿವರೇ ಹೂಡಿಕೆದಾರರಲ್ಲಿ ಆತಂಕ ಸೃಷ್ಟಿಸುವುದು ಕರಾವಳಿಯ ಜನತೆಗೆ ಅವಮಾನವಾಗಿದ್ದು, ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಡಲು ಜನರ ಗಮನ ಬೇರೆಡೆಗೆ ಸೆಳೆಯುವ ಪ್ರಯತ್ನ ಎಂದು ಆರೋಪಿಸಿದರು.
ಇತ್ತೀಚೆಗೆ ಸರ್ಕಾರಕ್ಕೆ ಸಲ್ಲಿಕೆಯಾದ ಡಾ. ಗೋವಿಂದರಾವ್ ಸಮಿತಿ ವರದಿ ಸರ್ಕಾರದ ವೈಫಲ್ಯಕ್ಕೆ ಕನ್ನಡಿ ಹಿಡಿದಿದೆ. ಕಲಬುರಗಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳು ಅತೀ ಹಿಂದುಳಿದ ಪಟ್ಟಿಯಲ್ಲಿ ಇದ್ದರೆ, ಕರಾವಳಿ ತನ್ನ ಸ್ವಂತ ಶಕ್ತಿಯಿಂದ ಅಭಿವೃದ್ಧಿ ಹೊಂದಿದ ವಲಯವಾಗಿ ಗುರುತಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ.
ತಮ್ಮ ತವರು ಜಿಲ್ಲೆಯ ಯುವಕರಿಗೆ ಶಿಕ್ಷಣ ಮತ್ತು ಉದ್ಯೋಗ ನೀಡಲು ವಿಫಲವಾದವರು ಕರಾವಳಿಯ ಜನರ ಉದ್ಯಮಶೀಲತೆಯನ್ನು ಅವಮಾನಿಸುವುದು ರಾಜಕೀಯ ಅಸಮರ್ಥತೆಯನ್ನು ತೋರಿಸುತ್ತದೆ ಎಂದು ವಿಜಯೇಂದ್ರ ವ್ಯಂಗ್ಯವಾಡಿದರು.
ಕಳೆದ ಹಲವು ದಶಕಗಳಿಂದ ಸಚಿವರ ಕುಟುಂಬದ ಭದ್ರಕೋಟೆಯಾಗಿರುವ ಕಲಬುರಗಿಯ ಸ್ಥಿತಿಯನ್ನು ಮೊದಲು ಪರಿಶೀಲಿಸಿ ನಂತರ ಕರಾವಳಿ ಬಗ್ಗೆ ಮಾತನಾಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಅಧಿಕಾರ ಹೊಂದಿದ್ದರೂ ಕಲಬುರಗಿಯನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗದವರು ಕರಾವಳಿಯನ್ನು ಟೀಕಿಸುವುದು ಹಾಸ್ಯಾಸ್ಪದ ಎಂದು ಹೇಳಿದರು.
ಕಲಬುರಗಿ ಇಂದಿಗೂ ಹಿಂದುಳಿದಿರುವ ಕಾರಣವೇನು? ಐಟಿ-ಬಿಟಿ ಹೂಡಿಕೆಗಳನ್ನು ಆಕರ್ಷಿಸಲು ಸಾಧ್ಯವಾಗದಿರುವುದೇಕೆ? ತವರು ಜಿಲ್ಲೆಯ ಯುವಕರು ಉದ್ಯೋಗಕ್ಕಾಗಿ ಪರದಾಡುತ್ತಿರುವಾಗ ಮತ್ತು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವಾಗ, ಮೊದಲು ಅಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ವಿಜಯೇಂದ್ರ ಸಲಹೆ ನೀಡಿದ್ದಾರೆ.
ಮೊದಲು ಮನೆಯಂಗಳದ ಕತ್ತಲೆಯನ್ನು ದೂರ ಮಾಡಿ, ನಂತರ ಬೆಳಗುತ್ತಿರುವ ಕರಾವಳಿಯ ಬಗ್ಗೆ ಮಾತನಾಡಿ. ಕರಾವಳಿಯ ಶಕ್ತಿ ಧರ್ಮ ಮತ್ತು ಕರ್ಮದ ಸಮನ್ವಯತೆಯಲ್ಲಿದೆ. ರಾಜ್ಯದಿಂದ ಹೊರಹೋಗುತ್ತಿರುವ ಕಂಪನಿಗಳನ್ನು ಉಳಿಸಿಕೊಳ್ಳುವತ್ತ ಗಮನಹರಿಸುವುದು ಮುಖ್ಯ ಎಂದು ವಿಜಯೇಂದ್ರ ವ್ಯಂಗ್ಯಭರಿತವಾಗಿ ತಿಳಿಸಿದ್ದಾರೆ.

