ಬರೋಬ್ಬರಿ 11 ವರ್ಷಗಳ ನಂತರ 140 ಕೋಟಿ ಭಾರತೀಯರ ಕನಸು ನನಸಾಗಿದೆ. 9ನೇ ಆವೃತ್ತಿಯ ಟಿ20 ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 7 ರನ್ಗಳಿಂದ ಮಣಿಸಿದ ಟೀಂ ಇಂಡಿಯಾ ದಾಖಲೆಯ 2ನೇ ಬಾರಿಗೆ ಟಿ20 ವಿಶ್ವಕಪ್ ಎತ್ತಿಹಿಡಿದಿದೆ. ಈ ಮೂಲಕ 17 ವರ್ಷಗಳ ನಂತರ ಮತ್ತೊಮ್ಮೆ ಟಿ20 ಚಾಂಪಿಯನ್ ಆಗುವಲ್ಲಿ ಯಶಸ್ವಿಯಾಗಿದೆ.
ವಾಸ್ತವವಾಗಿ 2007 ರಲ್ಲಿ ನಡೆದಿದ್ದ ಟಿ20 ವಿಶ್ವಕಪ್ನ ಚೊಚ್ಚಲ ಆವೃತ್ತಿಯಲ್ಲಿ ಟೀಂ ಇಂಡಿಯಾ ಎಂಎಸ್ ಧೋನಿ ನಾಯಕಯತ್ವದಲ್ಲಿ ಟಿ20 ವಿಶ್ವಕಪ್ ಗೆದ್ದುಕೊಂಡಿತ್ತು. ಆ ಬಳಿಕ ತಂಡ 2016 ರಲ್ಲಿ ಮತ್ತೊಮ್ಮೆ ಫೈನಲ್ಗೇರಿತ್ತಾದರೂ, ಚಾಂಪಿಯನ್ ಆಗುವಲ್ಲಿ ಎಡವಿತ್ತು. ಆದರೆ ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಅಜೇಯ ತಂಡವಾಗಿ ಫೈನಲ್ಗೆ ಕಾಲಿಟ್ಟಿದ್ದ ಟೀಂ ಇಂಡಿಯಾ ಟಿ20 ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರೊಂದಿಗೆ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ಗೆ ಗೆಲುವಿನ ಬೀಳ್ಕೊಡುಗೆ ನೀಡಿದೆ.

ಟಿ20 ಗೆ ಕೊಹ್ಲಿ – ರೋಹಿತ್ ಶರ್ಮಾ ವಿದಾಯ
ಭಾರತ ಈ ಹಿಂದೆ 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದಿತ್ತು. ಅದೇ ಸಮಯದಲ್ಲಿ ಭಾರತ 17 ವರ್ಷಗಳ ನಂತರ ಟಿ20 ವಿಶ್ವಕಪ್ ಗೆದ್ದ ಸಾಧನೆ ಮಾಡಿದೆ. ಆದರೆ ಗೆಲುವಿನ ಖುಷಿಯಲ್ಲಿ ಟೀಂ ಇಂಡಿಯಾಕ್ಕೆ ಆಘಾತ ಎದುರಾಗಿದೆ. ತಂಡದ ಮಾಜಿ ನಾಯಕ, ರನ್ ಮಷಿನ್ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ಕೊಹ್ಲಿ, ತಮ್ಮ ನಿವೃತ್ತಿಯ ಬಗ್ಗೆ ಅಧಿಕೃತ ಘೋಷಣೆ ಮಾಡಿದರು.‘ಇದು ನನ್ನ ಕೊನೆಯ ಟಿ20 ವಿಶ್ವಕಪ್ ಆಗಿದ್ದು, ಇದನ್ನು ಗೆಲುವಿನೊಂದಿಗೆ ಅಂತ್ಯಗೊಳಿಸಲು ಬಯಸಿದ್ದೇನೆ ಎಂದರು. ಆ ನಂತರ ಕೊಹ್ಲಿ ಇದೇ ಫೈನಲ್ ತನ್ನ ಕೊನೆಯ ಟಿ20 ಅಂತರಾಷ್ಟ್ರೀಯ ಪಂದ್ಯ ಎಂಬುದನ್ನು ಖಚಿತಪಡಿಸಿದರು.

ಇದು ತನ್ನ ಕೊನೆಯ ಟಿ20 ವಿಶ್ವಕಪ್ ಎಂಬುದು ಬಹಿರಂಗ ರಹಸ್ಯ ಎಂದ ಕೊಹ್ಲಿ, ಇದೀಗ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಯುವ ಪೀಳಿಗೆಯ ಮೇಲಿದೆ ಎಂದು ಹೇಳಿದರು. ಬಳಿಕ ಈ ಯಶಸ್ಸಿಗೆ ದೇವರಿಗೆ ಕೃತಜ್ಞತೆ ಸಲ್ಲಿಸಿದ ಕೊಹ್ಲಿ, ನಾಯಕ ರೋಹಿತ್ ಶರ್ಮಾ ಅವರನ್ನು ಹೊಗಳಿದರು ಮತ್ತು ಇದು ಅವರ 9 ನೇ ಟಿ20 ವಿಶ್ವಕಪ್ ಮತ್ತು ಅವರು ಅದಕ್ಕೆ ಅರ್ಹರು ಎಂದು ಹೇಳಿದರು.

ಇನ್ನು ವಿಶ್ವಕಪ್ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ರೋಹಿತ್ ಶರ್ಮಾ, ನಾನು ಟಿ20 ಪಂದ್ಯದೊಂದಿಗೆ ಭಾರತದ ಪರ ವೃತ್ತಿಜೀವನ ಆರಂಭಿಸಿದ್ದೆ. ಇದೀಗ ಟಿ20 ಅಂತಾರಾಷ್ಟ್ರೀಯ ಕೆರಿಯರ್ಗೆ ವಿದಾಯ ಹೇಳಲು ಇದಕ್ಕಿಂತ ಉತ್ತಮ ಸಮಯವಿಲ್ಲ. ಹೀಗಾಗಿ ಈ ಸ್ವರೂಪದ ಕ್ರಿಕೆಟ್ಗೆ ವಿದಾಯ ಹೇಳುತ್ತಿರುವುದಾಗಿ ರೋಹಿತ್ ಶರ್ಮಾ ತಿಳಿಸಿದ್ದಾರೆ. ಇದೀಗ ವಿಶ್ವಕಪ್ ಗೆಲುವಿನೊಂದಿಗೆ ಇಬ್ಬರು ದಿಗ್ಗಜರು ಜೊತೆಯಾಗಿ ಟಿ20 ಅಂತಾರಾಷ್ಟ್ರೀಯ ಕೆರಿಯರ್ ಅಂತ್ಯಗೊಳಿಸಿದ್ದಾರೆ. ಹೀಗಾಗಿ ಮುಂಬರುವ ದಿನಗಳಲ್ಲಿ ಭಾರತ ಟಿ20 ತಂಡದಲ್ಲಿ ರೋಹಿತ್ ಶರ್ಮಾ (Rohit Sharma) ಹಾಗೂ ವಿರಾಟ್ ಕೊಹ್ಲಿ (Virat Kohli) ಕಾಣಿಸಿಕೊಳ್ಳುವುದಿಲ್ಲ.

ಅದು 10 ವರ್ಷದ ಕನಸು. ಈ ಹತ್ತು ವರ್ಷಗಳಲ್ಲಿ ಐಸಿಸಿ ನಡೆಸುವ ಟೂರ್ನಿಯ ಬರೋಬ್ಬರಿ ಐದು ಫೈನಲ್ನಲ್ಲಿ ಭಾರತ ಸೋತಿತ್ತು. ಆದ್ರೆ ಈ ಬಾರಿ ಛಲ ಬಿಡದೇ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನ ಭಾರತ ಬಗ್ಗು ಬಡಿದಿದೆ. ಸತತವಾಗಿ ಎದುರಾಗುತ್ತಿರುವ ಸೋಲನ್ನು ಅರಗಿಸಿಕೊಂಡಿದ್ದ ಅಭಿಮಾನಿಗಳು ನಿನ್ನೆ ಬ್ಲ್ಯೂ ಬಾಯ್ಸ್ ಟ್ರೋಫಿ ಎತ್ತಿ ಹಿಡಿಯುತ್ತಿದ್ದಂತೆ ಬೀದಿಗೆ ಬಂದು ಮುಗಿಲು ಕಿತ್ತಿಹೋಗುವಂತೆ ಸಂಭ್ರಮಾಚರಿಸಿದ್ರು.

ಬೆಂಗಳೂರಿನಲ್ಲಂತೂ ಬೀದಿ ಬೀದಿಯಲ್ಲೂ ಗೆಲುವಿನ ಸಂಭ್ರಮ ಮುಗಿಲುಮುಟ್ಟಿತ್ತು. ಪ್ರಮುಖ ಏರಿಯಾಗಳಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ, ಭಾರತ, ಕೊಹ್ಲಿ, ರೋಹಿತ್ ಪರ ಘೋಷಣೆ ಕೂಗಿದ್ರು. ಕೋರಮಂಗಲದಲ್ಲಿ ರಸ್ತೆಯನ್ನೇ ಬಂದ್ ಮಾಡಿ ಸಂಭ್ರಮಾಚರಿಸಿದ್ರು. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳು ಇಂಡಿಯಾ. ಇಂಡಿಯಾ ಅಂತಾ ಘೋಷಣೆ ಕೂಗಿ ಡ್ಯಾನ್ಸ್ ಮಾಡಿದ್ರು. ಕೋರಮಂಗಲದ ಪಬ್ ಒಂದರಲ್ಲಿ ಕೊನೆಯ ಓವರ್ನ ರೋಚಕತೆ ಸವಿದ ಅಭಿಮಾನಿಗಳು ಭಾರತ ಗೆಲುವಿನ ನಗಾರಿ ಬಾರಿಸುತ್ತಿದ್ದಂತೆ ಚಾವಣಿ ಕಿತ್ತೋಗುವಂತೆ ಜೈಕಾರ ಕೂಗಿದ್ರು. ಬಳಿಕ ಡಿಜೆ ಹಾಡಿಗೆ ಭರ್ಜರಿ ಡ್ಯಾನ್ಸ್ ಮಾಡಿ ಗೆಲುವಿನ ಸಂಭ್ರಮವನ್ನ ಪರಸ್ಪರ ಹಂಚಿಕೊಂಡ್ರು.

ಇದಲ್ಲದೆ ರಾಜ್ಯದಲ್ಲಿ ಸಂತೋಷ ಮನೆ ಮಾಡಿದ್ದು, ಎಲ್ಲೆಡೆ ಪಟಾಕಿ ಸಿಡಿಸಿ ಜೈಕಾರ ಕೂಗಿ ಸಂಭ್ರಮಿಸಿದ್ದಾರೆ. ಜೊತೆಗೆ ಸಿಹಿ ಹಂಚಿ, ಭಾರತ, ಕೊಹ್ಲಿ, ರೋಹಿತ್ ಪರ ಘೋಷಣೆ ಕೂಗಿದ್ರು. ಈ ರೀತಿ ರಾಜ್ಯದಲ್ಲಿ ವಿವಿಧ ಜೆಲ್ಲೆಗಳಲ್ಲಿ ಭಾರತದ ಗೆಲ್ಲುವನ್ನ ಆಚರಿಸಲಾಯಿತು.

