ಬೆಂಗಳೂರು : ಭಾರತೀಯರಿಗೆ ಗೋವು ತಾಯಿ ಸಮಾನ. ಗೋವು ನಮಗೆ ಅನ್ನ ಹಾಕುತ್ತೆ, ಗೊಬ್ಬರ ಕೊಡುತ್ತೆ, ಔಷಧಿ ಕೊಡುತ್ತದೆ. ರೈತರ ಬೆನ್ನೆಲುಬು ಅದು. ಅದರ ಕೆಚ್ಚಲು ಕೊಯ್ದ ನೀಚರೇ ಮೂಖ ಪ್ರಾಣಿಯ ಆ ರೋಧನೆ ಖಂಡಿತ ರಾಜ್ಯ ಸರ್ಕಾರಕ್ಕೆ ತಟ್ಟದೇ ಬಿಡುವುದಿಲ್ಲ ಎಂದು ಮಾಜಿ ಪಶು ಸಂಗೋಪನಾ ಸಚಿವ ಔರಾದ್ ಶಾಸಕ ಪ್ರಭು ಚವ್ಹಾಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಮನುಷ್ಯರನ್ನು ಕೊಲ್ಲುವುದನ್ನು ನೋಡಿದ್ದೇವೆ. ಕಾಮಧೇನು, ಮಹಾಲಕ್ಷ್ಮೀ ಎಂದು ಪೂಜಿಸುಜಿವ ಗೋವುಗಳ ಕೆಚ್ಚಲು ಕೊಯ್ದಿರುವುದು ಹೇಯ ಕೃತ್ಯ ಎಂದು ಖಂಡಿಸಿದ್ದಾರೆ.
ರಾಜ್ಯದಲ್ಲಿ ಹಿಂದೂಗಳಿಗೆ ಮೊದಲೇ ಸುರಕ್ಷತೆ ಇಲ್ಲ. ಇದೀಗ ಗೋವುಗಳಿಗೂ ಕೂಡ ಸುರಕ್ಷತೆ ಇಲ್ಲದಂತಾಗಿದೆ. ಗೋವುಗಳ ರಕ್ಷಣೆಗಾಗಿ ದೇಶದಾದ್ಯಂತ ಸಂಚರಿಸಿ ಜಾರಿಗೆ ತಂದಿದ್ದ ಗೋಹತ್ಯೆ ನಿಷೇಧ ಕಾಯ್ದೆಯನ್ನು ತಿರುಚಿ, ಗೋಹತ್ಯೆ ಕಾಯ್ದೆಯನ್ನು ಜಾರಿಗೆ ತಂದಿರುವುದೇ ಕಾಂಗ್ರೆಸ್ ಸಾಧನೆ ಎಂದು ಪ್ರಭು ಚವ್ಹಾಣ್ ಲೇವಡಿ ಮಾಡಿದ್ದಾರೆ.
ಗೋಮಾತೆಯ ಕೆಚ್ಚಲು ಕೊಯ್ಯುವ ಕೆಲಸ ಮಾಡಿರುವುದು ನೀಚತನದ ಪರಮಾವಧಿ. ಇದು ಅವರ ಮನಸ್ಥಿತಿಯನ್ನು ತೋರ್ಪಡಿಸುತ್ತದೆ. ಗೋವಿನ ಮೇಲೆ ಸಿಟ್ಟು ತೀರಿಸಿಕೊಳ್ಳುವ ಮಟ್ಟಿಗೆ ಹೋಗಿದ್ದಾರೆ ಎಂದರೆ ಅವರಲ್ಲಿ ಎಷ್ಟು ಅಸಹಿಷ್ಣುತೆ ಇದೆ ಎಂದು ಗೊತ್ತಾಗುತ್ತದೆ ಎಂದು ಪ್ರಭು ಚವ್ಹಾಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದೂಗಳ ಪಾಲಿನ ಪವಿತ್ರ ಹಬ್ಬ ಸಂಕ್ರಾಂತಿ. ಈ ಹಬ್ಬದಲ್ಲಿ ಗೋವುಗಳನ್ನು ಪೂಜಿಸುತ್ತೇವೆ. ಆದರೆ ಸಂಕ್ರಾಂತಿ ಹಬ್ಬ ಆಚರಣೆಗೂ ಮುನ್ನವೇ ಗೋವುಗಳ ಕೆಚ್ಚಲು ಕತ್ತರಿಸಿದ ಪಾಪಿಗಳನ್ನು ರಾಜ್ಯ ಸರಕಾರ ಈ ಕೂಡಲೇ ಗಲ್ಲಿಗೇರಿಸಬೇಕು. ಗೋವುಗಳ ಕೆಚ್ಚಲು ಕತ್ತರಿಸಿರುವುದರ ಹಿಂದೆ ಮತಾಂಧ ಶಕ್ತಿಗಳು ಕೆಲಸ ಮಾಡಿವೆ. ಈ ಹಿಂದೆ ಗೋವುಗಳನ್ನು ಕಡಿದು ಅದರ ಬಿಡಿಭಾಗಗಳನ್ನು ಧರ್ಮಸ್ಥಳದ ಶ್ರೀ ಮಂಜನಾಥಸ್ವಾಮಿ ಅಭಿಷೇಕಕ್ಕೆ ಬಳಸುವ ನೇತ್ರಾವತಿ ನದಿ ನೀರಿಗೆ ಹಾಕುವ ಮೂಲಕ ಹಿಂಧೂಗಳಿಗೆ ಸವಾಲಾಗುತ್ತಿದ್ದಾರೆ. ಇಂತವರನ್ನು ಪತ್ತೆ ಹಚ್ಚಿ ಕೂಡಲೇ ಬಂಧಿಸಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದು ಒತ್ತಾಯಿಸಿದ್ದಾರೆ ಪ್ರಭು ಚವ್ಹಾಣ್.
ಚಾಮರಾಜಪೇಟೆ ಪಶು ಆಸ್ಪತ್ರೆ ಜಾಗವನ್ನು ವಕ್ಫ್ಗೆ ಸೇರಿಸಲು ಹೊರಟಿದ್ದರ ವಿರುದ್ಧ ಹಸುವಿನ ಮಾಲೀಕರು ಹಾಗೂ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಹಸುಗಳನ್ನೇ ಗುರಿ ಮಾಡಿ ಈ ಕೃತ್ಯ ಎಸಗಿದ್ದಾರೆ. ಗೋವುಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವು ಎಂಬುದಕ್ಕೆ ಕಾಲು ಕಟ್ ಮಾಡಿದ್ದಾರೆ. ಕೆಚ್ಚಲಿಗೆ ಹಾನಿ ಮಾಡಿದ್ದಾರೆ. ಈ ಅಮಾನುಷ ಘಟನೆಯನ್ನ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಇದೇ ವೇಳೆ ಆಗ್ರಹಿಸಿದ್ದಾರೆ.
ಹಸುಗಳ ಕೆಚ್ಚಲು ಕೊಯ್ದ ಘಟನೆ ನಾಗರೀಕ ಸಮಾಜ ತಲೆತಗ್ಗಿಸುವಂತಾಗಿದೆ. ಇದು ರಾಕ್ಷಸಿ ಕೃತ್ಯ. ಕಾಂಗ್ರೆಸ್ ಆಡಳಿತ ಎಷ್ಟರ ಮಟ್ಟಿಗಿದೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಶಾಸಕ ಪ್ರಭು ಬಿ.ಚವ್ಹಾಣ್ ಕಿಡಿ ಕಾರಿದ್ದಾರೆ.

