ನವದೆಹಲಿ : ಲೋಕಸಭೆಯಲ್ಲಿ ಸತತ 12 ಗಂಟೆಗಳ ಕಾಲ ನಡೆದ ಚರ್ಚೆ ಬಳಿಕ ವಕ್ಫ್ ತಿದ್ದುಪಡಿ ಮಸೂದೆಗೆ ಅಂಗೀಕಾರ ದೊರೆಯಿತು. ಇಂದು ರಾಜ್ಯಸಭೆಯಲ್ಲಿ ಮಸೂದೆ ಮಂಡನೆಯಾಗಲಿದೆ. ಮಸೂದೆಯ ಪರವಾಗಿ 288 ಮತಗಳು ಚಲಾವಣೆಗೊಂಡರೆ, ವಿರುದ್ಧವಾಗಿ 232 ಮತಗಳು ಚಲಾವಣೆಯಾದವು.
ಸದನವು ವಿರೋಧ ಪಕ್ಷದ ಎಲ್ಲಾ ತಿದ್ದುಪಡಿಗಳನ್ನು ಧ್ವನಿ ಮತದ ಮೂಲಕ ತಿರಸ್ಕರಿಸಿತು. ವಿರೋಧ ಪಕ್ಷದ ಸಂಸದ ಎನ್.ಕೆ. ಪ್ರೇಮಚಂದ್ರನ್ ಅವರ ತಿದ್ದುಪಡಿ ಪ್ರಸ್ತಾವನೆಯ ಮೇಲೆ ಬೆಳಗಿನ ಜಾವ 1.15 ಕ್ಕೆ ಮತದಾನ ನಡೆಯಿತು.
ಇದನ್ನು 231 ವಿರುದ್ಧ 288 ಮತಗಳಿಂದ ತಿರಸ್ಕರಿಸಲಾಯಿತು. ಮಂಡಳಿಯಲ್ಲಿ ಮುಸ್ಲಿಮೇತರ ಸದಸ್ಯರು ಇರಬಾರದು ಎಂಬ ಪ್ರಸ್ತಾವನೆ ಇತ್ತು. ಲೋಕಸಭೆಯಲ್ಲಿ ಈ ಮಸೂದೆಯ ಬಗ್ಗೆ 12 ಗಂಟೆಗಳಿಗೂ ಹೆಚ್ಚು ಕಾಲ ಚರ್ಚೆ ನಡೆಯಿತು. ಈಗ ಮಸೂದೆಯನ್ನು ಇಂದು ಅಂದರೆ ಗುರುವಾರ ರಾಜ್ಯಸಭೆಯಲ್ಲಿ ಮಂಡಿಸಲಾಗುವುದು.
ಇನ್ನು ಸಂಸತ್ತಿನ ಕೆಳಮೆನೆಯಲ್ಲಿ ಎಲೆಕ್ಟ್ರಾನಿಕ್ ಮತದಾನದ ಮೂಲಕ ನಡೆದ ಪ್ರಕ್ರಿಯೆಯಲ್ಲಿ ಮಸೂದೆಗೆ 288 ಮತಗಳು ಒಲಿದವು, ಆದರೆ ಇನ್ನೊಂದೆಡೆ 232 ಸದಸ್ಯರು ವಿರೋಧಿಸಿದರು. ಇದರೊಂದಿಗೆ, ಅಸಾದುದ್ದೀನ್ ಓವೈಸಿ ಮತ್ತು ಗೌರವ್ ಗೊಗೊಯ್ ಅವರ ತಿದ್ದುಪಡಿಗಳನ್ನು ತಿರಸ್ಕರಿಸಲಾಯಿತು. ಜೊತೆಗೆ ಕೆ.ಸಿ. ವೇಣುಗೋಪಾಲ್ ಮತ್ತು ಸೌಗತ ರಾಯ್ ಅವರು ಮಸೂದೆಯಲ್ಲಿ ಒತ್ತಾಯಿಸಿದ ತಿದ್ದುಪಡಿಗಳು ಸಹ ಸ್ವೀಕರಿಸಲಾಗಿಲ್ಲ.
ಇನ್ನು ಮಸೂದೆ ಮಂಡಿಸಿದ ಕಿರಣ್ ರಿಜಿಜು ಅವರು, ʼʼಮಸೂದೆಯಿಂದ ದೇಶದಲ್ಲಿರುವ ಯಾವುದೇ ಮಸೀದಿಗೆ ತೊಂದರೆಯುಂಟಾಗುವುದಿಲ್ಲ. ಮಸೂದೆ ಮಂಡನೆಗೆ ಆಗತ್ಯವಾದ ಎಲ್ಲ ಕಾನೂನು ಕ್ರಮವನ್ನು ನಾವು ಅನುಸರಿಸಿದ್ದೇವೆ. ವಕ್ಫ್ ಮಸೂದೆಯನ್ನು ಸಂಸತ್ ಅನುಮೋದಿಸಿದೆʼʼ ಎಂದರು.
ʼʼ25 ರಾಜ್ಯಗಳ ವಕ್ಫ್ ಬೋರ್ಡ್ ಅಭಿಪ್ರಾಯವನ್ನು ನಾವು ಸಂಗ್ರಹಿಸಿದ್ದೇವೆ. ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಯ ಎರಡೂ ಸದನಗಳ ಸದಸ್ಯರನ್ನು ನಾನು ಅಭಿನಂದಿಸಲು ಬಯಸುತ್ತೇನೆ. ಒಟ್ಟಾರೆಯಾಗಿ, 25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಕ್ಫ್ ಮಂಡಳಿಗಳ 284 ನಿಯೋಗಗಳು ಜೆಪಿಸಿಯಲ್ಲಿ ತಮ್ಮ ವಾದಗಳನ್ನು ಮಂಡಿಸಿದ್ದವು. ಅವುಗಳನ್ನು ಪರಿಗಣಿಸಿಯೇ ಮಸೂದೆಯನ್ನು ರಚಿಸಲಾಗಿದೆʼʼ ಎಂದು ತಿಳಿಸಿದರು.
ಬೆಳಿಗ್ಗೆ 11 ಗಂಟೆಗೆ ಆರಂಭವಾದ ಸದನದ ಕಲಾಪದಲ್ಲಿ ಆಡಳಿತ ಪಕ್ಷವಾದ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಈ ಮಸೂದೆಯನ್ನು “ವಕ್ಫ್ ಆಸ್ತಿಗಳ ನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿತನ ತರುವ ಒಂದು ಕ್ರಾಂತಿಕಾರಿ ಹೆಜ್ಜೆ” ಎಂದು ಬಣ್ಣಿಸಿದರೆ, ವಿರೋಧ ಪಕ್ಷಗಳಾದ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ಸದಸ್ಯರು ಇದನ್ನು “ಮುಸ್ಲಿಂ ಸಮುದಾಯದ ಧಾರ್ಮಿಕ ಸ್ವಾಯತ್ತತೆಯ ಮೇಲಿನ ದಾಳಿ” ಎಂದು ಟೀಕಿಸಿದರು.
ಮುಂದಿನ ಪರಿಶೀಲನೆಗಾಗಿ ರಾಜ್ಯಸಭೆಗೆ ವರ್ಗ
ಜೊತೆಗೆ ಮಸೂದೆಯ ಮುಖ್ಯ ಅಂಶಗಳಾದ ವಕ್ಫ್ ಆಸ್ತಿಗಳ ಸರ್ವೆಗೆ ಜಿಲ್ಲಾಧಿಕಾರಿಗಳ ನೇಮಕ, ಆಸ್ತಿ ನೋಂದಣಿಗೆ ಆರು ತಿಂಗಳ ಕಾಲಾವಕಾಶ, ಮತ್ತು ಸರ್ಕಾರಿ ಆಸ್ತಿಗಳನ್ನು ವಕ್ಫ್ ಆಸ್ತಿ ಎಂದು ಪರಿಗಣಿಸದಿರುವ ನಿಬಂಧನೆಗಳು ಚರ್ಚೆಯ ಕೇಂದ್ರಬಿಂದುವಾಗಿದ್ದವು. ಇನ್ನು ಸ್ಪೀಕರ್ ಓಂ ಬಿರ್ಲಾ ಅವರು ಮಸೂದೆಯ ಅಂಗೀಕಾರವನ್ನು ಘೋಷಿಸಿ, ರಾಜ್ಯಸಭೆಗೆ ಮುಂದಿನ ಪರಿಶೀಲನೆಗಾಗಿ ಕಳುಹಿಸಿದರು.

