ಕೇರಳ: ವಯನಾಡಿನಲ್ಲಿ ಭಾರೀ ಭೂಕುಸಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸೆಲೆಬ್ರೆಟಿಗಳು ಸಹಾಯ ಹಸ್ತ ಚಾಚಿದ್ದಾರೆ. ಭೀಕರ ದುರಂತದಲ್ಲಿ ತಮ್ಮವರನ್ನು ಕಳೆದುಕೊಂಡು ಕಂಗಾಲಾಗಿರುವ ಸಂತ್ರಸ್ತರಿಗೆ ಇದೀಗ ಟಾಲಿವುಡ್, ಕಾಲಿವುಡ್ ಚಿತ್ರರಂಗದ ನಟ-ನಟಿಯರು ಧನ ಸಹಾಯ ಮಾಡಿದ್ದಾರೆ. ಕೇರಳದ ಸಿಎಂ ರಿಲೀಫ್ ಫಂಡ್ಗೆ ಹಣ ಕಳಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಘೋರ ದುರಂತದಲ್ಲಿ ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ ತಮಿಳು ನಟ ಸೂರ್ಯ ಹಾಗೂ ಜ್ಯೋತಿಕಾ ದಂಪತಿ 50 ಲಕ್ಷ ರೂ. ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ. ನಟ ಕಾರ್ತಿ ಕೂಡ 50 ಲಕ್ಷ ಕೊಟ್ಟಿದ್ದಾರೆ. ವಿಕ್ರಮ್ 20 ಲಕ್ಷ ರೂ. ನೀಡಿದರೆ, ನಟಿ ರಶ್ಮಿಕಾ ಮಂದಣ್ಣ 10 ಲಕ್ಷ ರೂ. ಮೊತ್ತವನ್ನು ಸಿಎಂ ರಿಲೀಫ್ ಫಂಡ್ಗೆ ದೇಣಿಗೆಯಾಗಿ ನೀಡಿದ್ದಾರೆ.

ವಯನಾಡಿನಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದ್ದು ಈವರೆಗೆ 300 ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ನೂರಾರು ಮಂದಿ ಇನ್ನೂ ಮಣ್ಣು ಹಾಗೂ ಅವಷೇಶಗಳಡಿ ಸಿಲುಕಿರುವ ಶಂಕೆ ಇದೆ. ಈಗಾಗಲೇ 1000ಕ್ಕೂ ಹೆಚ್ಚು ಸಂತ್ರಸ್ತರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿರುವ ರಕ್ಷಣಾ ಪಡೆ, ಇನ್ನು ಹಲವರಿಗಾಗಿ ಶೋಧ ಕಾರ್ಯ ಮುಂದುವರೆಸಿದೆ.

