ನವದೆಹಲಿ, ಡಿ.16 : ದೆಹಲಿ–ಆಗ್ರಾ ಎಕ್ಸ್ಪ್ರೆಸ್ವೇಯಲ್ಲಿ ದಟ್ಟ ಮಂಜು ಮತ್ತು ಹೊಗೆ (Smog) ಆವರಿಸಿದ್ದ ಪರಿಣಾಮ ಹಲವು ವಾಹನಗಳು ಪರಸ್ಪರ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಘಟನೆ ಮಂಗಳವಾರ ಮುಂಜಾನೆ ಸಂಭವಿಸಿದೆ. ಈ ಅಪಘಾತದಲ್ಲಿ ಹಲವರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯಾಚರಣೆ ತೀವ್ರವಾಗಿ ಮುಂದುವರಿದಿದೆ. ಸಾವುನೋವುಗಳ ನಿಖರ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಈ ಚಳಿಗಾಲದಲ್ಲಿ ಸಂಭವಿಸಿದ ಅತ್ಯಂತ ಭೀಕರ ಮಂಜಿನ ಅಪಘಾತಗಳಲ್ಲಿ ಇದೊಂದು ಎಂದು ಪೊಲೀಸರು ತಿಳಿಸಿದ್ದಾರೆ. ಹಲವಾರು ಬಸ್ಗಳು ಹಾಗೂ ಕಾರುಗಳು ಪರಸ್ಪರ ಡಿಕ್ಕಿ ಹೊಡೆದು ಬೆಂಕಿಗೆ ಆಹುತಿಯಾಗಿದ್ದು, ಕೆಲ ಬಸ್ಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ. ಜನನಿಬಿಡ ಪ್ರದೇಶ ಕೆಲಕಾಲ ಭೀಕರ ಕಾಡ್ಗಿಚ್ಚಿನಂತೆ ಪರಿವರ್ತನೆಯಾಗಿ ಆತಂಕದ ವಾತಾವರಣ ನಿರ್ಮಾಣವಾಯಿತು.
ಮಥುರಾ ಜಿಲ್ಲೆಯ ಯಮುನಾ ಎಕ್ಸ್ಪ್ರೆಸ್ವೇಯ ಆಗ್ರಾ–ನೋಯ್ಡಾ ಕ್ಯಾರೇಜ್ವೇಯಲ್ಲಿ ಬೆಳಗಿನ ಜಾವ ಸುಮಾರು 2 ಗಂಟೆಗೆ ಅಪಘಾತ ಸಂಭವಿಸಿದೆ. ದಟ್ಟ ಮಂಜಿನ ನಡುವೆ ಆರು ಬಸ್ಗಳು ಹಾಗೂ ಎರಡು ಕಾರುಗಳು ಡಿಕ್ಕಿ ಹೊಡೆದಿದ್ದು, ಚಾಲಕರಿಗೆ ಪ್ರತಿಕ್ರಿಯಿಸಲು ಸಮಯವೇ ಸಿಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದ ತೀವ್ರತೆಯಿಂದಾಗಿ ಎಲ್ಲಾ ವಾಹನಗಳು ಕ್ಷಣಾರ್ಧದಲ್ಲಿ ಬೆಂಕಿಗೆ ಆಹುತಿಯಾದವು. ಹಲವಾರು ಪ್ರಯಾಣಿಕರು ವಾಹನಗಳೊಳಗೆ ಸಿಲುಕಿಕೊಂಡರು. ಒಂದು ವಾಹನದಿಂದ ಮತ್ತೊಂದಕ್ಕೆ ಬೆಂಕಿ ವೇಗವಾಗಿ ಹರಡಿದ ಪರಿಣಾಮ ಸ್ಥಳದಲ್ಲಿ ಗೊಂದಲ ಹಾಗೂ ಅವ್ಯವಸ್ಥೆ ಉಂಟಾಯಿತು. ಪ್ರಯಾಣಿಕರ ಕಿರುಚಾಟಗಳು ಸಹಾಯಕ್ಕಾಗಿ ಕೇಳಿಬಂದವು.
ಘಟನೆಯ ಮಾಹಿತಿ ಪಡೆದ ತಕ್ಷಣ ಅಗ್ನಿಶಾಮಕ ದಳದ ವಾಹನಗಳು, ಪೊಲೀಸ್ ತಂಡಗಳು ಹಾಗೂ ಆಂಬ್ಯುಲೆನ್ಸ್ಗಳು ಸ್ಥಳಕ್ಕೆ ಧಾವಿಸಿವೆ. ಬೆಂಕಿ ನಂದಿಸುವ ಹಾಗೂ ಪರಿಹಾರ–ರಕ್ಷಣಾ ಕಾರ್ಯಾಚರಣೆಗಳು ಇನ್ನೂ ಮುಂದುವರಿದಿದ್ದು, ಗಾಯಾಳುಗಳನ್ನು ಆಂಬ್ಯುಲೆನ್ಸ್ಗಳ ಮೂಲಕ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗುತ್ತಿದೆ.
ದಟ್ಟ ಹೊಗೆ- ಮಂಜು, ದಿಲ್ಲಿಯಲ್ಲಿ 61 ವಿಮಾನ ಹಾರಾಟ ರದ್ದು, 400 ವಿಮಾನ ವಿಳಂಬ
ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್ಸಿಆರ್) ಅನ್ನು ಸೋಮವಾರ ಹೊಗೆ- ಮಂಜಿನ (Delhi smog) ದಟ್ಟ ಪದರ ಆವರಿಸಿದೆ. ಇದರ ಪರಿಣಾಮವಾಗಿ 61 ವಿಮಾನಗಳನ್ನು ರದ್ದುಗೊಳಿಸಲಾಗಿದೆ (Flights cancelled) ಮತ್ತು 400ಕ್ಕೂ ಹೆಚ್ಚು ವಿಮಾನಗಳು ವಿಳಂಬವಾಗಿವೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (ಸಿಪಿಸಿಬಿ) ಸಮೀರ್ ಆ್ಯಪ್ನ ಅಂಕಿಅಂಶದ ಆಧಾರದ ಮೇಲೆ ಬೆಳಿಗ್ಗೆ 7:05 ಕ್ಕೆ, ರಾಷ್ಟ್ರ ರಾಜಧಾನಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 454 ರ ‘ತೀವ್ರ’ ಮಟ್ಟದಲ್ಲಿ ದಾಖಲಾಗಿದೆ. ಇದು ಭಾನುವಾರದ 461 ಎಕ್ಯೂಐ ಅನ್ನು ಅನುಸರಿಸಿತು, ಇದು ಡಿಸೆಂಬರ್ನಲ್ಲಿ ದಾಖಲೆಯ ಎರಡನೇ ಕೆಟ್ಟ ವಾಯು ಗುಣಮಟ್ಟದ ದಿನವಾಗಿದೆ.

