ಬೆಂಗಳೂರು: 15 ದಿನದೊಳಗೆ ನಗರದ ರಸ್ತೆಗುಂಡಿಗಳನ್ನು ಮುಚ್ಚುವ ಕೆಲಸವಾಗಬೇಕು. ರಸ್ತೆ ಗುಂಡಿ ವಿಚಾರವಾಗಿ ಸಾರ್ವಜನಿಕರಿಂದ ಮತ್ತೆ ದೂರು ಬಂದರೆ ಇದಕ್ಕೆ ಜವಾಬ್ದಾರಿಯಾಗಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ. ಎಷ್ಟು ಜನ ಅಮಾನತುಗೊಳ್ಳುತ್ತಾರೋ ಗೊತ್ತಿಲ್ಲ ಎಂದು ಬೆಂಗಳೂರು ಉಸ್ತುವಾರಿ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿರುವ ಹಿನ್ನೆಲೆ ಪಾಲಿಕೆ ಅಧಿಕಾರಿಗಳು ರಸ್ತೆಗುಂಡಿ ಮುಚ್ಚಲು ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ.
ಬಿಬಿಎಂಪಿ ಎಲ್ಲಾ ಪ್ರದೇಶಗಳಲ್ಲಿ ಒಟ್ಟು 2000 ಗುಂಡಿಗಳು ಇರಬಹುದು. ವಾರ್ಡ್ ರಸ್ತೆಗಳಲ್ಲಿ 1663 ಗುಂಡಿಗಳು, ಮುಖ್ಯ ರಸ್ತೆಯಲ್ಲಿ 280 ಗುಂಡಿಗಳು. ಇವುಗಳನ್ನು ಒಂದು ವಾರದಲ್ಲಿ ಮುಚ್ಚಬಹುದುಇವೆಲ್ಲವೂ ಆಪ್ ನಲ್ಲಿ ಸಾರ್ವಜನಿಕರು ರಿಪೋರ್ಟ್ ಮಾಡಿರು ರಸ್ತೆ ಗುಂಡಿಗಳು. ಇದಲ್ಲದೆ ಬೇರೆ ಕಡೆಯೂ ಗುಂಡಿಗಳು ಇರಬಹುದುಎಲ್ಲಾ ಕಡೆಯೂ ವಲಯ ಆಯುಕ್ತರ ನೇತೃತ್ವದಲ್ಲಿ ಗುಂಡಿಗಳನ್ಮು ಮುಚ್ಚಿಸಲಾಗುತ್ತದೆ. ರಸ್ತೆಗುಂಡಿ ಮುಚ್ಚಲು ಹಣಕಾಸಿನ ಕೊರತೆಯೂ ಇಲ್ಲ. ಈಗಾಗಲೇ ನಿಗದಿ ಮಾಡಿ ಇಡಲಾಗಿದೆ.
ಪೂರ್ವ ವಲಯ ಆಯುಕ್ತರಾದ ಸ್ನೇಹಲ್ ಮಾತನಾಡಿ, ಪೂರ್ವ ವಲಯದಲ್ಲಿ 260 ಕಿಮೀ ಮುಖ್ಯ ರಸ್ತೆ ಇದ್ದು, 2340 ಕಿ.ಮೀ ಹೆಚ್ಚು ವಾರ್ಡ್ ರಸ್ತೆ ಇವೆ. ಕಳೆದ ವರ್ಷ 2400 ರಷ್ಟು ರಸ್ತೆಗುಂಡಿ ಮುಚ್ಚಿದ್ದೇವೆ. ಈ ವರ್ಷ ವಾರ್ಡ್ ಮಟ್ಟದಲ್ಲಿ 500 ದೂರುಗಳು, ಮೇಜರ್ ರಸ್ತೆಗಳಲ್ಲಿ 533 ರಸ್ತೆಗುಂಡಿಗಳಿರುವ ದೂರು ಬಂದಿದೆ.
ಮಳೆ ಬಂದಾಗ ಸರಿಯಾಗಿ ರಸ್ತೆಗುಂಡಿ ಮುಚ್ಚಲು ಆಗಿಲ್ಲ. ಈ ವಾರದಲ್ಲಿ ಕ್ಷಿಪ್ರ ಕಾರ್ಯಾಚರಣೆ ಮಾಡಿ ರಸ್ತೆಗುಂಡಿ ಮುಚ್ಚುತ್ತಿದ್ದೇವೆ. 400 ರಿಂದ 500 ರಸ್ತೆಗುಂಡಿ ಬಗ್ಗೆ ದೂರು ಬಂದಿದ್ದು ಇದನ್ನು ಮೊದಲು ಮುಚ್ಚುತ್ತೇವೆ. ಡಿಸಿಎಂ ಡಿಕೆ ಶಿವಕುಮಾರ್ ಅವರು ಸಭೆಯಲ್ಲಿ ಜನರಿಗೆ ಉತ್ತಮ ಮೂಲಭೂತ ಸೌಕರ್ಯ ಕೊಡುವಂತೆ ಹೇಳಿದ್ದಾರೆ. ಎಲ್ಲಾ ರಸ್ತೆಗುಂಡಿಗಳನ್ನು ತುರ್ತಾಗಿ ಮುಚ್ಚಿಸಲು ಹೇಳಿದ್ದಾರೆ. ಪಾದಾಚಾರಿ ಮಾರ್ಗಗಳ ಒತ್ತುವರಿ ತೆರವು, ಒಣಗಿದ ಮರದ ಕೊಂಬೆ ತೆಗೆಯಲು ಹೇಳಿದ್ದಾರೆ. ರಸ್ತೆಗುಂಡಿ ಮುಚ್ಚದಿದ್ದರೆ ಅಧಿಕಾರಿಗಳನ್ನು ಸಸ್ಪೆಂಡ್ ಮಾಡುತ್ತೇವೆಂಬ ಎಚ್ಚರಿಕೆಯನ್ನೂ ನೀಡಿದ್ದಾರೆ. ಇದು ಒಳ್ಳೆಯ ನಿರ್ಧಾರ ಜನರ ಜೀವನ ಸುಧಾರಿಸುವ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡುತ್ತೇವೆ ಎಂದರು.

